ಬೃಹತ್ ಉದ್ಯೋಗ ಕಡಿತಕ್ಕೆ ಮಾರುತಿ ಸುಜುಕಿ ಸಜ್ಜು
ಗಲಭೆಗೆ ಮುನ್ನ ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿ ಒಟ್ಟು 3,300 ಸಿಬ್ಬಂದಿಗಳಿದ್ದರು. ಅದರಲ್ಲಿ ಸುಮಾರು 1,528 ಖಾಯಂ ಸಿಬ್ಬಂದಿಗಳಾಗಿದ್ದರು. ನೂತನ ಉದ್ಯೋಗ ಕಡಿತದ ನಂತರ ಉಂಟಾಗುವ ಸಿಬ್ಬಂದಿ ಬಿಕ್ಕಟು ಪರಿಹರಿಸಲು ಕಂಪನಿಯು ಹೊಸ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಿದೆ. ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸೆಪ್ಟೆಂಬರ್ 2ರಿಂದ ಆರಂಭವಾಗಲಿದೆ.
"ಉತ್ಪಾದನಾ ವಿಭಾಗಕ್ಕೆ ನಾವು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡುವುದಿಲ್ಲ. ಆದರೆ ತಾತ್ಕಾಲಿಕವಾಗಿ ಸುಮಾರು ಶೇಕಡ 20ರಷ್ಟು ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಿದ್ದೇವೆ" ಎಂದು ಇತ್ತೀಚೆಗೆ ಮಾರುತಿ ಸುಜುಕಿ ಇಂಡಿಯಾ ಚೇರ್ಮನ್ ಆರ್. ಸಿ. ಭಾರ್ಗವ ಹೇಳಿದ್ದರು.
ಮಾರುತಿ ಸುಜುಕಿ ಕಂಪನಿಯು 500 ಖಾಯಂ ಸಿಬ್ಬಂದಿಗಳ ಉದ್ಯೋಗ ಕಡಿತ ಮಾಡಲು ನಿರ್ಧರಿಸಿರುವುದನ್ನು ವಿವಿಧ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಸಿಪಿಐ ನೇತೃತ್ವದ ಆಲ್ ಇಂಡಿಯಾ ಟ್ರೇಡ್ ಯುನಿಯನ್ ಕಾಂಗ್ರೆಸ್ ಮತ್ತು ಸಿಪಿಐ(ಎಂ) ನೇತೃತ್ವದ ಇಂಡಿಯನ್ ಟ್ರೇಡ್ ಯುನಿಯನ್ ವಿರೋಧಿಸಿವೆ.
ಈ ಎಲ್ಲಾ ಸಂಘಟನೆಗಳು ಇಂದು(ಆಗಸ್ಟ್ 21)ರಂದು ಸಭೆ ಸೇರಿ ಉದ್ಯೋಗ ಕಡಿತದ ವಿರುದ್ಧ ಬೃಹತ್ ರಾಲಿ ನಡೆಸುವ ಕುರಿತು ತೀರ್ಮಾನಿಸಲಿವೆ. ಇದರೊಂದಿಗೆ ಮಾರುತಿ ಗುರ್ ಗಾಂವ್ ಘಟಕದ ಮಾರುತಿ ಉದ್ಯೋಗ್ ಕಾಂಮ್ ಗಾರ್ ಯೂನಿಯನ್ ಕೂಡ ಉದ್ಯೋಗ ಕಡಿತ ವಿರೋಧಿಸಿದೆ.
ಮಾರುತಿ ಸುಜುಕಿ ಕಂಪನಿಯು ಈ ಎಲ್ಲಾ ವಿರೋಧಗಳ ನಡುವೆಯೂ ಉದ್ಯೋಗ ಕಡಿತ ಕುರಿತು ಯಾವ ತೀರ್ಮಾನ ಕೈಗೊಳ್ಳುವುದೋ ಕಾದು ನೋಡಬೇಕಿದೆ. ಇದರೊಂದಿಗೆ ಕಂಪನಿಯು ಗುಜರಾತಿನಲ್ಲಿ ಘಟಕ ನಿರ್ಮಿಸುವ ಕುರಿತು ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications









