ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!
ಕೆಲವೊಂದು ಸಂಸ್ಥೆಗಳು ಲಾಭದಲ್ಲಿದ್ದರೂ ಕಷ್ಟಪಟ್ಟ ದುಡಿಯುವ ಉದ್ಯೋಗಿಗಳಿಗೆ ಸರಿಯಾಗಿ ಸಂಬಳವನ್ನು ನೀಡದೆ ಸತಾಯಿಸುವ ಅದೆಷ್ಟೋ ಸಂಸ್ಥೆಗಳ ಬಗ್ಗೆ ಕೇಳಿದ್ದೇವೆ. ಜೊತೆಗೆ ಕೆಲವೊಮ್ಮೆ ಅದು ನಮ್ಮಅನುಭವಕ್ಕೂ ಬಂದಿದ್ದು ಉಂಟು. ಆದ್ರೆ ಇಲ್ಲೊಬ್ಬ ಉದ್ಯಮಿ ಮಾತ್ರ ತನ್ನ ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿರುವ ಉದ್ಯೋಗಿಗಳಿಗೆ ನೀಡಿರುವ ಉಡುಗೊರೆ ಬಗ್ಗೆ ಕೇಳಿದ್ರೆ ಅಚ್ಚರಿಯಾಗುತ್ತೆ.

ಹೌದು, ಅದು ಬೇರೆ ಯಾರು ಅಲ್ಲ. ಗುಜರಾತ್ನಲ್ಲಿ ಭಾರೀ ಜನಪ್ರಿಯತೆ ಸಾಧಿಸಿರುವ ಹರೇ ಕೃಷ್ಣ ಎಕ್ಸ್ಪೋರ್ಟ್ ಸಂಸ್ಥೆಯು ತನ್ನ ಉದ್ಯೋಗಿಗಗಳಿಗೆ ಉಡುಗೊರೆ ನೀಡುವುದರಲ್ಲಿ ಈಗಾಗಲೇ ಸಾಕಷ್ಟು ಸುದ್ದಿಮಾಡಿದ್ದು, ಇದೀಗ ದೀಪಾವಳಿ ವಿಶೇಷತೆ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಫ್ಲ್ಯಾಟ್ ಮತ್ತು ಕಾರುಗಳನ್ನು ಗಿಫ್ಟ್ ಆಗಿ ನೀಡಿದೆ.

ಕಳೆದ ವರ್ಷ ದೀಪಾವಳಿ ಹಬ್ಬದ ವೇಳೆಯು ತನ್ನ ನೌಕರರಿಗೆ ಕಾರು, ಮನೆ, ಒಡವೆಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹರೇ ಕೃಷ್ಣ ಎಕ್ಸ್ಪೋರ್ಟ್ ಸಂಸ್ಥೆಯ ಮಾಲೀಕರಾಗಿರುವ ಸಾವ್ಜಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ ಬರೋಬ್ಬರಿ 1600 ಕಾರುಗಳನ್ನು ಗಿಫ್ಟ್ ಆಗಿ ನೀಡಿದ್ದು, ಕಾರು ಆಯ್ಕೆಯ ಬದಲಾಗಿ ಕೆಲವು ಉದ್ಯೋಗಿಗಳಿಗೆ ಫ್ಲ್ಯಾಟ್ಗಳನ್ನು ಹಸ್ತಾಂತರ ಮಾಡಿದ್ದಾರೆ.

ವಿಶೇಷ ಅಂದ್ರೆ ಕಳೆದ 2 ತಿಂಗಳ ಹಿಂದೆಯು ಸಹ ಹರೇ ಕೃಷ್ಣ ಎಕ್ಸ್ಪೋರ್ಟ್ ಸಂಸ್ಥೆಯಲ್ಲಿ ಸತತ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮೂವರು ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು ಕೂಡಾ ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶಿಯಲ್ಲೂ ಸುದ್ದಿಯಾಗಿತ್ತು.

ಸೂರತ್ನಲ್ಲಿ ವಜ್ರದ ವ್ಯಾಪಾರಿಯಾಗಿರುವ ಸಾವ್ಜಿಯವರು ತಮ್ಮ ಸಂಸ್ಥೆಯ ರಜತ ಮಹೋತ್ಸವನ್ನು ಅದ್ಧೂರಿ ಆಚರಿಸಿದಲ್ಲದೆ, ಈ ಸಂಭ್ರಮದಲ್ಲಿ ತಮ್ಮ ನೌಕರರಿಗೆ ತಲಾ ರೂ.1 ಕೋಟಿ ಮೌಲ್ಯದ ಬೆಂಝ್ ಜಿಎಲ್ಎಸ್ ಎಸ್ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.

ಸುಮಾರು 25 ವರ್ಷಗಳಿಂದ ಅದೇ ಸಂಸ್ಥೆಯಲ್ಲಿ ದುಡಿಯುತ್ತಿರುವ ಹಿರಿಯ ಸಿಬ್ಬಂದಿಯಾದ ನೀಲೇಶ್ ಜಾದಾ, ಮುಖೇಶ್ ಚಂದ್ಪರ್ ಮತ್ತು ಮಹೇಶ್ ಚಂದ್ಪರ್ ಅವರಿಗೆ ಈ ದುಬಾರಿ ಉಡುಗೊರೆಯನ್ನು ನೀಡಲಾಗಿತ್ತು.

