ಪೆಟ್ರೋಲ್ ಬಂಕ್ ಮುಂದೆ ಇರುವೆಗಳು ಸಾಲುಸಾಲು
ಬಹುಶಃ ಇಂತಹ ಘಟನೆಗಳು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎನ್ನುವುದು ನನ್ನ ನಂಬಿಕೆ. ವಿಷ್ಯ ಏನೆಂದು ಕೇಳುತ್ತಿದ್ದೀರಾ? ನಿನ್ನೆ ಸಂಜೆ ವೇಳೆಗೆ ಪೆಟ್ರೋಲ್ ದರ ಹೆಚ್ಚಾಗುವ ಸೂಚನೆ ಸಿಕ್ಕಿತ್ತಲ್ವ. ಆ ಸುದ್ದಿ ಕಿವಿಗೆ ಬಿದ್ದದ್ದೇ ತಡ ಬರಗೆಟ್ಟವರಂತೆ ಹೆಚ್ಚಿನ ವಾಹನ ಮಾಲಿಕರು ಪೆಟ್ರೋಲ್ ಬಂಕ್ಗಳತ್ತ ದೌಡಾಯಿಸಿದರು. ಅದ್ರಲ್ಲೇನೂ ತಪ್ಪು ಅಂತೀರಾ? ಮುಂದೆ ಓದಿ..
ನಿನ್ನೆ ಕನ್ನಡ ಡ್ರೈವ್ಸ್ಪಾರ್ಕ್ ವರದಿಗಾರರು ಭೇಟಿ ನೀಡಿದ ಎಲ್ಲಾ ಪೆಟ್ರೋಲ್ ಬಂಕ್ನಲ್ಲೂ ನೂಕುನುಗ್ಗಲು. ಉದ್ದುದ್ದ ಕ್ಯೂ. ಕೆಲವು ಕಡೆ ಜಗಳ, ಕೆಲವು ಕಡೆ ಕ್ರೆಡಿಟ್ ಕಾರ್ಡ್ ಆಸೆಪ್ಟ್ ಮಾಡೋಲ್ಲವೆಂಬ ವರಾತ. ಕೆಲವರು ರೇಷನ್ ಅಂಗಡಿಗೆ ಬಂದಂತೆ ಕ್ಯಾನ್ ಕೂಡ ತಂದಿದ್ದರು. ಕೆಲವು ಬಂಕ್ಗಳಲ್ಲಿ ಪೊಲೀಸ್ ಕಾವಲು ಕೂಡ ಇತ್ತು.
ಹಣ ಉಳಿತಾಯ ಮಾಡುವ ಜನರ ಮನೋಭಾವಕ್ಕೆ ನನ್ನ ಬೆಂಬಲ ಯಾವತ್ತೂ ಇದೆ. ಆದರೆ ಲಾಭ ಯಾವತ್ತೂ ಅತಿಯಾಸೆಯಾಗಬಾರದು. ಅದಕ್ಕಾಗಿ ನೆಮ್ಮದಿ ಕಳೆದುಕೊಳ್ಳಬಾರದು. ಕಡಿಮೆ ಲಾಭಕ್ಕಾಗಿ ಹೆಚ್ಚು ಸಮಯ ವ್ಯರ್ಥ ಮಾಡಬಾರದು ಅಲ್ವೆ!
ದರ ಹೆಚ್ಚಳಕ್ಕೆ ಮುನ್ನಾದಿನದ ಕೊನೆಯ ಕೆಲವು ಗಂಟೆಗಳಲ್ಲಿ ಬೈಕ್ ಸವಾರ ಹೆಚ್ಚೆಂದರೆ ಟ್ಯಾಂಕ್ಗೆ 5-10 ಲೀಟರ್ ಪೆಟ್ರೋಲ್ ತುಂಬಿಸಿಕೊಳ್ಳಬಹುದು. ಅದರಿಂದ ಅವನು ಅಬ್ಬಾಬ್ಬಾ ಅಂದರೆ 30-50 ರುಪಾಯಿ ಉಳಿಸಿಕೊಳ್ಳಬಹುದು. ಕಾರ್ ಮಾಲಿಕನಿಗೂ 100 ರುಪಾಯಿಗಿಂತ ಹೆಚ್ಚು ಲಾಭವಾಗುವ ಸಾಧ್ಯತೆ ಇಲ್ಲ.
ಪೆಟ್ರೋಲ್ ಬಂಕ್ನಲ್ಲಿ ಉದ್ದದ ಕ್ಯೂ ಇದೆ ಎಂದಿಟ್ಟುಕೊಳ್ಳಿ. ಆ ಕ್ಯೂನಲ್ಲಿ ಗಾಡಿ ಆನ್ ಆಫ್ ಮಾಡುತ್ತ, ನಿಧಾನವಾಗಿ ಚಲಾಯಿಸುತ್ತ ಇರುವೆಯಂತೆ ಸಾಗುವಾಗ ಪೆಟ್ರೋಲ್ ಬಳಕೆ ಹೆಚ್ಚಿರುತ್ತದೆ. ಈ ನಷ್ಟದ ಲೆಕ್ಕ ಯಾರ ಗಮನಕ್ಕೂ ಬರುವುದೇ ಇಲ್ಲ. ಐವತ್ತು ನೂರು ರುಪಾಯಿ ಲಾಭಕ್ಕಾಗಿ ಹೆಚ್ಚು ಸಮಯವನ್ನೂ ವ್ಯರ್ಥ ಮಾಡುತ್ತಾರೆ.
ಒಟ್ಟಾರೆ ದರ ಹೆಚ್ಚಳ ಸುದ್ದಿ ಕಿವಿಗೆ ಬಿದ್ದಾಗ ಜನರು ಪೆಟ್ರೋಲ್ ಬಂಕ್ ಮುಂದೆ ಇರುವೆಗಳಂತೆ ಸಾಲುಸಾಲಾಗಿ ಮುಗಿಬೀಳುವುದು ನನ್ನ ಪಾಲಿಗೆ ಯಾವತ್ತಿಗೂ ಅಚ್ಚರಿಯ ವಿಷಯ.


Click it and Unblock the Notifications









