ಮೂರನೇ ಅಲೆ ಎದುರಿಸಲು ಮಹತ್ವದ ಹೆಜ್ಜೆ ಇಟ್ಟ ಹೀರೋ ಮೋಟೊಕಾರ್ಪ್
ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿತು. ಈಗ ಕೋವಿಡ್ 19 ಎರಡನೇ ಅಲೆ ತೀವ್ರತೆ ಕಡಿಮೆಯಾಗಿದ್ದರೂ ಮೂರನೇ ಅಲೆ ಶೀಘ್ರದಲ್ಲೇ ಭಾರತಕ್ಕೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕರೋನಾ ನಿಯಮಗಳನ್ನು ಪಾಲಿಸಿ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಲಾಗಿದೆ. ಇದೇ ವೇಳೆ ದೇಶದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ರಾಷ್ಟ್ರ ರಾಜಧಾನಿ ದೆಹಲಿಯ ಜನತೆಗೆ ನೆರವು ನೀಡಿರುವ ಬಗ್ಗೆ ವರದಿಯಾಗಿದೆ. ದೆಹಲಿಯು ಕರೋನಾ ವೈರಸ್ ಎರಡನೇ ಅಲೆಯಿಂದ ತೀವ್ರವಾಗಿ ತತ್ತರಿಸಿತ್ತು.

ಹೀರೋ ಮೋಟೊಕಾರ್ಪ್ ಕಂಪನಿಯು ದೆಹಲಿಯ ಜನಕಪುರಿ ಪ್ರದೇಶದಲ್ಲಿ 50 ಹಾಸಿಗೆಗಳ ಕೋವಿಡ್ 19 ಆಸ್ಪತ್ರೆಯನ್ನು ತೆರೆದಿದೆ. ಇದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬುದು ಗಮನಾರ್ಹ ಸಂಗತಿ.

ಹೀರೋ ಮೋಟೊಕಾರ್ಪ್ ಕಂಪನಿಯು ಪೀಪಲ್ ಟು ಪೀಪಲ್ ಹೆಲ್ತ್ ಫೌಂಡೇಶನ್ ಸಹಭಾಗಿತ್ವದಲ್ಲಿ ಈ ಆಸ್ಪತ್ರೆಯನ್ನು ನಿರ್ವಹಿಸಲಿದೆ. ಈ ಆಸ್ಪತ್ರೆಯನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ಸತ್ಯೇಂದರ್ ಜೈನ್ ಉದ್ಘಾಟಿಸಿದರು.

ಕರೋನಾ ವೈರಸ್ನಿಂದಾಗಿ ದೇಶಾದ್ಯಂತ ಆಸ್ಪತ್ರೆ ಹಾಗೂ ವೈದ್ಯಕೀಯ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಕರೋನಾ ವೈರಸ್ ಎರಡನೇ ಅಲೆಯ ವೇಳೆ ಆಂಬ್ಯುಲೆನ್ಸ್ ಹಾಗೂ ಆಮ್ಲಜನಕದ ಕೊರತೆ ಉಂಟಾದ ಕಾರಣ ಹಲವಾರು ಜನರು ಪ್ರಾಣ ಕಳೆದು ಕೊಂಡಿದ್ದರು.

ಮುಂಬರುವ ಮೂರನೇ ಅಲೆಯ ಸಂದರ್ಭದಲ್ಲಿ ಈ ಪರಿಸ್ಥಿತಿ ಎದುರಾಗದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ದೆಹಲಿಯಲ್ಲಿ 50 ಹಾಸಿಗೆಗಳ ಕೋವಿಡ್ 19 ಆಸ್ಪತ್ರೆಯನ್ನು ತೆರೆಯಲಾಗಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳನ್ನು ಆಸ್ಪತ್ರೆಗಳಿಗೆ ಮಾತ್ರವಲ್ಲದೇ ಆರೋಗ್ಯ ಕಾರ್ಯಕರ್ತರಿಗೂ ಕೊಡುಗೆಯಾಗಿ ನೀಡಿದೆ. ಹರಿಯಾಣದ ಏಳು ಆಸ್ಪತ್ರೆ, ಉತ್ತರಾಖಂಡದ ನಾಲ್ಕು ಆಸ್ಪತ್ರೆ, ಗುರುಗ್ರಾಮದ ನಾಲ್ಕು ಆಸ್ಪತ್ರೆಗಳಿಗೆ ದ್ವಿಚಕ್ರ ವಾಹನಗಳನ್ನು ಉಚಿತವಾಗಿ ನೀಡಿದೆ.

ಇದರ ಜೊತೆಗೆ ಜೈಪುರ, ರಾಜಸ್ಥಾನ, ಹಲೋಲ್ ಹಾಗೂ ಗುಜರಾತ್ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತರಿಗೂ ದ್ವಿಚಕ್ರ ವಾಹನಗಳನ್ನು ಉಚಿತವಾಗಿ ನೀಡಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಆಕ್ಸಿಜನ್ ಸಿಲಿಂಡರ್ ಹಾಗೂ ಪಿಪಿಇ ಕಿಟ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ಸಹ ಒದಗಿಸಿದೆ.

ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಸ್ಪತ್ರೆಯನ್ನು ತೆರೆಯುವ ಮೂಲಕ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮತ್ತೆ ಕೈ ಜೋಡಿಸಿದೆ. ಹೀರೋ ಮೋಟೊಕಾರ್ಪ್ ಕಂಪನಿಯ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.


Click it and Unblock the Notifications