ಅತಿ ವೇಗದ ಚಾಲನೆ: ಗಾಳಿಗೆ ಹಾರಿ ಟ್ರಾನ್ಸ್ಫಾರ್ಮರ್ ಬೇಲಿಯೊಳಗೆ ಬಿದ್ದ KTM ಬೈಕ್
ವಿಶ್ವದ ಅತಿ ಹೆಚ್ಚು ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಒಂದು. ನಿತ್ಯ ದೇಶದಲ್ಲಿ ಸಾವಿರಾರು ಅಪಘಾತ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಆದರೆ ಇವುಗಳಲ್ಲಿ ಕೆಲವು ಆಕ್ಸಿಡೆಂಟ್ಗಳು ಮಾತ್ರ ಮೈ ಜುಮ್ಮೆನ್ನಿಸುತ್ತವೆ. ಅಂತಹ ಘಟನೆಯೇ ಕೇರಳದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ.

ವರದಿಯ ಪ್ರಕಾರ, ಟ್ರಾನ್ಸ್ಫಾರ್ಮರ್ವೊಂದರ ಸುತ್ತಲೂ ಹಾಕಲಾದ ಕಬ್ಬಿಣದ ಬೇಲಿಯ ಒಳಗೆ ಕೆಟಿಎಂ ಬೈಕ್ ನೇತಾಡುತ್ತಿರುವ ದೃಶ್ಯವೊಂದು ಸಖತ್ ವೈರಲ್ ಆಗುತ್ತಿದೆ. ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ ಬಳಿಯ ವೆಳ್ಳಯಂಕುಡಿಯಲ್ಲಿ ನಡೆದಿದೆ ಎನ್ನಲಾಗಿದೆ.

ವಿಷಯಕ್ಕೆ ಬಂದರೆ ಅತೀ ವೇಗದಲ್ಲಿ ಬಂದ ಕೆಟಿಎಂ ಬೈಕ್ ಏಕಾಏಕಿ ಗಾಳಿಗೆ ಹಾರಿ ರಸ್ತೆ ಪಕ್ಕದ ಟ್ರಾನ್ಸ್ ಫಾರ್ಮರ್ ಬೇಲಿಯೊಳಗೆ ಬಿದ್ದಿದೆ. ಬೈಕ್ ನಲ್ಲಿದ್ದ ಯುವಕ ಕೂಡ ಗಾಳಿಗೆ ಹಾರಿ ರಸ್ತೆಗೆ ಅಪ್ಪಳಿಸಿದ್ದಾನೆ. ರಸ್ತೆಯ ಎಲೆಕ್ಟ್ರಿಕ್ ಪೋಲ್ಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸಂಪೂರ್ಣ ದೃಷ್ಯ ಸೆರೆಯಾಗಿದೆ.

ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನೋಡಿ ಕೆಲವೇ ಕ್ಷಣಗಳಲ್ಲಿ ಸುತ್ತಮುತ್ತಲಿನ ಜನರು ಜಮಾವಣೆಗೊಂಡಿದ್ದಾರೆ. ಮಾಹಿತಿ ಪಡೆದ ವಿದ್ಯುತ್ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರವನ್ನು ಕರೆಸಿ ಟ್ರಾನ್ಸ್ ಫಾರ್ಮರ್ ಒಳಗೆ ಸಿಲುಕಿದ್ದ ಬೈಕ್ ಅನ್ನು ಹೊರತೆಗೆದರು.

ಒಟ್ಟಿನಲ್ಲಿ KTM RC390 ಬೈಕ್ ಅನ್ನು ಹೇಗೋ ಹೊರತೆಗೆಯಲಾಯಿತಾದರೂ, ಬೈಕ್ ಬಹುತೇಕ ಹಾನಿಯಾಗಿತ್ತು. ಬೈಕ್ನ ಮುಂಭಾಗದ ಚಕ್ರ ಮತ್ತು ಸಸ್ಪೆನ್ಶನ್ ಬಹುತೇಕ ಜಖಂಗೊಂಡಿದೆ. ಇಷ್ಟು ದೊಡ್ಡ ಅಪಘಾತದಲ್ಲಿ ಆ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವುದು ನಿಜಕ್ಕೂ ಮಹಾಭಾಗ್ಯವೆಂದೇ ಹೇಳಬೇಕು.

