ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಆರಂಭಿಸಲು ಸಿದ್ಧತೆ ನಡೆಸಿದ ಪ್ರವಾಸೋದ್ಯಮ ಇಲಾಖೆ
ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಉತ್ತರ ಪ್ರದೇಶ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ವರ್ಷದ ಡಿಸೆಂಬರ್ ತಿಂಗಳಿನಿಂದ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಆರಂಭವಾಗುವ ನಿರೀಕ್ಷೆಗಳಿವೆ.

ಈ ಹಿನ್ನೆಲೆಯಲ್ಲಿ ಆಗ್ರಾದಲ್ಲಿ ಹೆಲಿಪ್ಯಾಡ್ ಸಿದ್ಧವಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದ ಇತರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೆಲಿ ಪ್ಯಾಡ್ ಗಳ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿಗರು ಸೇರಿದಂತೆ ಹಲವಾರು ಪ್ರವಾಸಿಗರು ತಾಜ್ ಮಹಲ್ ವೀಕ್ಷಿಸಲು ಆಗ್ರಾಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಆಗ್ರಾಕ್ಕೆ ತೆರಳಲು ಇರುವ ಸಾರಿಗೆ ಸೌಲಭ್ಯಗಳು. ಆದರೆ ಅದೇ ಪ್ರವಾಸಿಗರು ಸೂಕ್ತ ಸಾರಿಗೆ ಸೌಲಭ್ಯಗಳು ಇಲ್ಲದ ಕಾರಣ ಇತರ ಐತಿಹಾಸಿಕ ಪ್ರವಾಸಿ ತಾಣಗಳಿಗೆ ತೆರಳಲು ನೀಡಲು ಹಿಂದೇಟು ಹಾಕುತ್ತಾರೆ.

ಅಂತಹ ಪ್ರವಾಸಿಗರಿಗೆ ಈ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯು ಸಹಕಾರಿಯಾಗಲಿದೆ. ಇನ್ನೂ ಕೆಲವು ಪ್ರವಾಸಿಗರು ಸಮಯದ ಕೊರತೆಯಿಂದಾಗಿ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯು ಈ ಸಮಸ್ಯೆಯನ್ನು ಸಹ ಬಗೆಹರಿಸಲಿದೆ.

ಹೆಲಿಕಾಪ್ಟರ್ ಸೇವೆಯಿಂದಾಗಿ ಪ್ರವಾಸಿಗರು ಒಂದೇ ದಿನ ಹಲವು ಪ್ರವಾಸಿ ತಾಣಗಳಿಗೆ ತೆರಳಬಹುದು. ಈ ಕಾರಣಕ್ಕೆ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಗೆ ಪ್ರವಾಸಿಗರಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗುವ ನಿರೀಕ್ಷೆಗಳಿವೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನು ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲು ಆಸಕ್ತಿಯುಳ್ಳ ಪ್ರಯಾಣಿಕರು ಉತ್ತಮವಾಗಿ ಸ್ವೀಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಕರೋನಾ ವೈರಸ್ ಹರಡ ಬಹುದು ಎಂಬ ಕಾರಣಕ್ಕೆ ಜನರು ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ.

ಬಸ್ ಹಾಗೂ ರೈಲುಗಳಲ್ಲಿ ಶುಚಿತ್ವ ಕಾಯ್ದು ಕೊಳ್ಳದ ಕಾರಣ ತಮಗೂ ಸೋಂಕು ತಗುಲಬಹುದು ಎಂಬುದೇ ಜನರು ಹಿಂದೇಟು ಹಾಕಲು ಪ್ರಮುಖ ಕಾರಣವಾಗಿದೆ.ಇಂತಹ ಸಂದರ್ಭದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಬಯಸುವವರಿಗೆ ಈ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯು ಸಹಕಾರಿಯಾಗಲಿದೆ.

ಕಳೆದ ವರ್ಷ ಕರೋನಾ ವೈರಸ್ನ ಮೊದಲ ಅಲೆ ಭಾರತದಲ್ಲಿ ಆರ್ಭಟಿಸಿದಾಗ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಲಾಕ್ ಡೌನ್ ಅವಧಿಯಲ್ಲಿವಾಹನಗಳ ಮಾರಾಟವು ಸಂಪೂರ್ಣವಾಗಿ ಕುಸಿದಿತ್ತು. ಆದರೆ ಕರ್ಫ್ಯೂ ಸಡಿಲಿಸಿದ ನಂತರ ವಾಹನಗಳ ಮಾರಾಟವು ಹೆಚ್ಚಾಯಿತು.

