ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ: ಮತ್ತೆ ಬಾಗಿಲು ತೆರೆದ ಬಾಷ್ ಕಂಪನಿ
ಕಲುಷಿತ ಬೆಳ್ಳಂದೂರು ಕೆರೆ ಜಲಾನಯನ ಪ್ರದೇಶದ ಎಲ್ಲಾ 488 ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಕೆಎಸ್ಪಿಸಿಬಿ ಆದೇಶ ಹಿನ್ನೆಲೆ ತಾತ್ಕಾಲಿಕವಾಗಿ ಕದ ಮುಚ್ಚಿದ್ದ ಬಾಷ್ ಕಂಪನಿ ಇಂದು ಮತ್ತೆ ಪುನಾರಂಭಗೊಂಡಿದೆ.
ಆಟೋ ಮೊಬೈಲ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಸಂಸ್ಥೆಯು, ಕಳೆದ 2 ದಿನಗಳ ಹಿಂದೆ ಕೆಎಸ್ಪಿಸಿಬಿ ಆದೇಶದಂತೆ ಆಡುಗೋಡಿಯಲ್ಲಿರುವ ಘಟಕವನ್ನು ಬಂದ್ ಮಾಡಿತ್ತು. ಆದ್ರೆ ಇದೀಗ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಂಡ ಹಿನ್ನೆಲೆ ಮತ್ತೆ ಪುನಾರಂಭಗೊಂಡಿದೆ.

ಜರ್ಮನ್ ಮೂಲದ ಬಾಷ್ ಸಂಸ್ಥೆಯು ಭಾರತದ ಪ್ರಮುಖ ಕಡೆಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಬೆಳ್ಳಂದೂರು ಕೆರೆಗೆ ವಿಷಕಾರಿ ತ್ಯಾಜ್ಯ ಬಿಡುತ್ತಿರುವ ಬಗ್ಗೆ ಆರೋಪ ಎದುರಾಗಿತ್ತು.

ಬೆಳ್ಳಂದೂರು ಕೆರೆಗೆ ಹಾನಿಕಾರಕ ತಾಜ್ಯಗಳನ್ನ ಬಿಡುತ್ತಿದ್ದ ಆರೋಪದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯು, ಕೋರಮಂಗಲ ಹಾಗೂ ಆಡುಗೋಡಿಯಲ್ಲಿರುವಘಟಕಗಳನ್ನ ಮುಚ್ಚುವಂತೆ ಆದೇಶಿಸಲಾಗಿತ್ತು.

ಕೆಎಸ್ಪಿಸಿಬಿ ಆದೇಶದಂತೆ ಮೇ 6ರಂದು 2 ಘಟಕಗಳನ್ನ ಬಂದ್ ಮಾಡಿದ್ದ ಬಾಷ್ ಸಂಸ್ಥೆಯು, ತಕ್ಷಣವೇ ಪರಿಸರ ಸ್ನೇಹಿ ಕ್ರಮಗಳನ್ನ ಕೈಗೊಂಡಿದ್ದರಿಂದ ಪುನಾಂರಭಕ್ಕೆ ಅನುಮತಿ ನೀಡಲಾಗಿದೆ.

ಬಾಷ್ ಸಂಸ್ಥೆಯು ತನ್ನ ಎರಡು ಘಟಕಗಳಿಂದಲೂ ವಿಲೇವಾರಿ ಮಾಡುವ ತ್ಯಾಜ್ಯಗಳನ್ನು ಶುದ್ಧಿಕರಿಸಿ ಬಿಡಲು ನಿರ್ಧರಿಸಿದ್ದು, ಕೆಎಸ್ಪಿಸಿಬಿ ನಿಯಮಗಳನ್ನು ತುರ್ತಾಗಿ ಅಳವಡಿಸಿಕೊಂಡಿದೆ.

ರಾಸಾಯನಿಕ ಪದಾರ್ಥಗಳನ್ನು ಕೈಗಾರಿಕೆಗಳು ಹೊರ ಹಾಕುತ್ತಿರುವ ಕುರಿತು ಜಂಟಿ ಪರಿಶೀಲನಾ ಸಮಿತಿ ಪರೀಕ್ಷಿಸುವವರೆಗೂ ಜಲಾನಯನ ಪ್ರದೇಶದ ಯಾವುದೇ
ಕೈಗಾರಿಕೆ ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ಎನ್ ಜಿಟಿ ಆದೇಶದ ಮೇರೆಗೆ ಕೆಎಸ್ ಪಿಸಿಬಿ ಮೇಲ್ಕಂಡ ನಿರ್ಣಯ ಕೈಗೊಂಡಿತ್ತು. ಆದ್ರೆ ಬಾಷ್ ದಿಢೀರ್ ಪುನಾರಂಭಗೊಂಡಿದೆ.

ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣವೇ ಮುಚ್ಚಬೇಕೆಂದು ಮಧ್ಯಂತರ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇವಲ ಬಾಷ್ ಅಷ್ಟೇ ಅಲ್ಲಾ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ, ಎಚ್ಎಎಲ್ನ ಏಳು ಘಟಕಗಳು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ), ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕ ಸೇರಿದಂತೆ ಇತರೆ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಿಗೂ ಭೀತಿ ಎದುರಾಗಿದೆ.

ಕೆರೆಯಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ
ತುರ್ತು ಕ್ರಮ ಕೈಗೊಂಡರೂ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರು ಕಂಗಾಲಾಗಿದ್ದು, ಸ್ವಲ್ಪ ಹೊತ್ತಿನ ನಂತರ ಬೆಂಕಿ ತಾನಾಗಿಯೇ ನಂದಿ ಹೋಗಿದೆ.


Click it and Unblock the Notifications