ಸಾಧ್ಯವಾದರೆ ತನ್ನನ್ನು ಹಿಡಿಯುವಂತೆ ಪೊಲೀಸರಿಗೆ ಸವಾಲು ಹಾಕಿದ ಕಾರುಗಳ್ಳ
ಈಗ ಬಿಡುಗಡೆಯಾಗುತ್ತಿರುವ ಕಾರುಗಳು ಅತ್ಯಾಧುನಿಕ ಭದ್ರತಾ ಫೀಚರ್ ಗಳನ್ನು ಹೊಂದಿವೆ. ಈ ಕಾರಣಕ್ಕೆ ಹೊಸ ಕಾರುಗಳನ್ನು ಕದಿಯುವುದು ಕಾರುಗಳ್ಳರಿಗೆ ಸವಾಲಿನ ಕೆಲಸವಾಗಿದೆ. ಆದರೂ ಕೆಲವು ಕಾರುಗಳ್ಳರು ಯಾವುದಾದರೂ ಮಾರ್ಗದ ಮೂಲಕ ಈ ಕಾರುಗಳನ್ನು ಕಳುವು ಮಾಡುತ್ತಿದ್ದಾರೆ.

ಹೈದರಾಬಾದ್ ಪೊಲೀಸರು ಹಲವಾರು ಐಷಾರಾಮಿ ಕಾರುಗಳನ್ನು ಕಳುವು ಮಾಡಿದ್ದ ಆರೋಪಿಯನ್ನು ಹಿಡಿಯಲು ಸಾಧ್ಯವಾಗದೆ ಎಡವಿದ್ದಾರೆ. ಈ ವರ್ಷದ ಜನವರಿ 26 ರಂದು ಹೈದರಾಬಾದ್'ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ Toyota Fortuner ಕಾರನ್ನು ಕಳುವು ಮಾಡಲಾಗಿತ್ತು. ಈ ಕಾರು ಸ್ಯಾಂಡಲ್ ವುಡ್ ನಿರ್ಮಾಪಕ ಮಂಜುನಾಥ್ ರವರಿಗೆ ಸೇರಿದ್ದು.

ಕೆಎ 04 ಎಂಎಕ್ಸ್ 1000 ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರ್ ಅನ್ನು ಕಳುವು ಮಾಡಲಾಗಿತ್ತು. ಈ ಕಾರಿನ ಮಾಲೀಕರು ಜನಪ್ರಿಯ ವ್ಯಕ್ತಿಯಾಗಿರುವುದರಿಂದ ಕಳುವಾದ ಕಾರು ಹಾಗೂ ಕಳುವು ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಲು ಬಂಜಾರಾ ಹಿಲ್ಸ್ ಪೊಲೀಸರು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ.

ಈ ಕಾರ್ ಅನ್ನು ಕಳುವು ಮಾಡಿದ್ದ ವ್ಯಕ್ತಿಯನ್ನು ಸತ್ಯೇಂದ್ರ ಸಿಂಗ್ ಶೇಖಾವತ್ ಎಂದು ಗುರುತಿಸಲಾಗಿದೆ. ಆತ ವಿವಿಧ ರಾಜ್ಯಗಳಲ್ಲಿ ಕಾರುಗಳನ್ನು ಕಳುವು ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸತ್ಯೇಂದ್ರ ಸಿಂಗ್ ಶೇಖಾವತ್ ಎಂಬಿಎ ಪದವಿಧರ ಎಂಬುದು ಗಮನಾರ್ಹ.

ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ವಿವಿಧ ಸ್ಥಳಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಹೀಗೆ ಪರಿಶೀಲಿಸಿದ ನಂತರ ಸತ್ಯೇಂದ್ರ ಸಿಂಗ್ ಶೇಖಾವತ್ ಕಾರ್ ಅನ್ನು ಕಳುವು ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತ ಕುಖ್ಯಾತ ಕಾರುಗಳ್ಳ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಹಿಂದೆ ಆತ ದೆಹಲಿ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರು ಕಳುವು ಮಾಡಿ ಸಿಕ್ಕಿ ಹಾಕಿಕೊಂಡಿದ್ದ. ಸದ್ಯ ಅವನು ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಸತ್ಯೇಂದ್ರ ಸಿಂಗ್ ಶೇಖಾವತ್ ಹೈದರಾಬಾದ್ನಲ್ಲಿಯೂ ಕಾರುಗಳನ್ನು ಕಳುವು ಮಾಡಿದ್ದಾನೆ. ನಂತರ ವಿವಿಧ ರಾಜ್ಯಗಳಲ್ಲಿ ತನ್ನ ಕೈ ಚಳಕ ತೋರಿದ್ದಾನೆ.

ಹೈದರಾಬಾದ್ನಲ್ಲಿ ವಿವಿಧ ಕಾರುಗಳು ಕಳುವಾದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಬಂಜಾರಾ ಹಿಲ್ಸ್ ಪೊಲೀಸರು ರಾಜಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸತ್ಯೇಂದ್ರ ಸಿಂಗ್ ಶೇಖಾವತ್ ವಾಟ್ಸಾಪ್ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದಾನೆ ಎಂದು ಹೇಳಲಾಗಿದೆ. ನಿಮಗೆ ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಆತ ಪೊಲೀಸರಿಗೆ ಸವಾಲು ಹಾಕಿದ್ದಾನೆ ಎಂದು ವರದಿಯಾಗಿದೆ.

