36 ಕೋಟಿ ವೆಚ್ಚದಲ್ಲಿ ಹೆಚ್ಡಿಕೆ ಕ್ಯಾಬ್ ಯೋಜನೆ-ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ತಳಮಳ
ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಪರ್ಯಾಯವಾಗಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಹೊಸ ಕ್ಯಾಬ್ ಸಂಸ್ಥೆಯೊಂದನ್ನು ಹುಟ್ಟುಹಾಕುತ್ತಿದ್ದು, ಹೊಸ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಬೆಂಗಳೂರು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಬಿಸಿಮುಟ್ಟಿಸಲು ಮುಂದಾಗಿದ್ದಾರೆ. ಹೆಚ್ಚುವರಿ ಆದಾಯಕ್ಕೆ ಕತ್ತರಿ ಹಾಕಿದ್ದರ ವಿರುದ್ಧ ಸಿಡಿದೆದ್ದಿರುವ ಕ್ಯಾಬ್ ಚಾಲಕರು, ತಮ್ಮದೇ ಸ್ಪಂತ ಆ್ಯಪ್ ಅಭಿವೃದ್ದಿಗೆ ಬೃಹತ್ ಯೋಜನೆ ರೂಪಿಸಿದ್ದಾರೆ.

ಹೆಚ್ಡಿಕೆ ಮುಖಂಡತ್ವದಲ್ಲಿ ಹೊಸ ಯೋಜನೆ
ಹೌದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಹೊಸ ಯೋಜನೆಯೊಂದನ್ನು ಜಾರಿಗೆ ತರುತ್ತಿದ್ದು, ಇದಕ್ಕಾಗಿ ರೂ.36 ಕೋಟಿ ವೆಚ್ಚದಲ್ಲಿ ಬೃಹತ್ ಯೋಜನೆಯನ್ನು ರೂಪಿಸಿದ್ದಾರೆ.

ಸೇವೆಗೆ ಹೊಸ ಆ್ಯಪ್ ಸಿದ್ಧ
ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದು ಈಗಾಗಲೇ ಹೊಸ ಆ್ಯಪ್ನ್ನು ಸಿದ್ಧಗೊಳಿಸಿದೆ. ವಿಶ್ವದರ್ಜೆಯ ಮುಖಪುಟ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ ತಂತ್ರಾಂಶ ಅಭಿವೃದ್ಧಿಗೊಳಿಸಲಾಗಿದೆ.

ಯಾವುದಕ್ಕೆ ಎಷ್ಟು ಖರ್ಚು?
ಒಟ್ಟು ರೂ.36 ಕೋಟಿ ವೆಚ್ಚದಲ್ಲಿ ಸಿದ್ಧಗೊಂಡಿರುವ ಯೋಜನೆಯಲ್ಲಿ ಈಗಾಗಲೇ ರೂ.5 ಕೋಟಿಯಷ್ಟು ಕಚೇರಿ ಸ್ಥಾಪನೆಗಾಗಿ ಮೀಸಲು ಇಡಲಾಗಿದೆ. ಜೊತೆಗೆ ರೂ.3 ಕೋಟಿ ವೆಚ್ಚದಲ್ಲಿ ಹೊಸ ಆ್ಯಪ್ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ.

ಇನ್ನು ರೂ.4 ಕೋಟಿಯಷ್ಟು ಆಡಳಿತ ವಿಭಾಗದ ನಿರ್ವಹಣೆಗಾಗಿ ಮತ್ತು ರೂ.6 ಕೋಟಿ ಜಾಹೀರಾತಿಗಾಗಿ ವೆಚ್ಚಮಾಡಲಾಗುತ್ತಿದ್ದು, ಉಬರ್ ಮತ್ತು ಓಲಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡಲು ಬೃಹತ್ ಯೋಜನೆ ಸಿದ್ಧಗೊಳಿಸಲಾಗುತ್ತಿದೆ.

ಹೆಚ್ಡಿಕೆ ನೇತೃತ್ವದಲ್ಲಿ ಮತ್ತೊಂದು ಸಭೆ
ಇದೇ ಏಪ್ರಿಲ್ 17ಕ್ಕೆ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಹೊಸ ಯೋಜನೆ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಹೆಸರು ಬದಲಾವಣೆಗೆ ಚಿಂತನೆ
ಹೌದು, ಇಷ್ಟು ದಿನಗಳ ಕಾಲ ಕುಮಾರಸ್ವಾಮಿಯವರ ನೇತೃತ್ವದ ಹೊಸ ಕ್ಯಾಬ್ ಸೇವಾ ಯೋಜನೆಗೆ "ಹೆಚ್ಡಿಕೆ ಕ್ಯಾಬ್" ಎಂದೇ ಹೇಳಲಾಗುತ್ತಿತ್ತು. ಆದ್ರೆ ಕುಮಾರಸ್ವಾಮಿಯವರ ಮಾರ್ಗದರ್ಶನದಂತೆ ಹೆಚ್ಡಿಕೆ ಬದಲಾಗಿ ಬೇರೆ ಹೆಸರು ಇಡಲು ಚಿಂತನೆ ನಡೆಸಲಾಗಿದೆ.

ಮೊದಲ ಹಂತದಲ್ಲಿ 10 ಸಾವಿರ ಟ್ಯಾಕ್ಸಿಗಳಿಂದ ಸೇವೆ
ಹೊಸ ಯೋಜನೆ ಆರಂಭವಾಗುತ್ತಿದ್ದಂತೆ ಮೊದಲ ಹಂತದಲ್ಲಿ 10 ಸಾವಿರ ಟ್ಯಾಕ್ಸಿಗಳಿಂದ ಬೆಂಗಳೂರು ನಗರದಲ್ಲಿ ಸೇವೆ ಆರಂಭಗೊಳಿಸಲಾಗುತ್ತಿದೆ. ಜೊತೆಗೆ ನೂತನ ಕಂಪನಿಗೆ ಆರಂಭದಲ್ಲಿ ಯಾವುದೇ ಆರ್ಥಿಕ ಸಂಕಷ್ಟ ಎದುರಾಗದಂತೆ ಯೋಜನೆ ಕೈಗೊಳ್ಳಲಾಗುತ್ತಿದೆ.

ಹೊಸ ಯೋಜನೆಗೆ ಹರಿದು ಬಂದ ಬಂಡವಾಳ
ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಹೊಸ ಯೋಜನೆಯೊಂದನ್ನು ರೂಪಿಸುತ್ತಿದ್ದಂತೆ ಈಗಾಗಲೇ ಹಲವಾರು ಉದ್ಯಮಿಗಳು ಬಂಡವಾಳ ಹಾಕಲು ಮುಂದಾಗಿದ್ದಾರೆ. ಆದ್ರೆ ಯಾರಿಂದ ಬಂಡವಾಳ ಪಡೆಯಬೇಕು ಎಂಬುವುದನ್ನು ನಿರ್ಧರಿಸಿಲ್ಲ.

ಆದಾಯಕ್ಕೆ ಹೊಸ ಸೂತ್ರ
ಟ್ಸಾಕ್ಸಿ ಸೇವೆಗಳಿಂದ ಹೆಚ್ಚುವರಿ ಆದಾಯಕ್ಕೆ ಹೊಸ ಸೂತ್ರವೊಂದನ್ನು ರೂಪಿಸಲಾಗಿದ್ದು, ಪ್ರತ್ಯೇಕ ಮನರಂಜನಾ ವಿಭಾಗ ತೆರೆಯಲು ನಿರ್ಧರಿಸಲಾಗಿದೆ. ಟ್ಯಾಕ್ಸಿಯಲ್ಲೇ ಎಲ್ಸಿಡಿ ಪರದೆ ಮೂಲಕ ಜಾಹೀರಾತು ನೀಡುವ ವ್ಯವಸ್ಥೆ ರೂಪಿಸಲಾಗಿದ್ದು, ಇದಕ್ಕಾಗಿ 12 ಕೋಟಿ ಖರ್ಚು ಮಾಡಲಾಗುತ್ತಿದೆ.

ಹೊಸ ಯೋಜನೆಯಿಂದ ಲಾಭವೇನು?
ಹೊಸ ಯೋಜನೆಯಿಂದ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರಿಗೆ ಕಮಿಷನ್ ಮಟ್ಟ ಹೆಚ್ಚಲಿದೆ. ಜೊತೆಗೆ ಹೊಸ ಆ್ಯಪ್ನಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಗಳು ದೊರೆಯಲಿದ್ದು, ವಿದೇಶಿ ಕಂಪನಿಗಳ ಹಾವಳಿಗೆ ಬ್ರೇಕ್ ಬಿಳಲಿದೆ.

ಹೊಸ ಆ್ಯಪ್ ಬಿಡುಗಡೆ ಯಾವಾಗ?
ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿರುವ ಹೊಸ ಆ್ಯಪ್ ಬಿಡುಗಡೆಯ ದಿನಾಂಕ ಇನ್ನು ನಿಗದಿಯಾಗಿಲ್ಲ. ಹೀಗಾಗಿ ಇಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿಳಲಿದೆ.

ಐದು ಕಡೆ ಕಚೇರಿ ಸ್ಥಾಪನೆ
ಹೊಸ ಯೋಜನೆಯ ನಿರ್ವಹಣೆಗಾಗಿ ನಗರದ 5 ಕಡೆಗಳಲ್ಲಿ ಕಚೇರಿ ತೆರೆಯಲಾಗುತ್ತಿದೆ. ಜೊತೆಗೆ ಪ್ರತಿ ಕೇಂದ್ರದಲ್ಲೂ 200 ಕ್ಯಾಬ್ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರಲಿದ್ದು, ಓಲಾ-ಉಬರ್ ಕಂಪನಿಯಿಂದ ನೊಂದಿದ್ದ ಚಾಲಕರಿಗೆ ಹೆಚ್ಡಿಕೆ ಕ್ಯಾಬ್ಸ್ ಹೊಸ ಭರವಸೆ ಮೂಡಿಸಿದೆ.

ಪ್ರತಿ ಕಿ.ಮಿ ದರ ನಿಗದಿ..!
ಮಿನಿ ಕ್ಯಾಬಿಗೆ ಕಿಲೋಮೀಟರ್ ಗೆ 10 ರೂ. ಹಾಗೂ ಪ್ರೈಮ್ ಕ್ಯಾಬಿಗೆ ಕಿಲೋಮೀಟರ್ ಗೆ 12 ರೂ. ದರ ನಿಗದಿ ಪಡಿಸಲಾಗಿದೆ. ಮೊದಲ 4 ಕಿಲೋಮೀಟರಿಗೆ ಇಂತಿಷ್ಟು ಎಂಬ ಯಾವುದೇ ಕಂಡೀಷನ್ ಗಳು ಇಲ್ಲಿರುವುದಿಲ್ಲ
ಎಂದು ಹೇಳಲಾಗಿದೆ.

ಹೊಸ ಯೋಜನೆಗೆ ಭಾರೀ ಜನ ಬೆಂಬಲ
ಹೆಚ್ಡಿಕೆ ನೇತೃತ್ವದಲ್ಲಿ ಸಿದ್ಧಗೊಳುತ್ತಿರುವ ಹೊಸ ಯೋಜನೆಗೆ ಈಗಾಗಲೇ ಭಾರೀ ಬೆಂಬಲ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಭಾರೀ ಚರ್ಚೆ ನಡೆಯುತ್ತಿದ್ದು, ಹೊಸ ಯೋಜನೆಗೆ ಅಭಿನಂದನೆಗಳ ಮಾಹಾಪೂರವೇ ಹರಿದುಬಂದಿದೆ.

ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಒತ್ತು
ಹೊಸ ಆ್ಯಪ್ ಮೂಲಕ ಉತ್ತಮ ಗುಣಮಟ್ಟದ ಸೇವೆ ಒದಗಿಸಲು ಯೋಜನೆ ಸಿದ್ಧಗೊಂಡಿದ್ದು, ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ
ಹೆಚ್ಡಿಕೆ ಆ್ಯಪ್ನಲ್ಲಿ ಕಂಪನಿಗೆ ಕೇವಲ 5ರಷ್ಟು ಕಮೀಷನ್ ಪಾವತಿಸಲು ನಿರ್ಧರಿಸಲಾಗಿದ್ದು, ಇದರಿಂದ ಪ್ರಯಾಣದ ವೆಚ್ಚ ತಗ್ಗಲಿದೆ. ಹೀಗಾಗಿ ಇದೇ ಲಾಭದಲ್ಲಿ ಪ್ರಯಾಣಿರಿಗೆ ಮಿನರಲ್ ವಾಟರ್, ಚಾಕೊಲೇಟ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುತ್ತಿದೆ.