ಇದಷ್ಟೇ ಅಲ್ಲದೇ 2011ರಿಂದಲೂ ದೀಪಾವಳಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಹರೇ ಕೃಷ್ಣ ಎಕ್ಸ್ಸ್ಪೋರ್ಟ್ ಸಂಸ್ಥೆಯು ಈ ರೀತಿ ನೌಕರರಿಗೆ ಬೋನಸ್ ನೀಡುತ್ತಾ ಬಂದಿದ್ದು, ಇದರ ಜೊತೆಗೆ ನೌಕರರ ಆರೋಗ್ಯ ಮತ್ತು ಅವರ ಮಕ್ಕಳ ಶಿಕ್ಷಣಕ್ಕೂ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ.

ಸದ್ಯ ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಸಂಸ್ಥೆಯಲ್ಲಿ ಸುಮಾರು 5,500 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ 6 ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತಿದೆ. ವಜ್ರದ ವ್ಯಾಪಾರವಾಗಿರುವ ಹಿನ್ನೆಲೆ ಲಾಭಾಂಶ ಕೂಡಾ ಜೋರಾಗಿರುವುದಲ್ಲೇ ಅದೇ ಪ್ರಮಾಣದಲ್ಲಿ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ದೊರೆಯುತ್ತಿರುವುದು ಮುಖ್ಯ ವಿಚಾರ.

ಪ್ರಧಾನಿಯಿಂದಲೇ ಕೀ ಹಸ್ತಾಂತರ
ನಿನ್ನೆಯಷ್ಟೇ ದೆಹಲಿಯಲ್ಲಿ ನಡೆದ ಪ್ರಧಾನಿ ನೇತೃತ್ವದ ಐಟಿ ಉದ್ಯೋಗಿಗಳು ಮತ್ತು ಸಂಘ-ಸಂಸ್ಥೆಗಳನ್ನು ಸಮಾಜ ಸೇವೆಯತ್ತ ಸೆಳೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉದ್ಯಮಿ ಸಾವ್ಜಿ ಧೋಲಾಕಿಯಾ ಅವರು ತಮ್ಮ ಸಂಸ್ಥೆಯ ಇಬ್ಬರು ಮಹಿಳಾ ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಕೀ ಹಸ್ತಾಂತರ ಮಾಡಿಸಿದ್ದು ಮತ್ತೊಂದು ವಿಶೇಷ.

ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡು ಪರಿಸ್ಥಿತಿಯಲ್ಲಿದ್ದ ಸಾವ್ಜಿ ಧೋಲಾಕಿಯಾ ಅವರಿಗೆ ಕೈ ಹಿಡಿದ್ದು ವಜ್ರದ ಡಿಸೈನ್ ಕೌಶಲ್ಯ ಅಂದ್ರೆ ತಪ್ಪಾಗುವುದಿಲ್ಲ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಸಾವ್ಜಿ ಹಲವಾರು ಸಂಸ್ಥೆಗಳಲ್ಲಿ ದುಡಿದು ಕೊನೆಗೆ ತನ್ನದೇ ಆದ ಹರೇ ಕೃಷ್ಣ ಎಕ್ಸ್ಪೋರ್ಟ್ ಸ್ಥಾಪಿಸಿದ್ದರು.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಸಾವ್ಜಿ ಧೋಲಾಕಿಯಾ ಸೌರಾಷ್ಟ್ರ ಪ್ರದೇಶದ ಅಮ್ರೆಲಿ ಜಿಲ್ಲೆಯ ದೂಧಲಾ ಹಳ್ಳಿಯಿಂದ ಬಂದವರು. ತಮ್ಮ ಚಿಕ್ಕಪ್ಪ ಕಡೆಯಿಂದ ಸಾಲ ಪಡೆದು ಬಿಸಿನೆಸ್ ಮಾಡಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ಸುಮಾರು 30 ವರ್ಷಗಳ ಹಿಂದೆಯೇ ಹರೇ ಕೃಷ್ಣ ಎಕ್ಸ್ಪೋರ್ಟ್ ಸಂಸ್ಥೆಯು ಸೂರತ್ನಲ್ಲಿ ಕಾರ್ಯಾಚರಣೆಯಲ್ಲಿದ್ದು, ಇದೀಗ ಪ್ರತಿ ವರ್ಷ ಸಾವಿರಾರು ಕೋಟಿ ಲಾಭಾಂಶ ತಂದುಕೊಡುವ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದುನಿಂತಿದೆ.
MOST READ: ಬಿಎಸ್-4 ವಾಹನಗಳ ನಿಷೇಧಕ್ಕೆ ಮೂಹೂರ್ತ ಫಿಕ್ಸ್ ಮಾಡಿದ ಸುಪ್ರೀಂಕೋರ್ಟ್..!

ಇಲ್ಲಿ ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಸಾವಿರಾರು ಕೋಟಿ ಒಡೆಯನಾಗಿರುವ ಹರೇ ಕೃಷ್ಣ ಎಕ್ಸ್ಪೋರ್ಟ್ ಸಂಸ್ಥೆಯ ಮಾಲೀಕರಾದ ಸಾವ್ಜಿ ಧೋಲಾಕಿಯಾ ಈ ಹಿಂದ ತಮ್ಮ ಮಗನಿಗೆ ಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಮನೆಯಿಂದಲೇ ಹೊರಹಾಕಿದ್ದರಂತೆ. ಇದೀಗ ಅದೇ ಸಂಸ್ಥೆಯಲ್ಲಿ ನೌಕರನಾಗಿ ದುಡಿಯುತ್ತಿರುವ ಅವರ ಮಗ ಇತರೆ ಉದ್ಯೋಗಿಗಳಂತೆ ಕಷ್ಟಪಟ್ಟು ಸಂಸ್ಥೆಗಾಗಿ ಶ್ರಮವಹಿಸುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.


Click it and Unblock the Notifications








