Vande Bharat: ಉತ್ತರ ಕರ್ನಾಟಕ ಜನರಿಗೆ ಸಿಹಿಸುದ್ದಿ.. ಬೆಳಗಾವಿಯಿಂದ ಈ ನಗರಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು!
ದೇಶಾದ್ಯಂತ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಓಡಾಟ ನಡೆಸುತ್ತಿದೆ. ಈಗ ಉತ್ತರ ಕರ್ನಾಟಕ ಭಾಗದ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಬೆಳಗಾವಿ - ಪುಣೆ ನಡುವೆ ಈ ರೈಲು ಸಂಚರಿಸಲು ಅನುಮತಿ ದೊರೆತಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಬೆಳಗಾವಿ ಮತ್ತು ಪುಣೆ ಮಧ್ಯೆ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಓಡಿಸಲು ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಸಚಿವರು, ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಈರಣ್ಣ ಕಡಾಡಿ ಅವರು, ವಂದೇ ಭಾರತ್ ಆರಂಭಿಸುವ ಸಂಬಂಧ ರೈಲ್ವೆ ಸಚಿವಾಲಯದೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು.

ಬೆಳಗಾವಿ ಹಾಗೂ ಪುಣೆ ನಡುವಿನ ಹಳಿಗಳಲ್ಲಿ ವಿದ್ಯುದ್ದೀಕರಣ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾರ್ಯಾಚರಿಸಲಿದೆ. ಮೂಲಗಳ ಪ್ರಕಾರ, ವಿದ್ಯುದ್ದೀಕರಣ ಕೆಲಸಗಳು ಮುಗಿಯಲು ಕನಿಷ್ಠ 1 ವರ್ಷವಾದರೂ ಬೇಕಾಗುವ ಸಾಧ್ಯತೆಯಿದೆ. ಇವೆರೆಡು ಪ್ರಮುಖ ನಗರಗಳ ಮಧ್ಯೆ ನೇರವಾಗಿ ವಂದೇ ಭಾರತ್ ರೈಲು ಸೇವೆ ಆರಂಭವಾಗುವುದರಿಂದ ಇಲ್ಲಿನ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಪ್ರವಾಸೋದ್ಯಮ, ವ್ಯಾಪಾರ ಚಟುವಟಿಕೆಗಳು ವೃದ್ಧಿಸಲಿವೆ.
ಕಳೆದ ಕೆಲವು ತಿಂಗಳ ಹಿಂದೆಯೇ ಬೆಂಗಳೂರು - ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡಲಾಗಿತ್ತು. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಕೂಡ ನಡೆಸಲಾಗಿತ್ತು. ಆದರೆ, ಇವತ್ತಿನವರೆಗೂ ರೈಲಿನ ಸಂಚಾರ ಶುರುವಾಗಿಲ್ಲ. ಇದು ಕುಂದಾನಗರಿ ಜನರ ಬೇಸರಕ್ಕೆ ಕಾರಣವಾಗಿದೆ. ಹೊಸ ರೈಲು ಘೋಷಣೆ ಸ್ವಲ್ಪ ಸಮಾಧಾನ ತಂದಿದೆ.

ಸದ್ಯ, ಕರ್ನಾಟಕದ 4 ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲು ಕಾರ್ಯಾಚರಣೆ ನಡೆಸುತ್ತಿದೆ. ಚೆನ್ನೈ - ಬೆಂಗಳೂರು - ಮೈಸೂರು, ಬೆಂಗಳೂರು - ಹುಬ್ಬಳ್ಳಿ - ಧಾರವಾಡ, ಹೈದರಾಬಾದ್ - ಬೆಂಗಳೂರು ಮತ್ತು ಮಂಗಳೂರು - ಗೋವಾ ನಡುವೆ ಈ ರೈಲು ಯಶಸ್ವಿಯಾಗಿ ಓಡಾಟ ನಡೆಸುತ್ತಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇವು ಸುರಕ್ಷತೆಯ ಸಲುವಾಗಿ ಗಂಟೆಗೆ 130 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚಾರ ನಡೆಸುತ್ತವೆ. ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಆರಾಮದಾಯ ಆಸನ ವ್ಯವಸ್ಥೆ, ಸಂಪೂರ್ಣ ಹವಾ ನಿಯಂತ್ರಿತ ಬೋಗಿ, ವೈಫೈ, ಜೈವಿಕ ಶೌಚಾಲಯ, ಅಗ್ನಿ ನಿರೋಧಕ ಸಾಧನಗಳು ಮತ್ತು ಸ್ವಯಂ ಚಾಲಿತ ಬಾಗಿಲುಗಳನ್ನು ಹೊಂದಿವೆ.
ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ಒದಗಿಸಲು ಅಮೃತ್ ಭಾರತ್ (Amrit Bharat) ರೈಲುಗಳನ್ನು ಸಹ ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಡಿ.30 ರಂದು ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಮಾಲ್ಡಾ - ಬೆಂಗಳೂರು ಮತ್ತು ದೆಹಲಿ - ಅಯೋಧ್ಯೆ - ದರ್ಬಂಗಾ ಮಧ್ಯೆ ಸಂಚರಿಸುವ 2 ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದರು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications