ಮಹಿಳೆಯರಿಗೆ ನೆಮ್ಮದಿ ಸುದ್ದಿ- ಚೈಲ್ಡ್ ಲಾಕ್ ಸೌಲಭ್ಯಕ್ಕೆ ಬಿತ್ತು ಬ್ರೇಕ್..!
ಇಷ್ಟು ದಿನಗಳ ಕಾಲ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಲಾಕ್ ಸಿಸ್ಟಂ ಬಗ್ಗೆ ಉತ್ತಮ ಅಭಿಪ್ರಾಯಗಳಿದ್ದರೂ ಅದರಿಂದ ಆಗುತ್ತಿರುವ ದುರಪಯೋಗ ಹೆಚ್ಚಾಗಿದ್ದವು. ಮಕ್ಕಳ ಸುರಕ್ಷತೆಗಾಗಿ ಇದ್ದ ಒಂದು ಮಹತ್ವದ ಸುರಕ್ಷಾ ಸೌಲಭ್ಯವು ಕೆಲವರ ಮಾಡುವ ತಪ್ಪಿನಿಂದಾಗಿ ಕಳಂಕಕ್ಕೆ ಈಡಾಗಿದೆ.

ಕ್ಯಾಬ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಓಲಾ, ಉಬರ್ ಕಾರುಗಳು ಸೇರಿದಂತೆ ಎಂ1 ಪಟ್ಟಿಯಲ್ಲಿ ಬರುವ ವಾಣಿಜ್ಯ ವಾಹನಗಳಲ್ಲಿ ಇಷ್ಟು ದಿನ ಬಳಕೆಯಾಗುತ್ತಿದ್ದ ಚೈಲ್ಡ್ ಲಾಕ್ ಸೌಲಭ್ಯಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಉಪಯೋಗಕ್ಕಿಂತ ಹೆಚ್ಚು ದುರ್ಬಳಿಕೆಯಾಗುತ್ತಿದ್ದ ಚೈಲ್ಡ್ ಲಾಕ್ ಸೌಲಭ್ಯವನ್ನು ಕಿತ್ತುಹಾಕಬೇಕು ಎನ್ನುವ ಬಹುಜನರ ಬೇಡಿಕೆಗೆ ಕೇಂದ್ರ ಸಾರಿಗೆ ಇಲಾಯೆಯು ಸಮ್ಮತಿ ಸೂಚಿಸಿದೆ.

ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಲಾಕ್ ಕಿತ್ತುಹಾಕುವ ಕುರಿತಂತೆ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರವು ಮಹತ್ವದ ಸೂಚನೆ ನೀಡಿದ್ದು, 2019ರ ಜುಲೈ ತಿಂಗಳಿಂದ ಎಲ್ಲಾ ವಾಣಿಜ್ಯ ಬಳಕೆಯ ಪ್ರಯಾಣಿಕರ ವಾಹನಗಳಲ್ಲಿರುವ ಚೈಲ್ಡ್ ಲಾಕ್ ಸಿಸ್ಟಂ ತೆಗೆಯುವಂತೆ ನಿರ್ದೇಶನ ಮಾಡಿದೆ.

2019ರ ಜುಲೈ ತಿಂಗಳಿಂದಲೇ ಹೊಸ ಕಾಯ್ದೆಯು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಎಂ 1 ಪಟ್ಟಿಯಲ್ಲಿ ಬರುವ ವಾಣಿಜ್ಯ ಬಳಕೆಯ ಎಂಟು ಆಸನಗಳನ್ನು ಒಳಗೊಂಡಿರುವ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿರುವ 'ಚೈಲ್ಡ್ ಲಾಕಿಂಗ್' ವ್ಯವಸ್ಥೆಯನ್ನು ಕಡ್ಡಾಯವಾಗಿ ತೆಗೆದು ಹಾಕಬೇಕಿದೆ.

ಚೈಲ್ಡ್ ಲಾಕ್ ವ್ಯವಸ್ಥೆಯು ಉತ್ತಮವಾಗಿದ್ದರೂ ಸಹ ಕಾರಿನಲ್ಲಿ ಇವುಗಳನ್ನು ಲಾಕ್ ಮಾಡುವ ಮೂಲಕ ಅಪರಾಧ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಅಲ್ಲದೇ ವಿಶೇಷವಾಗಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುವಾಗ ಸಾಕಷ್ಟು ಅಪರಾಧ ಪ್ರಕರಣಗಳು ದಾಖಲಾಗಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರ.

ಇದೇ ಕಾರಣಕ್ಕೆ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಲಾಕ್ ಸೇಫ್ಟಿ ವ್ಯವಸ್ಥೆಯನ್ನು ತೆಗೆದು ಹಾಕುವ ಕುರಿತಂತೆ ರಸ್ತೆ ಸಾರಿಗೆ ಇಲಾಖೆಯು ಕಳೆದ ಒಂದು ವರ್ಷದಿಂದ ಚರ್ಚೆ ನಡೆಸುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ಜುಲೈ ತಿಂಗಳಿನಿಂದ ಹೊಸ ಕಾಯ್ದೆ ಜಾರಿಗೆ ಮಾಡುತ್ತಿದೆ.