ಈ ಅವಘಡದಲ್ಲಿ ಬೈಕ್ ನೇರವಾಗಿ ಹೋಗಿ ಅಲ್ಲಿರುವ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿ ಹೊಡೆದಿದ್ದರೆ ಆಗುವ ಅಪಾಯ ಊಹಿಸಲೂ ಅಸಾಧ್ಯ. ಆದರೆ ಅದೃಷ್ಟವಶಾತ್ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಆದರೆ ಈ ಘಟನೆಯಲ್ಲಿ ಬೈಕ್ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ಹೆಲ್ಮೆಟ್ ಧರಿಸದೇ ಬದುಕಿ ಬಂದಿದ್ದಾನೆ ಎಂದರೆ ಆತ ನಿಜಕ್ಕೂ ಅದೃಷ್ಟವಂತ.

ರಸ್ತೆಯಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವಂತೆ ವಾಹನ ಸವಾರರಿಗೆ ಅಧಿಕಾರಿಗಳು ಸಲಹೆ ನೀಡುತ್ತಲೇ ಇದ್ದಾರೆ. ಆದರೆ, ಆ ಮಾತುಗಳನ್ನು ಹಲವರು ಕಡೆಗಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅಪಘಾತವಾದಾಗ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೆಲ್ಮೆಟ್ ಬಹುತೇಕ ಇಂತಹ ಅವಘಡಗಳಿಂದ ಜೀವ ಹಾನಿಯನ್ನು ತಪ್ಪಿಸುತ್ತದೆ.

ಸರ್ಕಾರ ಇತ್ತೀಚೆಗೆ 1998 ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ರೂ. 2,000 ವರೆಗೆ ದಂಡ ವಿಧಿಸಲು ಸ್ಪಷ್ಟಪಡಿಸಿದೆ. ಜತೆಗೆ ಹೆಲ್ಮೆಟ್ ಧರಿಸದಿದ್ದರೆ 1,000 ರೂ. ವರೆಗೆ ದಂಡ ವಿಧಿಸಲಾಗುವುದು. ಆದ್ದರಿಂದ ವಾಹನ ಬಳಕೆದಾರರು ಈ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ವಾಹನ ಬಳಸುವವರು ಬಳಸುವ ಹೆಲ್ಮೆಟ್ಗಳಿಗೆ 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್' ಪ್ರಮಾಣ ಪತ್ರ ನೀಡಬೇಕು. ದೃಢೀಕರಿಸದಿದ್ದಲ್ಲಿ ರೂ. 1,000 ದಂಡ ತೆರಬೇಕಾಗುತ್ತದೆ. ಜತೆಗೆ ಹೆಲ್ಮೆಟ್ ಧರಿಸಿ ಟ್ರಾಫಿಕ್ ಸಿಗ್ನಲ್ ದಾಟಿದರೂ ರೂ. 2000 ದಂಡ ವಿಧಿಸಲಾಗುವುದು. ಆದ್ದರಿಂದ ಬೈಕ್ ಸವಾರರು ಇದನ್ನು ಗಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕು.

ಭಾರತದಲ್ಲಿ ಇದು ಈಗಾಗಲೇ ಸುರಕ್ಷಿತವಲ್ಲದ ಹೆಲ್ಮೆಟ್ಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಜೂನ್ 2021 ರಿಂದ ಜಾರಿಗೆ ಬಂದಿದೆ. ಅದರಂತೆ, ದೇಶದಲ್ಲಿ ಬಿಐಎಸ್ ಪ್ರಮಾಣೀಕರಿಸದ ಹೆಲ್ಮೆಟ್ಗಳ ಉತ್ಪಾದನೆ ಮತ್ತು ಮಾರಾಟವನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ.

