ಜೊಮಾಟೊ ಡೆಲಿವರಿ ಬಾಯ್ ಸಂಕಷ್ಟಕ್ಕೆ ಸ್ಪಂದಿಸಿದ ಸಾರ್ವಜನಿಕರು
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಜನರ ಜೀವನವು ಸಂಕಷ್ಟಕ್ಕೆ ಸಿಲುಕಿದೆ. ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿಯೂ ಹಲವಾರು ಜನರು ಸಂಕಷ್ಟಕ್ಕೀಡಾಗಿದ್ದಾರೆ.

ತಂದೆ, ತಾಯಿ ಸೇರಿದಂತೆ 7 ಸದಸ್ಯರ ಕುಟುಂಬದ ಜವಾಬ್ದಾರಿ ಹೊತ್ತು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ತಿಂಗಳ ಆರಂಭದಲ್ಲಿ ರಾಬಿನ್ ಮುಖೇಶ್ ಎಂಬುವವರು ಜೊಮಾಟೊ ಮೂಲಕ ಊಟವನ್ನು ಆರ್ಡರ್ ಮಾಡಿದ್ದರು.

ಆರ್ಡರ್ ಮಾಡಿದ ವೇಳೆ ಹೈದರಾಬಾದ್ನಲ್ಲಿ ಭಾರಿ ಮಳೆಯಾಗುತ್ತಿದ್ದ ಕಾರಣ ರಾಬಿನ್'ರವರು ಊಟ ತಲುಪುವುದು ತಡವಾಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಸೈಕಲ್'ನಲ್ಲಿಯೇ ಬಂದ ಡೆಲಿವರಿ ಬಾಯ್ ನಿಗದಿತ ಸಮಯದಲ್ಲಿಯೇ ಆಹಾರವನ್ನು ತಲುಪಿಸಿದ್ದಾನೆ.

ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸಿದ ಡೆಲಿವರಿ ಹುಡುಗನ ಹೆಸರು ಮೊಹಮ್ಮದ್ ಅಕೀಲ್. ಆತನನ್ನು ಶ್ಲಾಘಿಸಿದ ರಾಬಿನ್ ಮುಖೇಶ್ ಆತನ ಹಿನ್ನೆಲೆಯ ಬಗ್ಗೆ ವಿಚಾರಿಸಿದ್ದಾರೆ. ಓಲ್ಡ್ ಸಿಟಿಯ ತಲಾಬ್ ಕಟ್ಟಾ ನಿವಾಸಿಯಾದ 21 ವರ್ಷದ ಅಕೀಲ್ ತನ್ನ ಕುಟುಂಬದ ಏಕೈಕ ದುಡಿಯುವ ವ್ಯಕ್ತಿ ಎಂದು ತಿಳಿದುಬಂದಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆತ ಲಾಕ್ಡೌನ್'ಗೂ ಮುನ್ನ ಪಾರ್ಟ್ ಟೈಮ್'ನಲ್ಲಿ ಕೆಲಸ ಮಾಡಿ, ವೃತ್ತಿಯಲ್ಲಿ ಶೂ ತಯಾರಕರಾಗಿರುವ ಅವರ ತಂದೆಗೆ ನೆರವಾಗುತ್ತಿದ್ದ. ಈ ಮೂಲಕ 7 ಸದಸ್ಯರ ಕುಟುಂಬಕ್ಕೆ ನೆರವಾಗುತ್ತಿದ್ದ.

ಲಾಕ್ಡೌನ್ ವಿಧಿಸಲಾಗುತ್ತಿದ್ದಂತೆ, ಕುಟುಂಬದ ಹಿರಿಯ ಮಗನಾದ ಅಕೀಲ್ ತನ್ನ ಪಾರ್ಟ್ ಟೈಮ್ ಕೆಲಸವನ್ನು ಕಳೆದುಕೊಂಡ. ಆತನ ತಂದೆ ಸಹ ನಿರುದ್ಯೋಗಿಗಳಾದರು. ನಂತರ ಅಕೀಲ್ ಜೊಮಾಟೊದಲ್ಲಿ ಕೆಲಸಕ್ಕೆ ಸೇರಿಕೊಂಡ.

ತಿಂಗಳಿಗೆ ರೂ.8,000 ಸಂಬಳ ನೀಡುವ ಜೊಮಾಟೊ ಕಂಪನಿಯಲ್ಲಿ ಅಕೀಲ್ ಸೈಕಲ್ ಮೂಲಕವೇ ಆಹಾರ ತಲುಪಿಸುತ್ತಿದ್ದ. ಅಕೀಲ್'ನ ವಿವರಗಳನ್ನು ರಾಬಿನ್ ಮುಖೇಶ್ ಟ್ವಿಟರ್'ನಲ್ಲಿ ಶೇರ್ ಮಾಡಿದರು.

ಈ ಬಗ್ಗೆ ತಿಳಿದ ಹಲವಾರು ಜನರು ಅಕೀಲ್'ಗೆ ನೆರವು ನೀಡಲು ಮುಂದಾದರು. ದಿ ಗ್ರೇಟ್ ಹೈದರಾಬಾದ್ ಫುಡ್ ಅಂಡ್ ಟ್ರಾವೆಲ್ ಕ್ಲಬ್'ನ ರವಿ ಕಾಂತ್ ರೆಡ್ಡಿ ಅಕೀಲ್'ಗಾಗಿ ಬೈಕ್ ನೀಡುವ ಅಭಿಯಾನವನ್ನು ಆರಂಭಿಸಿದರು.

ಈ ಅಭಿಯಾನದಲ್ಲಿ ರೂ.73 ಸಾವಿರಕ್ಕಿಂತ ಹೆಚ್ಚು ಹಣ ಸಂಗ್ರಹವಾಯಿತು. ಈ ಮೂಲಕ ನಿಗದಿ ಪಡಿಸಿದ ಗುರಿಗಿಂತ ಅಧಿಕ ಹಣ ಸಂಗ್ರಹವಾಯಿತು. ನಿನ್ನೆ ಎಂಜಿನಿಯರಿಂಗ್ ವಿದ್ಯಾರ್ಥಿ ಅಕೀಲ್'ಗೆ ಹೊಸ ದ್ವಿಚಕ್ರ ವಾಹನ ವಿತರಿಸುವ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಸಮಾರಂಭದಲ್ಲಿ ಅಕೀಲ್'ಗೆ ಹೊಸ ಟಿವಿಎಸ್ ಎಕ್ಸ್ಎಲ್ 100, ಹೆಲ್ಮೆಟ್ ಹಾಗೂ ರೇನ್ ಕೋಟ್ ವಿತರಿಸಲಾಯಿತು. ಈ ಅಭಿಯಾನದ ಮೂಲಕ ಸಂಗ್ರಹವಾದ ಹೆಚ್ಚುವರಿ ಹಣವನ್ನು ಸಹ ಆತನಿಗೆ ನೀಡಲಾಯಿತು.


Click it and Unblock the Notifications