ಮಾನ್ಯ ನೋಂದಣಿ ಹೊಂದಿಲ್ಲದ ವಾಹನಗಳಿಗೆ ಸಿಗುವುದಿಲ್ಲ ವಿಮಾ ಹಣ..!
ಮಾನ್ಯವಾದ ನೋಂದಣಿ ಸಂಖ್ಯೆ ಹೊಂದಿಲ್ಲದ ವಾಹನಗಳಿಗೆ ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕಳೆದ ಶನಿವಾರ ಆದೇಶ ಹೊರಡಿಸಿದೆ. ತಾತ್ಕಾಲಿಕ ನೋಂದಣಿ ಹೊಂದಿರುವ ವಾಹನಗಳಿಗೆ ವಿಮಾ ಹಣವನ್ನು ನಿರಾಕರಿಸಿದ ವಿಮಾ ಕಂಪನಿಯ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಭಾರತದ ಅತ್ಯಂತ ಜನಪ್ರಿಯ ವಾಹನ ವಿಮಾ ಕಂಪನಿಗಳಲ್ಲಿ ಒಂದಾಗಿದ್ದು, ಇನ್ಶೂರೆನ್ಸ್ ಕ್ಲೈಮ್ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರಾಜಸ್ಥಾನದಲ್ಲಿ ಕಂಪನಿಯು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ವಿಮಾ ಹಣವನ್ನು ನೀಡುವಂತೆ ಆದೇಶಿಸಿತ್ತು. ಈ ಪ್ರಕರಣದಲ್ಲಿ ರೂ. 6.17 ಲಕ್ಷ ವಿಮಾ ಮೊತ್ತವನ್ನು ಹೊಂದಿದ್ದ Mahindra Bolero ಕಾರು ಮಾನ್ಯವಾದ ನೋಂದಣಿ ಸಂಖ್ಯೆಯನ್ನು ಹೊಂದಿರಲಿಲ್ಲ. ಪಾಲಿಸಿಯ ನಿಯಮಗಳು ಹಾಗೂ ಷರತ್ತುಗಳ ಮೂಲಭೂತ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ವಿಮಾ ಕ್ಲೈಮ್ ಅನ್ನು ವಜಾಗೊಳಿಸಿದೆ.

ಹೊಣೆಗಾರಿಕೆಗೆ ಕಾರಣವಾಗಬಹುದಾದ ವಿಮೆ ಮಾಡಲಾಗದ ಘಟನೆಯು ಸಂಭವಿಸಿದಾಗ, ವಿಮಾ ಒಪ್ಪಂದದಲ್ಲಿ ಒಳಗೊಂಡಿರುವ ಷರತ್ತುಗಳ ಯಾವುದೇ ಮೂಲಭೂತ ಉಲ್ಲಂಘನೆಯಾಗಬಾರದು ಎಂದು ನ್ಯಾಯಮೂರ್ತಿ ಯು.ಯು ಲಲಿತ್, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಹಾಗೂ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರಿದ್ದ ತ್ರಿ ಸದಸ್ಯ ಪೀಠ ಹೇಳಿದೆ.

ಬೊಲೆರೊ ಎಸ್ಯುವಿ ಕಳ್ಳತನವಾದಾಗ ಮಾನ್ಯವಾದ ನೋಂದಣಿಯನ್ನು ಹೊಂದಿರಲಿಲ್ಲವೆಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಇದು ಮೋಟಾರು ವಾಹನ ಕಾಯ್ದೆ 1988 ರ ಕಲಂ 39 ಹಾಗೂ 192 ರ ಉಲ್ಲಂಘನೆಯಾಗಿದೆ. ಇದು ಪಾಲಿಸಿಯ ನಿಯಮಗಳು ಹಾಗೂ ಷರತ್ತುಗಳ ಮೂಲಭೂತ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.

ನ್ಯಾಯಾಲಯವು ಈ ಹಿಂದೆ ನರೀಂದರ್ ಸಿಂಗ್ ಪ್ರಕರಣದಲ್ಲಿ ತಿಳಿಸಿರುವಂತೆ ಪಾಲಿಸಿಯನ್ನು ನಿರಾಕರಿಸಲು ವಿಮಾದಾರನಿಗೆ ಅಧಿಕಾರವಿರುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಎನ್ಸಿಡಿಆರ್ಸಿಯ ಆದೇಶವನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ. ಈ ಕಾರಣಕ್ಕೆ ಮಾನ್ಯವಾದ ನೋಂದಣಿ ಸಂಖ್ಯೆಯನ್ನು ಹೊಂದಿಲ್ಲದ Bolero ಎಸ್ಯುವಿಗೆ ಪರಿಹಾರದ ಹಕ್ಕನ್ನು ನಿರಾಕರಿಸಿದೆ.

ವಾಹನವು ಕಳುವಾದ ಸಂದರ್ಭದಲ್ಲಿ ವಾಹನವು ತಾತ್ಕಾಲಿಕ ನೋಂದಣಿಯನ್ನು ಹೊಂದಿತ್ತು ಎನ್ನಲಾಗಿದೆ. ಅದರಂತೆ ಈ ವಿಷಯದಲ್ಲಿ ಪಾಲಿಸಿಯನ್ನು ನಿರಾಕರಿಸುವ ಹಕ್ಕು ವಿಮಾದಾರರಿಗೆ ಇದೆ ಎಂದು ನ್ಯಾಯಾಲಯವು ತಿಳಿಸಿದೆ. ಈ Mahindra Bolero ಎಸ್ಯುವಿ ಮಾಲೀಕರು ರಾಜಸ್ಥಾನದ ಶ್ರೀಕಾಕುಲಂನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರು ಪಂಜಾಬ್ನಲ್ಲಿ ತಮ್ಮ ಕಾರಿಗೆ ವಿಮಾ ಪಾಲಿಸಿಯನ್ನು ಮಾಡಿಸಿದ್ದರು.

