ವೃದ್ಧನ ಚೇಷ್ಟೆಗೆ ಪೊಲೀಸರಿಂದ ಬಿತ್ತು ರೂ. 11 ಸಾವಿರ ದಂಡ: ವೈರಲ್ ಆಯ್ತು ವಿಡಿಯೋ..
ಮುಖ್ಯರಸ್ತೆಯಲ್ಲಿ ವೃದ್ಧನೋರ್ವ ದ್ವಿಚಕ್ರ ವಾಹನವನ್ನು ಎಡಭಾಗದಲ್ಲಿ ಚಲಿಸುತ್ತಾ ದಿಢೀರನೆ ಬಲಭಾಗಕ್ಕೆ ಬಂದಿದ್ದು, ಕಡಿಮೆ ವೇಗದಲ್ಲಿ ಹಿಂದಯೇ ಬರುತ್ತಿದ್ದ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ಅಪಘಾತವೊಂದು ತಪ್ಪಿದೆ. ಈ ಘಟನೆ ಕೇರಳದಲ್ಲಿ ನಡೆದಿದ್ದು, ಬಸ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ದೃಷ್ಯ ಸೆರೆಯಾಗಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಒಂದು. 2020ರಲ್ಲಿ ದೇಶದಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಗೆ ಸಂಬಂಧಿಸಿದಂತೆ 1,58,964 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ ಒಟ್ಟು 56,873 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಹಿಂದೆ ತಿಳಿಸಿದ್ದರು.

ಇದಕ್ಕಾಗಿಯೇ ಮೋಟಾರು ವಾಹನ ಕಾಯ್ದೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕಠಿಣ ಸಂಚಾರ ನಿಯಮಗಳನ್ನು ತರಲಾಗಿದೆ. ಆದರೂ ಪ್ರತಿದಿನ ದ್ವಿಚಕ್ರ ವಾಹನಗಳ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಟ್ರಾಫಿಕ್ ನಿಯಮ ಪಾಲನೆ ಮಾಡದಿರುವುದು ಹಾಗೂ ದ್ವಿಚಕ್ರ ವಾಹನಗಳ ನಿರ್ಲಕ್ಷ್ಯದಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ.

ಇದೀಗ ಕೇರಳದಲ್ಲಿ ನಡೆದಿರುವ ಘಟನೆ ಕೂಡ ವೃದ್ಧನ ನಿರ್ಲಕ್ಷ್ಯದ ವಾಹನ ಚಾಲನೆಯನ್ನು ತೋರುತ್ತಿದೆ. ರಸ್ತೆಯಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋದಾಗ ಇಂಡಿಕೇಟರ್ಗಳನ್ನು ಬಳಸುವುದು ಕಡ್ಡಾಯವಾಗಿದೆ. ಅಲ್ಲದೇ ಇದು ವಾಹನ ಚಾಲನೆ ಮಾಡುವ ಪ್ರತಿಯೊಬ್ಬರ ಸಾಮಾನ್ಯ ಜ್ಞಾನವು ಹೌದು.
ಹಾಗಾಗಿ ಸೈಡ್ ಇಂಡಿಕೇಟರ್ ಹಾಕದೆ ಅಪಾಯಕಾರಿಯಾಗಿ ವಾಹನ ಚಲಾಯಿಸಿದ ವೃದ್ಧನ ವಿರುದ್ಧ ಕೇರಳ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, 11 ಸಾವಿರ ದಂಡ ವಿಧಿಸಲಾಗಿದೆ. ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನ ಚಾಲನೆ, ಹೆಲ್ಮೆಟ್ ಧರಿಸದಿರುವುದು ಸೇರಿದಂತೆ ನಾನಾ ಕಾರಣಗಳಿಗಾಗಿ ಪೊಲೀಸರು ದಂಡ ವಿಧಿಸಿದ್ದಾರೆ.

