Vande Bharat: ಬೆಂಗಳೂರು - ಹೈದರಾಬಾದ್ ಶೀಘ್ರ ಸಂಚಾರ, ಬೆಳಗ್ಗೆ ಹತ್ತಿದ್ರೆ, ಮಧ್ಯಾಹ್ನ ಬಿರಿಯಾನಿ ಸವಿಬಹುದು!
ಬೆಂಗಳೂರು - ಹೈದರಾಬಾದ್ ನಡುವೆ ಶೀಘ್ರದಲ್ಲಿಯೇ ವಂದೇ ಭಾರತ್ (Vande Bharat) ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ. ತೆಲಂಗಾಣದಲ್ಲಿ ಮುಖ್ಯ ಕಚೇರಿ ಹೊಂದಿರುವ ಸೌತ್ ಸೆಂಟ್ರಲ್ ರೈಲ್ವೆ (SCR) ಇದರ ನಿರ್ವಹಣೆ ಮಾಡಲಿದೆ. ಸದ್ಯ, 8 ಬೋಗಿಗಳನ್ನು ಹೊಂದಿರುವ ವಂದೇ ಭಾರತ್ ಎಕ್ಸ್ಪ್ರೆಸ್ನ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ.
ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಹೈದರಾಬಾದ್ನ ಕಾಚಿಗುಡ ಸ್ಟೇಷನ್ ಮಧ್ಯೆ (610 ಕಿಲೋಮೀಟರ್) ನೂತನ ವಂದೇ ಭಾರತ್ ರೈಲು ಕಾರ್ಯಾಚರಣೆ ನಡೆಸಲಿದೆ. ಸುಮಾರು ಏಳು ಗಂಟೆಯೊಳಗೆ ಎರಡು ನಗರ ನಡುವೆ ಸಂಚರಿಸಲಿದೆ. ಪ್ರಸ್ತುತ ವೇಗದ ರೈಲಾಗಿರುವ ದುರೊಂಟೊ ಎಕ್ಸ್ಪ್ರೆಸ್ಗಿಂತ ಎರಡು ಗಂಟೆ ಮೊದಲೇ ತಲುಪಲಿದೆ. ಸದ್ಯ, ಕಾಚಿಗುಡ ಹಾಗೂ ಧೋನೆ ಜಂಕ್ಷನ್ ನಡುವೆ ಟ್ರಯಲ್ ರನ್ ನಡೆಯುತ್ತಿದೆ.

'ಹಿರಿಯ ಅಧಿಕಾರಿಗಳು ಅನುಮತಿ ನೀಡಿದ ತಕ್ಷಣ, ವಂದೇ ಭಾರತ್ ಎಕ್ಸ್ಪ್ರೆಸ್ ಎರಡು ಪ್ರಮುಖ ಐಟಿ ನಗರಗಳ ನಡುವೆ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಸೌತ್ ಸೆಂಟ್ರಲ್ ರೈಲ್ವೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ' ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಬೆಂಗಳೂರು - ಹೈದರಾಬಾದ್ ನಡುವೆ 16 ಬೋಗಿಗಳನ್ನು ಒಳಗೊಂಡ ಈ ರೈಲು ಓಡಾಟ ನಡೆಸಲಿದ್ದು, ಇದೇ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಚಾಲನೆ ನೀಡುವ ಸಾಧ್ಯತೆಯಿದೆ.
ರೈಲ್ವೆ ಮಂಡಳಿ ಅನುಮೋದನೆ ನೀಡಿದ ನಂತರವಷ್ಟೇ ಇವೆರೆಡು ನಗರಗಳ ಮಧ್ಯೆ ವಂದೇ ಭಾರತ್ ರೈಲು ಕಾರ್ಯಚರಣೆ ಆರಂಭಿಸುವ ದಿನಾಂಕ, ಟಿಕೆಟ್ ದರ, ನಿಲುಗಡೆ ಹಾಗೂ ಪ್ರಯಾಣ ಸಮಯದ ವಿವರಗಳು ದೊರೆಯಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೈಲು ಆರಂಭದ ಬಗ್ಗೆ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ರೈಲ್ವೆ ಮಂಡಳಿಯಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ವರದಿಯಾಗಿದೆ.

