ಶಾಕಿಂಗ್ ನ್ಯೂಸ್: 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಕಾರುಗಳು ಬ್ಯಾನ್
ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನ್ ಮಾಡಿರುವ ಸುಪ್ರೀಂಕೋರ್ಟ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಹಳೆಯ ಕಾರುಗಳನ್ನು ಬ್ಯಾನ್ ಮಾಡಿದೆ.

ಸುಪ್ರೀಂಕೋರ್ಟ್ ತೀರ್ಪಿನಂತೆ ಇನ್ಮುಂದೆ ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ಮೇಲ್ಪಟ್ಟ ಪೆಟ್ರೋಲ್ ಕಾರುಗಳು ರಸ್ತೆಗಿಳಿಯದಂತೆ ನಿಷೇಧ ಹೇರಲಾಗಿದ್ದು, ತಕ್ಷಣವೇ ಹೊಸ ಕಾಯ್ದೆ ಜಾರಿಗೆ ಬರುವಂತೆ ಹೊಸ ನಿಯಮವನ್ನು ರೂಪಿಸಿ ಎಂದು ಕೇಂದ್ರ ಸಾರಿಗೆ ಇಲಾಖೆಗೆ ಮಹತ್ವದ ನಿರ್ದೇಶನ ನೀಡಿದೆ.

ಸಮ-ಬೆಸ ಪದ್ದತಿಯಂತೆ ಕಾರುಗಳ ಓಡಾಟಕ್ಕೆ ಅನುಮತಿಯ ಹೊರತಾಗಿಯೂ ಮಾಲಿನ್ಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಳೆಯ ಕಾರುಗಳನ್ನು ಬ್ಯಾನ್ ಮಾಡಲಾಗಿದ್ದು, ಈ ಹಿಂದೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದೆ.

ನ್ಯಾ. ಮದನ್ ಬಿ ಲೋಕೂರ್, ನ್ಯಾ. ಎಸ್ ಅಬ್ದುಲ್ ನಝೀರ್ ಮತ್ತು ನ್ಯಾ. ದೀಪಕ್ ಗುಪ್ತಾ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ವೆಬ್ಸೈಟ್ನಲ್ಲಿ ನಿಷೇಧಗೊಳ್ಳಲಿರುವ ವಾಹನಗಳ ಮಾಹಿತಿಯನ್ನು ಈ ಕೂಡಲೇ ಪ್ರಕಟಿಸುವಂತೆಯೂ ಆದೇಶಿಸಿದೆ.

ಇದರೊಂದಿಗೆ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರಕ್ಕೆ (ಇಪಿಸಿಎ) ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಗ್ರ್ಯಾಪ್) ಅಡಿಯಲ್ಲಿ ಮಾಲಿನ್ಯ ತಡೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಹ ನೀಡಿರುವ ಸುಪ್ರೀಂಕೋರ್ಟ್, ಯಾವುದೇ ಕಾರಣಕ್ಕೂ ದೆಹಲಿ ಸುತ್ತಮುತ್ತ ಹಳೆಯ ಕಾರುಗಳು ಪ್ರವೇಶ ಮಾಡದಂತೆ ಎಚ್ಚಕೆ ವಹಿಸಿ ಎಂದಿದೆ.

ಇದ್ಕಕಾಗಿಯೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತತ್ಕ್ಷಣವೇ ಸಾಮಾಜಿಕ ಮಾಧ್ಯಮ ಖಾತೆ ತೆರೆದು ಜನಸಾಮಾನ್ಯರಿಗೆ ಮಾಲಿನ್ಯದ ಬಗ್ಗೆ ದೂರು ನೀಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಹ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಬೆಂಗಳೂರಿನಲ್ಲೂ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನಿಷೇಧ.. ?!
ಹೆಚ್ಚಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಸಹ ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ನಂತರ ಅತಿ ಹೆಚ್ಚು ವಾಯುಮಾಲಿನ್ಯ ನಗರ ಎಂಬ ಆತಂಕ ಮೂಡಿಸಿರುವ ಬೆಂಗಳೂರಿನಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಿದ್ದು, ಅವುಗಳಿಂದ ವಿಷಕಾರಿ ಅನಿಲ ಹೊರಸೂಸುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಡ ಹೆರುತ್ತಿದೆ.

ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಹಳೆ ವಾಹನಗಳನ್ನು ನಿಷೇಧ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು, ಹೊಸ ವಾಹನಗಳು ರಸ್ತೆಗಿಳಿಯದಂತೆ ನಿಯಂತ್ರಿಸಲು ಪಾರ್ಕಿಂಗ್ ಶುಲ್ಕ ಹಾಗೂ ರಸ್ತೆ ತೆರಿಗೆ ಮತ್ತು ವಿಮಾ ದರಗಳನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆಯೆಂತೆ.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಸದ್ಯ ಚಾಲ್ತಿಯಲ್ಲಿರುವ ಹಳೆಯ ವಾಹನಗಳು ಹೊರಸೂಸುವ ವಿಷಕಾರಿ ಅನಿಲದಿಂದ ನಗರದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದ್ದು, ಹದಿನೈದು ವರ್ಷಕ್ಕಿಂತ ಹಳೆಯ ಪೆಟ್ರೋಲ್ ಡೀಸೆಲ್ ವಾಹನಗಳ ಸಂಚಾರ ಬ್ಯಾನ್ ಮಾಡುವಂತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ 2016 ರಲ್ಲೇ ಸರ್ಕಾರದ ಗಮನಕ್ಕೆ ತಂದಿದ್ದರೂ ಸಹ ಇದನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದು, ಈಗ ಕೆಎಸ್ಪಿಸಿಬಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಹಳೆಯ ವಾಹನಗಳನ್ನು ಬ್ಯಾನ್ ಮಾಡುವಂತೆ ಪತ್ರ ಬರೆಯಲಾಗಿದೆ ಎಂದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕೃತ ಮಾಹಿತಿ ನೀಡಿದೆ.
MOST READ: OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

ಬೆಂಗಳೂರು ಒಂದರಲ್ಲೇ 70 ಲಕ್ಷಕ್ಕೂ ಅಧಿಕ ವಾಹನಗಳಿದ್ದು, 32,000 ವಾಹನಗಳ ಹೊಗೆ ತಪಾಸಣೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿಸಿದೆ. ಇದರಲ್ಲಿ 14% ರಷ್ಟು ಪೆಟ್ರೋಲ್ ವಾಹನಗಳು ಹಾಗೂ 25% ರಷ್ಟು ಡೀಸೆಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವುದು ಖಚಿತವಾಗಿದೆ.

ಹೀಗಾಗಿ ಹೆಚ್ಚಿದ ವಿಷ ಗಾಳಿಯ ಮಟ್ಟವು ರಾಷ್ಟ್ರೀಯ ಮಾನದಂಡಕ್ಕಿಂತ ಕಡಿಮೆ ಇರುವುದು ಗೊತ್ತಾಗಿದೆ. ಇದೇ ಅಂಶಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೆಚ್ಚಿಸಲು ಹಾಗೇ ಪಾರ್ಕಿಂಗ್ ಶುಲ್ಕ ಹೆಚ್ಚಿಸುವಂತೆಯೂ ಮಂಡಳಿ ವರದಿ ನೀಡಿದೆ ಎನ್ನಲಾಗಿದೆ.
MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ಮುಂದುವರಿದು, ಬೆಂಗಳೂರು ನಗರದಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನು ರಿಂಗ್ ರಸ್ತೆಗಳತ್ತ ಡೈವರ್ಟ್ ಮಾಡಬೇಕು ಎಂದಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾನೂನು ಮೀರಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು ಎಂಬ ಸಲಹೆ ನೀಡಿಯಂತೆ.


Click it and Unblock the Notifications