ಏನಿದು ಘಟನೆ?
ಕೇರಳದ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಒಬ್ಬರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ವೃದ್ಧನೋರ್ವ, ಇಂಡಿಕೇಟರ್ ಹಾಕದೇ ಇದ್ದಕ್ಕಿದ್ದಂತೆ ಬಲಗಡೆಗೆ ಸ್ಕೂಟರ್ ಅನ್ನು ತಿರುಗಿಸಿದ್ದಾನೆ. ಇದನ್ನು ಗ್ರಹಿಸಿದ ಬಸ್ ಚಾಲಕ ತಕ್ಷಣವೇ ವಾಹನವನ್ನು ತಿರುಗಿಸಿ ಅದೇ ಸಮಯದಲ್ಲಿ ಬ್ರೇಕ್ ಹಾಕಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋವನ್ನು ಆಧರಿಸಿ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಮುಚ್ಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೃದ್ಧನನ್ನು ಕರೆತಂದು ವಿಚಾರಿಸಿದಾಗ, ಆತ ವಾಹನ ಚಲಾಯಿಸಲು ಪರವಾನಗಿ ಕೂಡ ಹೊಂದಿಲ್ಲ ಎಂಬುದು ಪೊಲೀಸರಿಂದ ಬಹಿರಂಗವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸೈಡ್ ಇಂಡಿಕೇಟರ್ ಹಾಕದೇ ವಾಹನ ತಿರುಗಿಸಿದ್ದೇ ಮುಖ್ಯ ಕಾರಣಕ್ಕೆ ಪರವಾನಗಿ ಇಲ್ಲದೇ ಇಷ್ಟು ದಿನ ವಾಹನ ಚಲಾಯಿಸುತ್ತಿದ್ದ ವೃದ್ಧನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಭಯ ಮೂಡಿಸಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಇನ್ನು ಘಟನೆ ವೈರಲ್ ಆಗುತ್ತಿದ್ದು ನೆಟ್ಟಿಗರು ಚಾಲಕನನ್ನು ಹಾಡಿ ಹೊಗಳುತ್ತಿದ್ದಾರೆ. ಇಂತಹ ಘಟನೆಗಳು ಭಾರತದಲ್ಲಿ ಬಹಳ ಸಾಮಾನ್ಯವಾಗಿದೆ. ಅನೇಕ ಭಾರತೀಯರು ಸೈಡ್ ಇಂಡಿಕೇಟರ್ ಅನ್ನು ಬಳಸುವುದನ್ನೇ ಮರೆತಿದ್ದಾರೆ. ಇದರಿಂದಲೇ ದೇಶದಲ್ಲಿ ಅನೇಕ ಅಪಘಾತಗಳು ನಡೆಯುತ್ತಿವೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಬಸ್ಸಿನಲ್ಲಿ ಸಿಸಿಟಿವಿ ಇದ್ದ ಕಾರಣ ಅದೃಷ್ಟವಶಾತ್ ಬಸ್ ಚಾಲಕ ಪಾರಾಗಿದ್ದಾನೆ. ಅಲ್ಲದೇ ಅವನ ಸಮಯಪ್ರಜ್ಞೆಗೆ ಬೈಕ್ನಲ್ಲಿದ್ದ ಇಬ್ಬರೂ ಅಪಘಾತದಿಂದ ಬಚಾವ್ ಆಗಿದ್ದಾರೆ. ಇಂಡಿಕೇಟರ್ ಹಾಕದಿದ್ದರೂ ಕನಿಷ್ಠ ವಾಹನಗಳು ಬರುವುದನ್ನು ನೋಡಿ ಓಡಿಸಿದರೆ ಹೆಚ್ಚಿನ ಅಪಘಾತಗಳನ್ನು ತಪ್ಪಿಸಬಹುದು. ಆದರೆ ಬಹುತೇಕ ವಾಹನ ಸವಾರರು ಇದನ್ನು ಪಾಲನೆ ಮಾಡುವುದನ್ನೇ ಮರೆತಿದ್ದಾರೆ. ಇದರ ವಿರುದ್ಧ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ.


Click it and Unblock the Notifications