ದಂಡ ವಿಧಿಸಿದ್ದಕ್ಕೆ ಬೈಕಿಗೆ ಬೆಂಕಿಯಿಟ್ಟ ಯುವಕ..!
ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಹೆಚ್ಚಿನ ಪ್ರಮಾಣದ ದಂಡ ವಿಧಿಸಿ ಸಂಸತ್ತು ಅನುಮೋದನೆ ನೀಡಿದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಕಳೆದ ವರ್ಷದ ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಜಾರಿಗೆ ತರಲಾಯಿತು.

ತನ್ನ ಬೈಕಿನ ಮೇಲೆ ದಂಡ ವಿಧಿಸಿದ ಕಾರಣಕ್ಕೆ ಯುವಕನೊಬ್ಬ ಆ ಬೈಕಿಗೆ ಬೆಂಕಿಯಿಟ್ಟ ಘಟನೆಯು ಈ ಹಿಂದೆ ವರದಿಯಾಗಿತ್ತು. ಈಗ ಮತ್ತೆ ಅದೇ ರೀತಿಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಬೈಕಿಗೆ ಬೆಂಕಿಯಿಟ್ಟ ಆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಸಂಚಾರಿ ಪೊಲೀಸರು ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ ವಿಕಾಸ್ ಎಂಬಾತನನ್ನು ಸಾವಿತ್ರಿ ಚಿತ್ರ ಮಂದಿರದ ಬಳಿ ತಡೆದು ನಿಲ್ಲಿಸಿದ್ದಾರೆ. ಹೆಲ್ಮೆಟ್ ಇಲ್ಲದ ಕಾರಣಕ್ಕೆ 20 ವರ್ಷ ವಯಸ್ಸಿನ ವಿಕಾಸ್ಗೆ ದಂಡ ವಿಧಿಸಲಾಗಿದೆ.

ಈ ಸಂಬಂಧ ವಿಕಾಸ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಪೊಲೀಸರು ತನ್ನ ಮಾತನ್ನು ಕೇಳದೇ ಇದ್ದಾಗ ಬೈಕಿನ ಮೇಲೆ ಪೆಟ್ರೋಲ್ ಸುರಿದು ಬೈಕಿಗೆ ಬೆಂಕಿ ಹಚ್ಚಿದ್ದಾನೆ. ವಿಕಾಸ್ನನ್ನು ಬಂಧಿಸಿರುವ ಪೊಲೀಸರು ಬೈಕ್ ಅನ್ನು ಸಹ ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ವಿಕಾಸ್ ವಿರುದ್ಧ ಸಿ ಆರ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ವಿಕಾಸ್ ತನ್ನೊಂದಿಗೆ ಬೈಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೊಂಡೊಯುತ್ತಿದ್ದನೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

ವಿಕಾಸ್ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಘಟನೆ ನಡೆದಾಗ ಎಲ್ಲಿಗೆ ಹೋಗುತ್ತಿದ್ದ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ. ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಗುವುದರಿಂದ ಸಾರ್ವಜನಿಕರು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ.

ಆದರೆ ದಂಡದ ಪ್ರಮಾಣವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ದಂಡಕ್ಕೆ ಹೆದರಿಯಾದರೂ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ ಎಂದು ಹೇಳಿದೆ. ಇದರಿಂದ ರಸ್ತೆ ಅಪಘಾತ ಪ್ರಮಾಣವು ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ಕೆಲವು ರಾಜ್ಯಗಳು ಹೊಸ ಮೋಟಾರು ವಾಹನ ಕಾಯ್ದೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಿಲ್ಲ. ಆದರೆ ಭಾರೀ ಪ್ರಮಾಣದ ದಂಡದಿಂದಾಗಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ ಎಂಬುದು ಹಲವರ ಅಭಿಪ್ರಾಯ.
ದಂಡ ವಿಧಿಸಿದ ಕಾರಣಕ್ಕೆ ತಮ್ಮ ವಾಹನಕ್ಕೆ ಬೆಂಕಿಯಿಟ್ಟ ಪ್ರಕರಣ ಇದು ಮೊದಲನೆಯದಲ್ಲ. ಈ ಹಿಂದೆಯೂ ದೆಹಲಿಯಲ್ಲಿಯೇ ಈ ರೀತಿಯ ಎರಡು ಪ್ರಕರಣಗಳು ದಾಖಲಾಗಿದ್ದವು. ಉತ್ತರಪ್ರದೇಶದಲ್ಲಿ ಯುವಕನೊಬ್ಬ ದಂಡ ವಿಧಿಸಿದ ಕಾರಣಕ್ಕೆ ತನ್ನ ಬೈಕ್ ಅನ್ನು ಸುತ್ತಿಗೆಯಿಂದ ಹೊಡೆದು ಹಾನಿಗೊಳಿಸಿದ್ದ.

ಭಾರೀ ಪ್ರಮಾಣದ ದಂಡವನ್ನು ವಿಧಿಸುವುದರ ಹೊರತಾಗಿಯೂ ಭಾರತದಲ್ಲಿ ಪ್ರಪಂಚದಲ್ಲಿಯೇ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳಾಗುತ್ತಿವೆ. ಪ್ರತಿದಿನ ಸಾವಿರಾರು ಸಂಖ್ಯೆಯ ರಸ್ತೆ ಅಪಘಾತಗಳಾಗುತ್ತಿವೆ.


Click it and Unblock the Notifications