ಆದರೆ, ಇದೇ ತಿಂಗಳು ವಂದೇ ಭಾರತ್ ಎಕ್ಸ್ಪ್ರೆಸ್ ಕಾರ್ಯಚರಣೆ ಆರಂಭಿಸಲಿದೆ ಎಂದು ನೈಋತ್ಯ ರೈಲ್ವೆಯ ಕಚೇರಿಯ ಮೂಲಗಳಿಂದ ತಿಳಿದುಬಂದಿದೆ. ಬೆಂಗಳೂರು - ಹೈದರಾಬಾದ್ ನಡುವೆ ಸಂಚರಿಸುವ ಈ ರೈಲು ಕರ್ನಾಟಕದ ಯಾವುದೇ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗವುದಿಲ್ಲ ಎಂದು ಹೇಳಲಾಗಿದೆ. ಬಹುತೇಕ ಧರ್ಮವರಂ, ಧೋನೆ, ಕರ್ನೂಲ್, ಗದ್ವಲ್, ಮಹಬೂಬ್ನಗರ ಮತ್ತು ಶಾದ್ನಗರದಲ್ಲಿ ನಿಲ್ಲಲಿದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ರಾಯಚೂರು ನಿಲ್ದಾಣದಲ್ಲಿ ನಿಲುಗಡೆಯಾಗಬೇಕೆಂಬುದು ಅಲ್ಲಿನ ಸ್ಥಳೀಯರ ಒತ್ತಾಯವಾಗಿದೆ. ಇದಕ್ಕೆ ರೈಲ್ವೆ ಇಲಾಖೆಯಿಂದ ಒಪ್ಪಿಗೆ ದೊರೆಯುತ್ತದೆಯೇ, ಇಲ್ಲವೇ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಶಾದ್ನಗರದಲ್ಲಿ ನಿಲ್ಲಿಸುವುದರಿಂದ ಸಮೀಪವೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಅಲ್ಲಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದು, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಿಗೆ ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆಗಿರಲಿದೆ. ಕರ್ನಾಟಕದಲ್ಲಿ ಮೊದಲೆರಡು ವಂದೇ ಭಾರತ್ ರೈಲುಗಳು ಮೈಸೂರು - ಬೆಂಗಳೂರು - ಚೆನ್ನೈ ಹಾಗೂ ಬೆಂಗಳೂರು - ಧಾರವಾಡ ಮಾರ್ಗವಾಗಿ ಸಂಚರಿಸುತ್ತಿವೆ. ತೆಲಂಗಾಣದ ಮೊದಲೆರಡು ರೈಲುಗಳು ಸಿಕಂದರಾಬಾದ್ - ವಿಶಾಖಪಟ್ಟಣಂ ಹಾಗೂ ಸಿಕಂದರಾಬಾದ್ - ತಿರುಪತಿ ಮಧ್ಯೆ ಓಡಾಡುತ್ತಿವೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವಿಶೇಷತೆಗಳ ಬಗ್ಗೆ ತಿಳಿಯುವದಾದರೆ, ಇದು, ಗಂಟೆಗೆ 180 ಕಿಲೋಮೀಟರ್ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಸುರಕ್ಷತೆಯ ಹಿತದೃಷ್ಟಿಯಿಂದ ಸ್ವೀಡ್ ಅನ್ನು 160 ಕಿಲೋಮೀಟರ್ ಗೆ ಸೀಮಿತಗೊಳಿಸಲಾಗಿದೆ ಈ ರೈಲಿಗೆ ಪ್ರತೇಕ ಎಂಜಿನ್ ಇಲ್ಲ. ಸಂಪೂರ್ಣ ಎಸಿಯಿರುವ ಈ ರೈಲಿನ ಸೀಟುಗಳು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯದ ವ್ಯವಸ್ಥೆಯಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications