ವಾಹನ ಚಾಲಕರಿಗೆ ಇನ್ಮುಂದೆ 'ಎಕ್ಸ್ಪ್ರೆಸ್ ವೇ'ಗಳಲ್ಲಿ ಉಚಿತವಾಗಿ ಕಾಫಿ, ಟೀ..!
ನಿಮಗೆಲ್ಲಾ ಗೊತ್ತಿರುವ ಹಾಗೆ ಇತ್ತೀಚೆಗೆ ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಲ್ಲಿ ಬಹುತೇಕ ಅಪಘಾತಗಳು ಎಕ್ಸ್ಪ್ರೆಸ್ ವೇ ಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಇದನ್ನು ತಡೆಯಲು ಎಕ್ಸ್ಪ್ರೆಸ್ ವೇ ಅಭಿವೃದ್ಧಿ ಮಂಡಳಿಯು ಹೊಸದೊಂದು ಪ್ಲ್ಯಾನ್ ಜಾರಿಗೆ ತರುತ್ತಿದೆ.

ರಸ್ತೆ ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ದೇಶದಲ್ಲಿ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ಮಾಡುತ್ತಿದ್ದರೂ ಸಹ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದ್ದು, ವಿಶ್ವ ಆರೋಗ್ಯ ಸಂಸ್ಥೆಯು ಮೊನ್ನೆಯಷ್ಟೇ ಭಾರತದಲ್ಲಿ ನಡೆಸಿದ ಸಮೀಕ್ಷೆಯೊಂದು ಕೂಡಾ ಭಾರೀ ಚರ್ಚೆಗೆ ಕಾರಣವಾಗಿತ್ತು.

ಡಬ್ಲ್ಯುಹೆಚ್ಓ ನಡೆಸಿದ ಸರ್ವೇ ಪ್ರಕಾರ, ಭಾರತದಲ್ಲಿ ಸಾವನ್ನಪ್ಪುವ ಪ್ರತಿ ಒಂಬತ್ತು ಜನರಲ್ಲಿ 1 ಜೀವ ಅಪಘಾತದಲ್ಲಿ ಬಲಿಯಾಗುತ್ತಿರುವ ಬಗ್ಗೆ ಆತಂಕಕಾರಿ ಸುದ್ದಿಯನ್ನು ಹೊರಹಾಕಿದ್ದು, ಕೇಂದ್ರ ಸಾರಿಗೆ ಇಲಾಖೆಗೆ ಹೊಸ ಸಮೀಕ್ಷೆಯ ವರದಿ ಸಲ್ಲಿಸಿತ್ತು.

ಸಮೀಕ್ಷೆಯ ಪ್ರಕಾರ 2017ರಲ್ಲಿ ದೇಶಾದ್ಯಂತ ಒಟ್ಟು 1.50 ಲಕ್ಷ ಜನ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ದಿನಂಪ್ರತಿ ಮರಣ ಹೊಂದುವವರ ಸಂಖ್ಯೆ 410 ಅಂದ್ರೆ ನಾವೇಲ್ಲಾ ನಂಬಲೇಬೇಕಾದ ಕರಾಳ ಸತ್ಯ.

ಇನ್ನೊಂದು ಆಘಾತಕಾರಿ ಅಂಶ ಅಂದ್ರೆ ಡಬ್ಲ್ಯುಹೆಚ್ಓ ನೀಡಿರುವ ವರದಿಯಲ್ಲಿ ಯುವಕ ಸಮುದಾಯ ಬಗ್ಗೆ ಆಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಸಾವನ್ನಪ್ಪಿರುವ 1.50 ಲಕ್ಷ ಜನರಲ್ಲಿ ಬಹುತೇಕರು 5 ವರ್ಷದಿಂದ 29 ವರ್ಷದೊಳಗಿನ ಯುವ ಸಮುದಾಯವೇ ಆಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಅದರಲ್ಲೂ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಎಕ್ಸ್ಪ್ರೆಸ್ ವೇಗಳಲ್ಲೂ ಇದೀಗ ಭಾರೀ ಪ್ರಮಾಣದ ಸಾವು-ನೋವುಗಳು ಹೆಚ್ಚುತ್ತಿದ್ದು, ಆಗ್ರಾ ಮತ್ತು ಲಕ್ನೌ ಸಂಪರ್ಕಿಸುವ ಎಕ್ಸ್ಪ್ರೆಸ್ ವೇ ಅಂತೂ ಸಾವಿನ ಕೂಪವಾಗಿ ಪರಿಣಮಿಸಿದೆ.

