100 ದೂರು ದಾಖಲಾದ್ದಲ್ಲಿ ಬಲವಂತವಾಗಿ ಕಾರು ಹಿಂಪಡೆತ
ದೇಶದ ವಾಹನ ಜಗತ್ತಿನ ಅತ್ಯಂತ ಕ್ರಾಂತಿಕಾರಿ ಬೆಳವಣಿಗೆ ಎಂದೇ ಬಣ್ಣಿಸಲಾಗಿರುವ ಹೊಸತಾದ 2014 ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯಲ್ಲಿ (ಆರ್ಟಿಎಸ್ಬಿ) ಸಾರಿಗೆ ನಿಯಮಗಳ ಉಲ್ಲಂಘನೆ ಬಗ್ಗೆ ಕಟ್ಟುನಿಟ್ಟಿನ ದಂಡ ಹಾಗೂ ಶಿಕ್ಷೆಯನ್ನು ಪ್ರಸ್ತಾಪಿಸಲಾಗಿದ್ದು, ಇದರಂತೆ ವಾಹನ ತಯಾರಕ ಸಂಸ್ಥೆಯ ಮಾದರಿಯ ನಿರ್ದಿಷ್ಟ ದೋಷದ ವಿರುದ್ಧ ಕನಿಷ್ಠ 100 ದೂರು ದಾಖಲಾದ್ದಲ್ಲಿ ಅಂತಹ ಮಾದರಿಯನ್ನು ಬಲವಂತವಾಗಿ ಹಿಂಪಡೆಯುವಂತೆ ಪ್ರಸ್ತಾಪಿಸಲಾಗಿದೆ.
ಇದರೊಂದಿಗೆ ವಾಹನ ತಯಾರಕ ಸಂಸ್ಥೆಯು ಬಹುದೊಡ್ಡ ಹಿನ್ನಡೆ ಅನುಭವಿಸಲಿದೆ. ಇನ್ನೊಂದೆಡೆ ಗ್ರಾಹಕರು ಇದರ ಫಲಶ್ರುತಿಗಳಾಗಲಿದ್ದು, ಗರಿಷ್ಠ ಗುಣಮಟ್ಟತೆಯ ಕಾರುಗಳನ್ನು ಮಾತ್ರ ರಸ್ತೆಗಿಳಿಸುವಲ್ಲಿ ವಾಹನ ತಯಾರಕ ಮೇಲೆ ಒತ್ತಡ ಹೇರಲಿದೆ.

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿದಾಗ ನಿಮಗೆ ತಿಳಿದಿರುವಂತೆಯೇ ಕಾರಿನಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಲ್ಲಿ ಅಂತಹ ವಾಹನ ತಯಾರಕ ಸಂಸ್ಥೆಗಳು ಆ ನಿರ್ದಿಷ್ಟ ಮಾದರಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದೆ.
ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಲಿದೆ. ವಾಹನ ನಿಯಂತ್ರಣ ಮತ್ತು ರಸ್ತೆ ಸುರಕ್ಷತೆ ಪ್ರಾಧಿಕಾರದಲ್ಲಿ ನಿರ್ದಿಷ್ಟ ದೋಷದ ಬಗ್ಗೆ 100ಕ್ಕೂ ಹೆಚ್ಚು ದೂರು ದಾಖಲಾದ್ದಲ್ಲಿ ಇಲಾಖೆಯು ಅಂತಹ ಮಾದರಿಗಳನ್ನು ಬಲವಂತವಾಗಿ ಹಿಂಪಡೆಯುವಂತೆ ಸ್ವಯಂಪ್ರೇರಿತವಾಗಿ ಆದೇಶ ಹೊರಡಿಸಲಿದೆ. ವಾಹನ ತಯಾರಿಕ ಸಂಸ್ಥೆಗಳ ಮೂಲ ತಯಾರಿಕಾ ವಸ್ತುಗಳಲ್ಲಿ (ಒಇಒ) ಇಂತಹ ತೊಂದರೆ ಕಂಡುಬಂದಲ್ಲಿ ಯಾವುದೇ ಹೆಚ್ಚುವರಿ ವೆಚ್ಚ ಈಡು ಮಾಡದೆಯೇ ಸಮಸ್ಯೆಯನ್ನು ಸರಿಪಡಿಸಬೇಕಾಗುತ್ತದೆ.
ಹಾಗೊಂದು ವೇಳೆ ಪ್ರಾಧಿಕಾರವು ನಿರ್ದಿಷ್ಟ ಮಾದರಿಯ ಮೂಲ ತಯಾರಿಕಾ ವಸ್ತುವನ್ನೇ ಹಿಂಪಡೆಯಲು ಸೂಚಿಸಿದರೆ ಒಇಒಗಳು ಅಂತಹ ಗ್ರಾಹಕರ ಸಂಪೂರ್ಣ ನಷ್ಟವನ್ನು ಸರಿದೂಗಿಸಬೇಕಾಗುತ್ತದೆ. ಇದುವರೆಗೆ ತಾತ್ಕಾಲಿಕ ರಿಕಾಲ್ ನೀತಿ ಅನುಸರಿಸುತ್ತಿರುವ ತಯಾರಕ ಸಂಸ್ಥೆಗಳು ಗ್ರಾಹಕರ ನಷ್ಟವನ್ನು ಸರಿದೂಗಿಸುತ್ತಿದೆಯೇ ಎಂಬುದಕ್ಕೆ ಯಾವುದೇ ಖಚಿತ ಮಾಹಿತಿಗಳಿಲ್ಲ.