ಸತ್ಯೇಂದ್ರ ಸಿಂಗ್ ಶೇಖಾವತ್, ನಾನು ರಾಜಸ್ಥಾನದಲ್ಲಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಸತ್ಯೇಂದ್ರ ಸಿಂಗ್ ಶೇಖಾವತ್ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸತ್ಯೇಂದ್ರ ಸಿಂಗ್ ಶೇಖಾವತ್ ಪತ್ನಿಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಆತನ ಪತ್ನಿ ಸತ್ಯೇಂದ್ರ ಸಿಂಗ್ ಶೇಖಾವತ್'ನ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಪೊಲೀಸರಿಗೆ ಇದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಸತ್ಯೇಂದ್ರ ಸಿಂಗ್ ಶೇಖಾವತ್ ಪತ್ನಿಯನ್ನು ಬಿಟ್ಟು ಕಳುಹಿಸಿದ್ದಾರೆ.

ಇದರ ನಡುವೆ ತೆಲಂಗಾಣ ರಾಜ್ಯದ ವಿವಿಧ ಭಾಗಗಳ ಪೊಲೀಸರು ಸತ್ಯೇಂದ್ರ ಸಿಂಗ್ ಶೇಖಾವತ್ ನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆತನನ್ನು ಬಂಧಿಸಿ ಕರೆ ತರುವ ಸಲುವಾಗಿ ಹೈದರಾಬಾದ್ ಬಳಿಯ ನಾಚರಂ ಪೊಲೀಸರು ಕೂಡ ಇತ್ತೀಚೆಗೆ ರಾಜಸ್ಥಾನಕ್ಕೆ ತೆರಳಿದ್ದರು.

ಸತ್ಯೇಂದ್ರ ಸಿಂಗ್ ಶೇಖಾವತ್'ನನ್ನು ಬಂಧಿಸುವುದು ಅವರ ಗುರಿಯಾಗಿದೆ. ಸತ್ಯೇಂದ್ರ ಸಿಂಗ್ ಶೇಖಾವತ್, ನಾಚರಂ ಪ್ರದೇಶದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರಿಗೆ ಸೇರಿದ Isuzu D Max V Corss ವಾಹನವನ್ನು ಕಳುವು ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಕಳುವು ಪ್ರಕರಣದ ಬಗ್ಗೆ ನಾಚಾರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕಾರಣಕ್ಕೆ ಅವರು ಸತ್ಯೇಂದ್ರ ಸಿಂಗ್ ಶೇಖಾವತ್'ನನ್ನು ಸೆರೆಹಿಡಿಯಲು ರಾಜಸ್ಥಾನಕ್ಕೆ ತೆರಳಿದ್ದರು. ಸತ್ಯೇಂದ್ರ ಸಿಂಗ್ ಶೇಖಾವತ್ ಭಾರತದ ವಿವಿಧ ಭಾಗಗಳಲ್ಲಿ 100 ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದಾನೆ ಎಂದು ಪೊಲೀಸರ ತನಿಖೆಯ ಸಂದರ್ಭದಲ್ಲಿ ತಿಳಿದುಬಂದಿದೆ. ಆತ ಭಾರತದ ವಿವಿಧ ರಾಜ್ಯಗಳು ಹಾಗೂ ನಗರಗಳಲ್ಲಿ ಕಾರುಗಳನ್ನು ಕದಿಯುತ್ತಾ ಪೊಲೀಸರಿಗೆ ತಲೆ ನೋವಾಗಿದ್ದಾನೆ.

ಸತ್ಯೇಂದ್ರ ಸಿಂಗ್ ಶೇಖಾವತ್ ಕದ್ದ ಕಾರುಗಳನ್ನು ಮಾದಕ ದ್ರವ್ಯ ಕಳ್ಳಸಾಗಣೆ ತಂಡ ಹಾಗೂ ಮಹಿಳಾ ಕಳ್ಳಸಾಗಣೆ ತಂಡಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸತ್ಯೇಂದ್ರ ಸಿಂಗ್ ಶೇಖಾವತ್'ನ ಕಾರು ಕಳ್ಳತನದ ಘಟನೆಗಳು ಹಾಗೂ ಪೊಲೀಸರಿಗೆ ಆತನನ್ನು ಹಿಡಿಯಲು ಸಾಧ್ಯವಾಗದ ಘಟನೆಗಳು ಸಿನಿಮಾ ದೃಶ್ಯಗಳನ್ನು ನೆನಪಿಸುತ್ತವೆ. ಕೆಲವು ದಿನಗಳ ಹಿಂದೆ ಗುಜರಾತ್ ಪೊಲೀಸರು ಕಾರುಗಳ್ಳನೊಬ್ಬನನ್ನು ಬಂಧಿಸಿ ಸುಮಾರು 200 ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿದ್ದರು. ಇತ್ತೀಚಿಗೆ ಕಾರು ಕಳುವು ಮಾಡಿ ಸಿಕ್ಕಿ ಬೀಳುತ್ತಿರುವವರಲ್ಲಿ ಪದವಿಧರರೇ ಹೆಚ್ಚಿನ ಸಂಖೆಯಲ್ಲಿದ್ದಾರೆ ಎಂಬುದು ವಿಪರ್ಯಾಸ.


Click it and Unblock the Notifications