ರಸ್ತೆ ಸುರಕ್ಷತೆಗಾಗಿ 14 ಸಾವಿರ ಕೋಟಿ ಬಿಡುಗಡೆಗೆ ಒಪ್ಪಿದ ಕೇಂದ್ರ ಸರ್ಕಾರ
ಸರ್ಕಾರವು ಹೈವೇಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್ಗಳನ್ನು ಪತ್ತೆ ಹಚ್ಚಿ, ಈ ಸಮಸ್ಯೆಗೆ ಪರಿಹಾರ ನೀಡಲು ನಿರ್ಧರಿಸಿದೆ. ರೂ.14,000 ಕೋಟಿ ವೆಚ್ಚವಾಗಲಿರುವ ಈ ಯೋಜನೆಗೆ ಹಣಕಾಸು ಸಚಿವಾಲಯವು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದು, ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ತಿಳಿಸಿದೆ. ಅಪಘಾತ ಪ್ರಮಾಣವು ಅಪಾಯಕಾರಿಯಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ಕೈಗೊಳ್ಳುತ್ತಿದೆ.

ಇತ್ತೀಚೆಗೆ ನಡೆದ ಲೋಕಸಭಾ ಅಧಿವೇಶನದಲ್ಲಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರು ಈ ಯೋಜನೆಯ ಕುರಿತು ಮಾಹಿತಿ ನೀಡಿದರು. ಲೋಕಸಭಾ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ನಿತಿನ್ ಗಡ್ಕರಿರವರು, ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶವು ಈಡೇರಿಲ್ಲ.

ಆದ ಕಾರಣ ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲು ನಾವು ರೂ.14,000 ಕೋಟಿಗಳ ಯೋಜನೆ ಘೋಷಿಸಿದ್ದು, ಇದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಬಹುದು. ಈ ಯೋಜನೆಗೆ ಹಣಕಾಸು ಸಚಿವಾಲಯವು ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಭಾರತದ ಆಟೋಮೊಬೈಲ್ ಉದ್ಯಮವು ವಿಶ್ವದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದ್ದು, ಇನ್ನೂ ವೇಗವಾಗಿ ಬೆಳೆಯುತ್ತಿದೆ. ಹೊಸ ವಾಹನಗಳ ತಯಾರಕರು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿ ಹೊಸ ಕಾರುಗಳು ಹಾಗೂ ಬೈಕುಗಳನ್ನು ಬಿಡುಗಡೆಗೊಳಿಸುತ್ತಲೇ ಇದ್ದಾರೆ.

ಈಗಾಗಲೇ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಸಹ ಹೊಸ ವಾಹನಗಳ ಬಿಡುಗಡೆಗೆ ಯೋಜಿಸುತ್ತಿವೆ. ಪ್ರಪಂಚದ ಇತರ ವಾಹನ ಮಾರುಕಟ್ಟೆಗಳಂತೆ ಭಾರತವು ಸಹ ಹಳೆಯ ವಾಹನಗಳನ್ನು ರಸ್ತೆಗಿಳಿಸದಂತಹ ಸ್ಕ್ರ್ಯಾಪಿಂಗ್ ನೀತಿಯನ್ನು ಹೊಂದಿದ್ದರೆ ಇವುಗಳನ್ನು ಸರಿ ಪಡಿಸಬಹುದಿತ್ತು. ಇವುಗಳೆಲ್ಲವೂ ರಸ್ತೆ ಹಾಗೂ ಹೆದ್ದಾರಿಗಳ ದಟ್ಟಣೆಗೆ ಕಾರಣವಾಗುತ್ತಿವೆ. ಇವುಗಳ ಜೊತೆಗೆ ಅನೇಕ ವಾಹನ ಚಾಲಕರು ಅನುಸರಿಸುವ ಅಜಾಗರೂಕ ಚಾಲನೆಯು ಅಪಘಾತಕ್ಕೆ ಕಾರಣವಾಗುತ್ತಿವೆ.

ರಾಷ್ಟ್ರೀಯ ಅಪರಾಧ ನಿಯಂತ್ರಣ ಬ್ಯೂರೋದ ವರದಿಯ ಪ್ರಕಾರ, ಭಾರತದಲ್ಲಿ 2016ರಲ್ಲಿ ಒಟ್ಟು 4,80,652 ರಸ್ತೆ ಅಪಘಾತಗಳು ಸಂಭವಿಸಿವೆ. ಅವುಗಳ ಪೈಕಿ 1,50,785 ಜನರು ಸಾವನ್ನಪ್ಪಿದ್ದರೆ, 4,94,624 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 2017 ಮತ್ತು 2018 ರ ಅಂಕಿಅಂಶಗಳು ಇನ್ನೂ ಪ್ರಕಟಗೊಂಡಿಲ್ಲವಾದರೂ ಇವುಗಳ ಸಂಖ್ಯೆಯು ಖಂಡಿತವಾಗಿ ಹೆಚ್ಚಾಗಲಿರುವುದು ಖಚಿತವಾಗಿದೆ. ಈ ಅಂಕಿ ಅಂಶಗಳು ವರದಿಯಾದ ಹಾಗೂ ದಾಖಲಾದ ಘಟನೆಗಳ ಬಗ್ಗೆ ಮಾತ್ರ ಹೇಳುತ್ತವೆ. ಆಫ್ ದಿ ರೆಕಾರ್ಡ್ ಘಟನೆಗಳನ್ನು ಪರಿಗಣಿಸಿದರೆ, ಇವುಗಳ ಸಂಖ್ಯೆಯು ಇನ್ನೂ ಹೆಚ್ಚಾಗಲಿದೆ.