ರಸ್ತೆ ಅಪಘಾತಗಳ ಅಂಕಿಅಂಶ
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಈ ಹಿಂದೆ ಬಿಡುಗಡೆ ಮಾಡಿದ್ದರು. ಅದರಂತೆ 2020ರಲ್ಲಿ ದೇಶದಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಗೆ ಸಂಬಂಧಿಸಿದಂತೆ 1,58,964 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಟ್ಟು 56,873 ಜನರು ಸಾವನ್ನಪ್ಪಿದ್ದಾರೆ ಎಂದು ಗಡ್ಕರಿ ತಿಳಿಸಿದ್ದರು.

2019 ರಲ್ಲಿ ಒಟ್ಟು ಅಪಘಾತಗಳ ಸಂಖ್ಯೆ 1,67,184 ದಾಖಲಾಗಿದ್ದು, ಇದರಲ್ಲಿ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಒಟ್ಟು 56,136 ಜನರು ಜೀವ ಕಳೆದುಕೊಂಡಿದ್ದಾರೆ ಎಂದ ಅವರು, ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣಗಳನ್ನು ತಿಳಿಸಿದರು. ಈ ಅಪಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆ ಮುಖ್ಯ ಕಾರಣವಾಗಿದೆ. ಜೊತೆಗೆ ರಾಂಗ್ ಸೈಡ್ ಡ್ರೈವಿಂಗ್, ಅತಿವೇಗ, ಸಿಗ್ನಲ್ ಜಂಪ್, ಅಪ್ರಾಪ್ತ ವಯಸ್ಸಿನವರ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿರುವುದಾಗಿ ಸಾರಿಗೆ ಸಚಿವಾಲಯದ ಅಂಕಿಅಂಶಗಳು ತಿಳಿಸಿರುವುದಾಗಿ ಗಡ್ಕರಿ ಹೇಳಿದರು.

ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 1.50 ಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇತರ ಯಾವುದೇ ದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕವಾಗಿದೆ. ಭಾರತದಲ್ಲಿ ಅಂಗವೈಕಲ್ಯಕ್ಕೆ ರಸ್ತೆ ಅಪಘಾತಗಳು ಮುಖ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಯ
ದೇಶದಲ್ಲಿ ಬಹುತೇಕ ಅಪಘಾತಗಳು ಅಜಾಗರೂಕತೆಯಿಂದಲೇ ನಡೆದಿರುವುದಾಗಿ ಅಂಕಿಅಂಶಗಳು ತಿಳಿಸಿವೆ. ಹಾಗಾಗಿ ಸವಾರರು ಡ್ರೈವಿಂಗ್ ವೇಳೆ ಜಾಗರೂಕರಾಗಿ ಸವಾರಿ ಮಾಡಬೇಕು. ಡ್ರೈವಿಂಗ್ ವೇಳೆ ಫೋನ್ ಮಾತನಾಡುವುದು, ಗಮನ ಇನ್ನೆಲ್ಲೋ ಇಟ್ಟು ಓಡುಸುವಂತಹ ಕೆಲಸಗಳನ್ನು ಮಾಡಬಾರದು. ಮುಖ್ಯವಾಗಿ ಹೆಲ್ಮೆಟ್ ಧರಿಸುವುದು ತುಂಬಾ ಮುಖ್ಯ, ನಿಮ್ಮ ಕೆಲಸ ಕಾರ್ಯಗಳಿಗೆ ತುಸು ತಡವಾದರೂ ಸರ್ಕಾರಿ ನಿಯಮಗಳನ್ನು ಪಾಲಿಸುವುದರಿಂದ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು.


Click it and Unblock the Notifications