ಈ ಹಿಂದೆಯೇ ಈ ಬಗ್ಗೆ ಧ್ವನಿ ಎತ್ತಿದ್ದ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ ಸಂಸ್ಥೆಯು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಕುಲಂಕೂಶವಾಗಿ ಪರಿಶೀಲನೆ ಮಾಡಿದ್ದ ಸಿಜೆ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್ ಜಿ ಪಂಡಿತ್ ಅವರಿದ್ದ ನ್ಯಾಯ ಪೀಠವು ಚೈಲ್ಡ್ ದುರ್ಬಳಿಕೆ ಕುರಿತಂತೆ ಆತಂಕ ವ್ಯಕ್ತಪಡಿಸಿತ್ತು.

ಮುಂದುವರೆದು, ಚೈಲ್ಡ್ ಸೇಫ್ಟಿ ಲಾಕ್ ನಿಷ್ಕ್ರಿಯಗೊಳಿಸುವ ಕುರಿತು ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಹೈಕೋರ್ಟ್, ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ನಿಯಮಕ್ಕೆ ತಿದ್ದುಪಡಿಪಡಿ ತರುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶನ ಮಾಡಿತ್ತು.

ಆದ್ರೆ ಇದು ಕೇಂದ್ರ ಸಾರಿಗೆ ಇಲಾಖೆಯ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅಂತಿಮವಾಗಿ ಈ ಹಿಂದಿನ ಎಲ್ಲಾ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಚೈಲ್ಡ್ ಲಾಕ್ ಸೌಲಭ್ಯವನ್ನು ಕಿತ್ತು ಹಾಕುವ ನಿರ್ಧಾರಕ್ಕೆ ಬರಲಾಗಿದೆ.

ನಿಯಮ ಮೀರಿದ್ರೆ ದಂಡ..!
ಹೌದು, ಕೇಂದ್ರ ಸಾರಿಗೆ ಇಲಾಖೆಯು ನಿಗದಿ ಪಡಿಸಿರುವ ಅವಧಿಯೊಳಗೆ ಚೈಲ್ಡ್ ಲಾಕ್ ಸೌಲಭ್ಯವನ್ನು ತೆಗೆದುಹಾಕಬೇಕಿದ್ದು, ಒಂದು ವೇಳೆ ನಿಯಮ ಮೀರಿ ಚೈಲ್ಡ್ ಲಾಕ್ ಹಾಗೆಯೇ ಉಳಿಸಿಕೊಂಡಿದ್ದರೆ ದಂಡ ಕಟ್ಟಬೇಕಾಗುತ್ತೆ.

ಜೊತೆಗೆ ವಾಹನ ವಿಮೆ ನವೀಕರಣ ಸಂದರ್ಭದಲ್ಲೂ ಚೈಲ್ಡ್ ಲಾಕ್ ತೆಗೆದುಹಾಕದ ಹೊರತು ವಿಮೆ ನವೀಕರಣಕ್ಕೂ ಬ್ರೇಕ್ ಬೀಳಲಿದ್ದು, ಹೊಸ ಕಾಯ್ದೆ ಅನುಷ್ಠಾನದ ಬಗ್ಗೆ ಆಟೋ ತಂತ್ರಜ್ಞರು ಕೂಡಾ ಅಪಸ್ವರ ಎತ್ತಿದ್ದಾರೆ.

ಕೇವಲ ಮಹಿಳೆಯ ರಕ್ಷಣೆಗಾಗಿ ಚೈಲ್ಡ್ ಲಾಕ್ ಸಿಸ್ಟಂ ತೆಗೆದುಹಾಕುತ್ತಿರುವ ಕೇಂದ್ರ ಸಾರಿಗೆ ಇಲಾಖೆಯ ನಿರ್ಧಾರದಿಂದಾಗಿ ಮಕ್ಕಳಿಗೆ ಹೆಚ್ಚಿನ ತೊಂದರೆಯಾಗಬಹುದು ಎನ್ನಲಾಗುತ್ತಿದೆ. ಕಾರು ಚಾಲನೆ ಸಂದರ್ಭದಲ್ಲಿ ಮಕ್ಕಳು ಡೋರ್ ಓಪನ್ ಮಾಡಬಹುದಾದ ಸಾಧ್ಯತೆಗಳಿದ್ದು, ಇದರಿಂದ ಮತ್ತಷ್ಟು ದುರಂತ ಸಂಭವಿಸಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

ಇದು ಕೇವಲ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಮಾತ್ರವೇ ಎಂದೂ ಹೇಳಿದ್ದರೂ ಶಾಲಾ ಮಕ್ಕಳನ್ನು ಕರೆದುಕೊಂಡು ವಾಹನಗಳಲ್ಲಿ ಹಠಾತ್ ಆಗಿ ಡೋರ್ ತೆರೆಯುವ ಸಂದರ್ಭಗಳು ಎದುರಾಗಬಹುದಾಗಿದ್ದು, ಒಟ್ಟಿನಲ್ಲಿ ಹೊಸ ನಿಯಮದಿಂದಾಗಿ ವಾಹನ ಮಾಲೀಕರಲ್ಲೇ ಪರ-ವಿರೋಧ ಕೇಳಿಬರುತ್ತಿವೆ.


Click it and Unblock the Notifications