ಇದೇ ವರ್ಷ ಜನವರಿಯಲ್ಲಿ ಆರಂಭವಾಗಿರುವ ಆಗ್ರಾ ಮತ್ತು ಲಕ್ನೌ ನಡುವಿನ ಎಕ್ಸ್ಪ್ರೆಸ್ ವೇ ಇದುವರೆಗೂ 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ರಸ್ತೆಯಲ್ಲಿ ವಾಹನಗಳ ಅತಿಯಾದ ವೇಗವು ದಿನಂಪ್ರತಿ ಒಂದಿಲ್ಲಾ ಒಂದು ದುರಂತಗಳಿಗೆ ಕಾರಣವಾಗುತ್ತಿದೆ.

ಬರೋಬ್ಬರಿ 302 ಕಿ.ಮಿ ಅಂತರವಿರುವ ಆಗ್ರಾ-ಲಕ್ನೌ ನಡುವಿನ ಎಕ್ಸ್ಪ್ರೆಸ್ ಮಾರ್ಗದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ರ ಸಮಯದಲ್ಲೇ ಹೆಚ್ಚಿನ ಪ್ರಮಾಣದ ಅಪಘಾತಗಳು ಸಂಭವಿಸುತ್ತಿದ್ದು, ಈ ಹಿನ್ನೆಲೆ ವಾಹನ ಚಾಲಕರಿಗೆ ಅನುಕೂಲಕರವಾಗುವ ಒಂದು ಯೋಜನೆಯನ್ನು ತೆರೆಯಲಾಗುತ್ತಿದೆ.

ಆಗ್ರಾ-ಲಕ್ನೌ ನಡುವಿನ ಟೋಲ್ಗಳಲ್ಲಿ ವಾಹನ ಚಾಲಕರಿಗೆ ಉಚಿತವಾಗಿ ಕಾಫಿ, ಟೀ ಒದಗಿಸುವ ಮೂಲಕ ಅಪಘಾತಗಳನ್ನು ತಗ್ಗಿಸುವ ಪ್ಲ್ಯಾನ್ ಮಾಡಲಾಗಿದ್ದು, ರಾತ್ರಿ ಸಮಯದಲ್ಲಿ ಚಾಲಕರು ನಿದ್ದೆಗೆ ಜಾರಿ ಆಗಬಹುದಾದ ದುರಂತಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಟೋಲ್ ಪಾವತಿಸುವ ಸಂದರ್ಭದಲ್ಲೇ ಆ ವಾಹನದ ಚಾಲಕನಿಗೆ ಕಾಫಿ, ಟೀ ನೀಡಲಿರುವ ಟೋಲ್ ಸಿಬ್ಬಂದಿಯು, 302 ಕಿ.ಮಿ ದೂರದ ಪ್ರಯಾಣದಲ್ಲಿ ಸುರಕ್ಷೆಯ ಕುರಿತಾಗಿ ಕೆಲವು ನಿಬಂಧನೆಗಳನ್ನು ಸಹ ತಿಳಿಹೇಳುತ್ತಾರೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಆಗ್ರಾ-ಲಕ್ನೌ ನಡುವಿನ ಎಕ್ಸ್ಪ್ರೆಸ್ ವೇ ನಲ್ಲಿ ವರ್ಷದ ಬಹುತೇಕ ದಿನ ಮುಂಜಾನೆಯ ಅವಧಿಯಲ್ಲಿ ದಟ್ಟಮಂಜು ಆವರಿಸುವ ಪರಿಣಾಮವೇ ಇಲ್ಲಿ ಹೆಚ್ಚಿನ ಮಟ್ಟದ ಅಪಘಾತಗಳಿಗೆ ಕಾರಣವಾಗುತ್ತಿದೆ.
MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಹೀಗಾಗಿ ವಾಹನ ಚಾಲಕರಿಗೆ ಅನೂಕಲವಾಗುವಂತೆ ಕಾಫಿ, ಟೀ ಜೊತೆಗೆ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗುತ್ತಿರುವ ಎಕ್ಸ್ಪ್ರೆಸ್ ವೇ ಅಭಿವೃದ್ಧಿ ಮಂಡಳಿಯು ಅಮಾಯಕರ ಜೀವಗಳನ್ನು ಉಳಿಸಿಕೊಳ್ಳುವ ಹೊಸ ಪ್ರಯತ್ನ ಮಾಡುತ್ತಿದೆ ಎನ್ನಬಹುದು.
Source: timesofindia


Click it and Unblock the Notifications








