ಲಾಕ್ಡೌನ್ ಎಫೆಕ್ಟ್- ವೆಚ್ಚ ನಿರ್ವಹಣೆಗಾಗಿ ಬಜಾಜ್ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ..
ಕರೋನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಲಾಕ್ಡೌನ್ ಮುಂದುವರಿಸಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗೆ ಬ್ರೇಕ್ ಹಾಕಲಾಗಿದೆ. ಇದರಿಂದ ಖಾಸಗಿ ಕಂಪನಿಗಳ ಆದಾಯವು ಸಂಪೂರ್ಣ ನೆಲಕಚ್ಚಿದ್ದು, ವೆಚ್ಚ ನಿರ್ವಹಣೆಗಾಗಿ ಕೆಲವು ಕಠಿಣ ಕ್ರಮಕ್ಕೆ ಮುಂದಾಗಿವೆ.

ದೇಶದ ಅತಿ ದೊಡ್ಡ ವಾಹನ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಕೂಡಾ ವೆಚ್ಚ ನಿರ್ವಹಣೆಗಾಗಿ ಕೆಲವು ಕಠಿಣ ಕ್ರಮಗಳನ್ನು ಪ್ರಕಟಿಸಿದ್ದು, ತನ್ನ ಉದ್ಯೋಗಿಗಳ ಸಂಬಳದಲ್ಲಿ ಇಂತಿಷ್ಟು ಪ್ರಮಾಣವನ್ನು ಕಡಿತ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಮಾಹಿತಿಗಳ ಪ್ರಕಾರ, ಎಪ್ರಿಲ್ ಅವಧಿಯಲ್ಲಿನ ಸಂಬಳದಲ್ಲಿ ಶೇ.10ರಷ್ಟು ಕಡಿತಗೊಳಿಸಲಾಗುತ್ತಿದ್ದು, ಪರಿಸ್ಥಿತಿ ಸುಧಾರಿಸುವ ತನಕವು ನೌಕರರ ಸಂಬಳದಲ್ಲಿ ಇಂತಿಷ್ಟು ಪ್ರಮಾಣವನ್ನು ಕಡಿತ ಮಾಡುವ ಸೂಚನೆ ನೀಡಿದೆ.

ಕೇವಲ ಬಜಾಜ್ ಆಟೋ ಮಾತ್ರವಲ್ಲದೇ ದೇಶದ ಹಲವು ಕಂಪನಿಗಳು ತಮ್ಮಉದ್ಯೋಗಿಗಳ ಸಂಬಳದಲ್ಲಿ ಇಂತಿಷ್ಟು ಪ್ರಮಾಣವನ್ನು ಕಡಿತಗೊಳಿಸುವ ಸೂಚನೆ ನೀಡಿದ್ದು, ಇನ್ನು ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳ ಸಂಬಳ ಪ್ರಮಾಣವನ್ನು ಆಧರಿಸಿ ಶೇ. 30ರಿಂದ ಶೇ.50ರಷ್ಟು ಕಡಿತಕ್ಕೆ ಮುಂದಾಗಿವೆ.
MOST READ: ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಸಂಕಷ್ಟದ ಸಮಯದಲ್ಲೂ ಕೇಂದ್ರ ಸರ್ಕಾರದ ಮನವಿ ಮೇರೆಗೆ ಉದ್ಯೋಗಿಗಳ ಪ್ರಮಾಣದಲ್ಲಿ ಕಡಿತ ಮಾಡದಿರಲು ನಿರ್ಧರಿಸಿರುವ ಹಲವು ಖಾಸಗಿ ಕಂಪನಿಗಳು ಉದ್ಯೋಗ ಕಡಿತ ಬದಲು ಸಂಬಳಕ್ಕೆ ಕತ್ತರಿ ಹಾಕಲು ಮುಂದಾಗಿದ್ದು, ವೈರಸ್ ಹತೋಟಿ ಬರದೆ ಹೋದಲ್ಲಿ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ.

ಇನ್ನು ಆಟೋ ಉತ್ಪಾದನಾ ಕಂಪನಿಗಳು ಕಳೆದ ಒಂದು ತಿಂಗಳಿನಿಂದ ಸಂಪೂರ್ಣವಾಗಿ ಉತ್ಪಾದನೆಯನ್ನು ಬಂದ್ ಮಾಡಿದ್ದು, ವಿವಿಧ ಆಟೋ ಕಂಪನಿಗಳು ದಿನಂಪ್ರತಿ ಕೇವಲ ಭಾರತವೊಂದರಲ್ಲೇ ಸುಮಾರು ರೂ. 2,300 ಕೋಟಿ ನಷ್ಟ ಅನುಭವಿಸುತ್ತಿವೆ.
MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಹೀಗಿದ್ದರೂ ಕೂಡಾ ಕರೋನಾ ವಿರುದ್ಧದ ಹೋರಾಟಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸಿ ಆರ್ಥಿಕ ಸಹಾಯದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಮಾಡಿ ಸರಬರಾಜು ಮಾಡುತ್ತಿರುವ ಆಟೋ ಕಂಪನಿಗಳು ಇದೀಗ ಲಾಕ್ಡೌನ್ ವಿಸ್ತರಣೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ.

ಬಜಾಜ್ ಆಟೋ ಕಂಪನಿಯು ಕರೋನಾ ವಿರುದ್ಧ ಹೋರಾಟಕ್ಕಾಗಿ ಬರೋಬ್ಬರಿ ರೂ. 100 ಕೋಟಿ ದೇಣಿಗೆ ನೀಡಿದ್ದು, ದೇಣಿಗೆ ಮಾತ್ರವಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸಹ ವಿವಿಧ ವೈದ್ಯಕೀಯ ಉಪಕರಣಗಳ ತಯಾರಿಕಾ ಕಂಪನಿಗಳ ಜೊತೆಗೂಡಿ ಸರ್ಕಾರಕ್ಕೆ ಸಹಾಯಮಾಡುತ್ತಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಸುಮಾರು 200ಕ್ಕೂ ಹೆಚ್ಚು ಎನ್ಜಿಓಗಳ ಮೂಲಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್ಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿನ ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುತ್ತಿದೆ.


Click it and Unblock the Notifications