ಪರ್ಯಾಯ ಸಂಸ್ಥೆ ನಿರ್ಮಾಣಕ್ಕೆ ಕಾರಣ?
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಕ್ಯಾಬ್ ಸೇವೆ ಒದಗಿಸುತ್ತಿರುವ ಓಲಾ ಮತ್ತು ಉಬರ್ ಸಂಸ್ಥೆಗಳು ಇತ್ತೀಚೆಗೆ ಕ್ಯಾಬ್ ಚಾಲಕರ ಬೇಡಿಕೆಗಳನ್ನು ಹತ್ತಿಕ್ಕುವ ಯತ್ನ ಮಾಡಿತ್ತು. ಅಲ್ಲದೇ ಹೆಚ್ಚಿನ ಆದಾಯಕ್ಕೆ ಕತ್ತರಿ ಹಾಕಿದ್ದು, ಹೊಸ ಸಂಸ್ಥೆ ನಿರ್ಮಾಣಕ್ಕೆ ಕಾರಣವಾಗಿದೆ.

ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ತಳಮಳ
ಹೆಚ್ಡಿಕೆ ನೇತೃತ್ವದಲ್ಲಿ ಶುರುವಾಗುತ್ತಿರುವ ಹೊಸ ಯೋಜನೆಯಿಂದ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಈಗಾಗಲೇ ತಳಮಳ ಶುರುವಾಗಿದೆ. ಹೀಗಾಗಿ ಹೊಸ ಯೋಜನೆಯಿಂದ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಚ ಎದುರಾಗಲಿದ್ದು, ಕ್ಯಾಬ್ ಚಾಲಕರ ದಿಟ್ಟತನಕ್ಕೆ ಬೆಚ್ಚಿಬಿದ್ದಿವೆ.

ಕೇವಲ ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೇ ದೆಹಲಿಯಲ್ಲೂ ಕ್ಯಾಬ್ ಚಾಲಕರು ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಅದಕ್ಕಾಗಿಯೇ ಹೊಸ ಆ್ಯಪ್ ಅಭಿವೃದ್ಧಿ ಮಾಡಿಕೊಂಡಿರುವ ಚಾಲಕರು ಸದ್ಯದಲ್ಲೇ ಸೇವೆ ಆರಂಭಿಸಲಿದ್ದಾರೆ.

ಸೇವಾ ಆ್ಯಪ್
ಉಬರ್ ಮತ್ತು ಓಲಾ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿರುವ ದೆಹಲಿ ಕ್ಯಾಬ್ ಚಾಲಕರು, 'ಸೇವಾ ಆ್ಯಪ್' ತೆರೆಯಲು ಯೋಜನೆ ರೂಪಿಸಿದ್ದಾರೆ.

ಒಟ್ಟಿನಲ್ಲಿ ದೇಶಾದ್ಯಂತ ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ಕ್ಯಾಬ್ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ವಾಧಿಕಾರಿ ಧೋರಣೆ ವಿರುದ್ಧ ಧ್ವನಿ ಎತ್ತುವ ಮೂಲಕ ವಿದೇಶಿ ಕಂಪನಿಗಳಿಗೆ ಭಾರೀ ಶಾಕ್ ನೀಡಿದ್ದಾರೆ.

ಇವೆಲ್ಲ ಕಾರಣಗಳಿಂದಾಗಿಯೇ ಹೆಚ್ಡಿಕೆ ಕ್ಯಾಬ್ಸ್ ಓಲಾ ಮತ್ತು ಊಬರ್ ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೆಳೆಯಲು ಸಜ್ಜಾಗುತ್ತಿವೆ. ಅಲ್ಲದೇ ಚಾಲಕರಿಗೂ ಉತ್ತಮ ಆದಾಯ ಜೊತೆಗೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆ ನೀಡುವ ಉದ್ದೇಶದಿಂದ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಹೀಗಾಗಿ ಹೊಸ ಯೋಜನೆ ಬೆಂಗಳೂರಿನಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೆ ಎಂಬುವುದೇ ಕುತೂಹಲ ಹುಟ್ಟುಹಾಕಿದೆ.


Click it and Unblock the Notifications