10 ವರ್ಷಗಳ ಹಿಂದೆ ಜೋಧಪುರದ ಪಾರ್ಕಿಂಗ್ ಸ್ಥಳದಲ್ಲಿ ಅವರ ಎಸ್ಯುವಿಯನ್ನು ಕಳುವು ಮಾಡಲಾಗಿತ್ತು. ಕಾರು ಕಳುವಾದ ಹಿನ್ನೆಲೆಯಲ್ಲಿ ಮಾಲೀಕರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಕಳುವಾದ ಕಾರ್ ಅನ್ನು ಪತ್ತೆ ಮಾಡಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಕಾರು ಮಾನ್ಯವಾದ ನೋಂದಣಿ ಸಂಖ್ಯೆಯನ್ನು ಬಳಸದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಇದರಿಂದ Mahindra ಕಾರು ಮಾಲೀಕರು ಪರಿಹಾರದ ಹಕ್ಕನ್ನು ಕಳೆದುಕೊಂಡಿದ್ದಾರೆ. ವಾಹನಗಳನ್ನು ಸರಿಯಾಗಿ ನೋಂದಾಯಿಸಿಕೊಂಡರೆ ಮಾತ್ರ ವಿಮಾ ಕ್ಲೈಮ್ಗಳನ್ನು ಮಾಡಬಹುದು ಎಂಬುದನ್ನು ಈ ಪ್ರಕರಣವು ಸ್ಪಷ್ಟಪಡಿಸಿದೆ. ಪ್ರತಿ ವಾಹನಕ್ಕೂ ಸರಿಯಾದ ವಿಮಾ ಪಾಲಿಸಿ ಕಡ್ಡಾಯವಾಗಿದೆ. ಕಳ್ಳತನ ಹಾಗೂ ಅನಿರೀಕ್ಷಿತ ಸಂದರ್ಭಗಳಲ್ಲಿ ನಷ್ಟವನ್ನು ಸರಿದೂಗಿಸಲು ವಿಮಾ ಪಾಲಿಸಿ ನೆರವಾಗುತ್ತದೆ.

ಅದಕ್ಕಾಗಿಯೇ ಎಲ್ಲಾ ವಾಹನಗಳಿಗೂ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಕೆಲವು ತಪ್ಪುಗಳಿಂದಾಗಿ ಈ ಪ್ರಕರಣದಲ್ಲಿ ವಿಮಾದಾರರು ವಿಮಾ ಮೊತ್ತವನ್ನು ಕ್ಲೈಮ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಯಾವುದೇ ವಾಹನ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ನಿಯಮ ಹಾಗೂ ಷರತ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದು ಸೂಕ್ತ. ಹೆಚ್ಟಿ ಆಟೋ ಈ ಪ್ರಕರಣದ ಬಗ್ಗೆ ವರದಿ ಮಾಡಿದೆ.

ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 1 ರಿಂದ ಮಾರಾಟವಾಗುವ ಎಲ್ಲಾ ಹೊಸ ವಾಹನಗಳಿಗೆ ಬಂಪರ್ ಟು ಬಂಪರ್ ಐದು ವರ್ಷಗಳ ಸಮಗ್ರ ವಿಮಾ ಯೋಜನೆಯನ್ನು ನೀಡುವುದು ಕಡ್ಡಾಯವೆಂದು ಆದೇಶ ಹೊರಡಿಸಿತ್ತು. ಅಪಘಾತ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಆದೇಶ ನೀಡಿತ್ತು. ಈ ಆದೇಶದಿಂದ ಹೊಸ ವಾಹನಗಳ ಬೆಲೆ ಹಲವು ಪಟ್ಟು ಹೆಚ್ಚಾಗುವ ಪರಿಸ್ಥಿತಿ ಉದ್ಭವವಾಗಿತ್ತು.

ಮದ್ರಾಸ್ ಹೈಕೋರ್ಟ್'ನ ಈ ಆದೇಶವು ಭಾರತೀಯ ಆಟೋ ಮೊಬೈಲ್ ಉದ್ಯಮವನ್ನೇ ತಲ್ಲಣಗೊಳಿಸಿತು ಎಂದು ಹೇಳಲಾಗಿತ್ತು. ಮದ್ರಾಸ್ ಹೈಕೋರ್ಟ್ನ ಈ ಆದೇಶವು ಬಜೆಟ್ ವಾಹನ ಖರೀದಿಸುವ ಗ್ರಾಹಕರ ಉತ್ಸಾಹಕ್ಕೆ ತಣ್ಣೀರೆರಚಿತ್ತು. ನಂತರ ಮದ್ರಾಸ್ ಹೈಕೋರ್ಟ್ ಬಂಪರ್ ಟು ಬಂಪರ್ ವಿಮಾ ಯೋಜನೆಗೆ ಸಂಬಂಧಿಸಿದಂತೆ ತಾನು ನೀಡಿದ್ದ ಆದೇಶವನ್ನು ಹಿಂಪಡೆಯುವುದಾಗಿ ತಿಳಿಸಿ, ಆದೇಶವನ್ನು ಹಿಂಪಡೆದಿದೆ.


Click it and Unblock the Notifications