ಕಳೆದ ಮೇ ತಿಂಗಳಲ್ಲಿ ಬ್ರೇಕ್ ಸಿಸ್ಟಂ ತೊಂದರೆಯನ್ನು ಗಮನಿಸಿದ್ದ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಮುಂಜಾಗ್ರತಾ ಕ್ರಮವಾಗಿ 31,000ದಷ್ಟು ತನ್ನ ಜನಪ್ರಿಯ ಅಮೇಜ್ ಕಾಂಪಾಕ್ಟ್ ಸೆಡಾನ್ ಮತ್ತು ಬ್ರಿಯೊ ಹ್ಯಾಚ್ಬ್ಯಾಕ್ ಕಾರನ್ನು ಹಿಂಪಡೆದಿತ್ತು. ಅದೇ ರೀತಿ 2013 ಜುಲೈನಲ್ಲಿ ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಒಂದು ಲಕ್ಷಕ್ಕೂ ಹೆಚ್ಚು ತವೆರಾ ಎಂಯುವಿ ಕಾರನ್ನು ಹಿಂಪಡೆದಿತ್ತು. ಮಾರುತಿ ಸುಜುಕಿ, ಟೊಯೊಟಾ, ಫೋರ್ಡ್, ಟಾಟಾ ಮೋಟಾರ್ಸ್ಗಳಂತಹ ಮುಂಚೂಣಿಯ ಸಂಸ್ಥೆಗಳು ಇದರಿಂದ ಹೊರತಾಗಿಲ್ಲ.
ಅಂದ ಹಾಗೆ ನೂತನ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಮುಂಬರುವ ಲೋಕಸಭಾ ಚಳಿಗಾಲದ ಅಧಿವೇಶದಲ್ಲಿ ಮಂಡನೆಯಾಗಲಿದೆ. ಭಾರತೀಯ ರಸ್ತೆಗಳನ್ನು ಸುರಕ್ಷಿತವಾಗಿಸುವುದು ಇಲಾಖೆಯ ಗುರಿಯಾಗಿದೆ. ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ ಅಪಘಾತಗಳ ಪ್ರಮಾಣವನ್ನು ಪ್ರತಿ ವರ್ಷ ಶೇಕಡಾ 20ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
ಮಸೂದೆಯಲ್ಲಿರುವ ಇನ್ನಷ್ಟು ಆಸಕ್ತಿದಾಯಕ ಅಂಶಗಳು:
- ಮಕ್ಕಳಿಗೂ ಹೆಲ್ಮೆಟ್,
- ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳಿಗೊಮ್ಮೆ ರಸ್ತೆ ಯೋಗ್ಯತಾ ಪರೀಕ್ಷೆ,
- ಚಾಲನೆ ವೇಳೆ ಹ್ಯಾಂಡ್ಸ್ ಫ್ರಿ ಡಿವೈಸ್, ಮೊಬೈಲ್ ನಿಷೇಧ,
- ಪ್ರತಿ ಕಾರಗಳಿಗೂ ರಿಯರ್ ಸೀಟ್ ಬೆಲ್ಟ್ ಕಡ್ಡಾಯ,
- ಹೊಸ ಕಾರುಗಳಿಗೆ ಕ್ರಾಶ್ ಟೆಸ್ಟ್ (ಅಪಘಾತ ಪರೀಕ್ಷೆ) ಕಡ್ಡಾಯ,
- ಪಾರದರ್ಶಕ ಒಂದೇ ವೇದಿಕೆಯ ಲೈಸನ್ಸ್ ವ್ಯವಸ್ಥೆ,
- ಬಸ್ ರಾಪಿಡ್ ಸಾರಿಗೆ (ಬಿಆರ್ಟಿ) ಮತ್ತು ಇಂಟ್ರಾ-ಸಿಟಿ ಟ್ರಾನ್ಸ್ಪೋರ್ಟ್,
- ಅಮಿತ ಭಾರ ತಡೆಯುವುದು,
- ರಸ್ತೆ ಅಪಘಾತಕ್ಕೊಳಗಾದವರಿಗೆ ಉಚಿತ ಚಿಕಿತ್ಸೆ (ಗೋಲ್ಡನ್ ಹವರ್ ವೇಳೆ),
- ಪ್ರತ್ಯೇಕ ಮೀಸಲಿಟ್ಟ ಅಪಘಾತ ನಿಧಿ ಮೂಲಕ ಎಲ್ಲ ರಸ್ತೆ ಸಂಚಾರಿಗಳಿಗೆ ಕಡ್ಡಾಯ ವಿಮೆ.


Click it and Unblock the Notifications