ಇದು ಸರ್ಕಾರದ ಕಾಳಜಿಯಾಗಿದೆ. ಈ ಕಾಳಜಿಯನ್ನು ನಿರ್ಲಕ್ಷಿಸಿದರೆ ರಸ್ತೆಗಳಲ್ಲಿ ಸವಾರಿ ಮಾಡುವವರ ಹಾಗೂ ವಾಹನ ಚಲಾಯಿಸುವವರ ಸಂಖ್ಯೆಯು ಹೆಚ್ಚಾದಂತೆಲ್ಲಾ ಹೆಚ್ಚು ಹಾನಿಯಾಗಲಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ನಿತಿನ್ ಗಡ್ಕರಿರವರು ಈ ಯೋಜನೆಯ ನೇತೃತ್ವ ವಹಿಸಿ, ಯೋಜನೆಗೆ ಪ್ರಧಾನ ಅನುಮೋದನೆ ಪಡೆದಿದ್ದಾರೆ.

ರೂ.14,000 ಕೋಟಿ ಒಂದು ದೊಡ್ಡ ಮೊತ್ತವಾಗಿರುವುದರಿಂದ ಸಚಿವಾಲಯವು ಹಣಕಾಸಿನ ಸಹಾಯಕ್ಕಾಗಿ ವಿಶ್ವಬ್ಯಾಂಕ್ ಅನ್ನು ಸಂಪರ್ಕಿಸಲಿದೆ ಎಂದು ಗಡ್ಕರಿರವರು ತಿಳಿಸಿದ್ದಾರೆ. ಈ ನಿಧಿಯನ್ನು ರಸ್ತೆಗಳ ಅಭಿವೃದ್ಧಿಗಾಗಿ ಬಳಸುವ ಬಜೆಟ್ನೊಂದಿಗೆ ಸೇರಿಸಬಾರದು. ಈ ನಿಧಿಯನ್ನು ಪ್ರತ್ಯೇಕವಾಗಿ ಇಟ್ಟು, ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲು ಹಾಗೂ ಬ್ಲಾಕ್ ಸ್ಪಾಟ್ಗಳಲ್ಲಿ ರಸ್ತೆ ಸುರಕ್ಷತೆಗಾಗಿ ಅಗತ್ಯವಿರುವ ಮೂಲಸೌಕರ್ಯಗಳನ್ನು ನಿರ್ಮಿಸಲು ಬಳಸಲಾಗುತ್ತದೆ.

ರಾಷ್ಟ್ರದ್ಯಂತ ಸಾವಿರಾರು ಬ್ಲಾಕ್ ಸ್ಪಾಟ್ಗಳು ಅಥವಾ ಅಪಘಾತಕ್ಕೊಳಗಾಗುವ ಹಾಟ್ ಸ್ಪಾಟ್ಗಳಿವೆ. ಅದಕ್ಕಾಗಿ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಲು ಬಯಸಿದೆ. ಈ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲು ಹಾಗೂ ಗುರುತಿಸಿದ ನಂತರ ಅವುಗಳನ್ನು ಸುಧಾರಿಸಲು ಸರ್ಕಾರವು ಯಾವ ಯೋಜನೆಗಳನ್ನು ಹಾಕಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಸರ್ಕಾರದ ಉದ್ದೇಶಗಳು ಒಳ್ಳೆಯದಾಗಿದ್ದು, ಈ ರೀತಿಯ ಯೋಜನೆಗಳು ಅಗತ್ಯವಾಗಿ ಬೇಕಾಗಿವೆ. ಸರ್ಕಾರವು ಯಾವುದೇ ಹಿನ್ನಡೆ ಅಥವಾ ಹಗರಣಗಳಿಲ್ಲದೆ ನಿತಿನ್ ಗಡ್ಕರಿರವರು ಹೇಳಿದ್ದನ್ನು ಅನುಷ್ಠಾನಗೊಳಿಸಲಿದೆ ಎಂದು ಭಾವಿಸುತ್ತೇವೆ.


Click it and Unblock the Notifications