ಸಾರ್ವಜನಿಕ ಸಾರಿಗೆಯಲ್ಲಿ ಸಾರ್ವಜನಿಕರ ವಿಶ್ವಾಸದ ಕೊರತೆಯೇ ವಾಹನಗಳ ಮಾರಾಟ ಪ್ರಮಾಣವು ಏರಿಕೆಯಾಗಲು ಪ್ರಮುಖ ಕಾರಣವಾಗಿದೆ. ಜನರು ತಮ್ಮ ಸ್ವಂತ ವಾಹನಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಬಯಸಿದ್ದರಿಂದ ಹೊಸ ವಾಹನಗಳ ಮಾರಾಟವು ಹೆಚ್ಚಾಯಿತು.

ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಭಾರತದ ವಿವಿಧ ಭಾಗಗಳಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಾಗಿದೆ ಎಂಬುದು ಗಮನಾರ್ಹ. ನಮ್ಮ ಬೆಂಗಳೂರಿನಲ್ಲಿಯೂ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಾಗಿದೆ.

ದೇಶದ ಇತರ ಕೆಲವು ಭಾಗಗಳಲ್ಲಿಯೂ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಗಳಿಗೆ ಚಾಲನೆ ನೀಡಲಾಗಿದೆ. ಈ ಹಿಂದೆ ಜನರು ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನು ಬಳಸುತ್ತಿದ್ದರು ಎಂಬುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಸೇವೆಯು ಯಶಸ್ವಿಯಾಗುವ ನಿರೀಕ್ಷೆಗಳಿವೆ.

ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪರಿಚಯಿಸುವ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಗೆ ಎಷ್ಟು ದರ ನಿಗದಿಪಡಿಸಲಾಗುವುದು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ಹೊರ ಬರುವ ನಿರೀಕ್ಷೆಗಳಿವೆ. ಈ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯ ದರ ಸಮಂಜಸವಾಗಿದ್ದರೆ ಈ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನು ಮಧ್ಯಮ ವರ್ಗದ ಜನರು ಸಹ ಬಳಸುವ ನಿರೀಕ್ಷೆಗಳಿವೆ. ಕೇಂದ್ರ ಸರ್ಕಾರವು ಭಾರತದ ಎಲ್ಲಾ ನಾಗರೀಕರೂ ವಿಮಾನದಲ್ಲಿ ಸಂಚರಿಸಲಿ ಎಂಬ ಕಾರಣಕ್ಕೆ ಕೆಲವು ವರ್ಷಗಳ ಹಿಂದೆ ಉಡಾನ್ ಎಂಬ ಹೆಸರಿನ ಯೋಜನೆಯನ್ನು ಆರಂಭಿಸಿತ್ತು. ಉಡಾನ್ ಯೋಜನೆಯನ್ನು ದೇಶದ ಎರಡನೇ ಹಂತದ ನಗರಗಳಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಹಲವು ನಗರಗಳ ಮಧ್ಯೆ ವಿಮಾನಯಾನ ಸಂಚಾರವನ್ನು ಆರಂಭಿಸಲಾಗಿತ್ತು. ಉಡಾನ್ ಯೋಜನೆಯಲ್ಲಿ ಕಡಿಮೆ ದರದ ಪ್ರಯಾಣ ದರವನ್ನು ನಿಗದಿ ಪಡಿಸಲಾಗಿತ್ತು. ವಿಮಾನಗಳ ಹಾರಾಟಕ್ಕೆ ಹೋಲಿಸಿದರೆ ಹೆಲಿಕಾಪ್ಟರ್ ಹಾರಾಟ ಸುಲಭ. ವಿಮಾನಗಳು ಟೇಕ್ ಆಫ್ ಆಗಲು ಕಿ.ಮೀ ಗಟ್ಟಲೇ ರನ್ ವೇ ಬೇಕಾಗುತ್ತದೆ. ಆದರೆ ಹೆಲಿಕಾಪ್ಟರ್ ಟೇಕ್ ಆಫ್ ಆಗಲು ಚಿಕ್ಕ ಹೆಲಿ ಪ್ಯಾಡ್ ಸಾಕಾಗುತ್ತದೆ. ಈ ಕಾರಣಕ್ಕೆ ಗಣ್ಯ ವ್ಯಕ್ತಿಗಳು ಅಂತರ್ ನಗರ ಪ್ರಯಾಣಕ್ಕೆ ಹೆಲಿಕಾಪ್ಟರ್ ಬಳಸುತ್ತಾರೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications