ಹೊಸ ರೂಲ್ಸ್ ಜಾರಿ- ಕಾಂಗ್ರೆಸ್ ಮುಖಂಡನ ಕಾರಿನ ನಂಬರ್ ಪ್ಲೇಟ್ ಕಿತ್ತುಹಾಕಿದ ಪೊಲೀಸರು..!
ಇತ್ತೀಚೆಗೆ ನಾವು ನೀವೆಲ್ಲಾ ನೋಡಿರುವ ಹಾಗೆ ಕಣ್ಣು ಹಾಯಿಸಿದ ಕಡೆಗೆಲ್ಲಾ ಸಂಘಟನೆಗಳ ಹೆಸರಿನಲ್ಲಿ ದೊಡ್ಡದಾಗಿ ಬೋರ್ಡ್ ಹಾಕಿಕೊಂಡಿರುವ ಕಾರುಗಳ ಓಡಾಟ ಸಾಮಾನ್ಯವಾಗಿ ಬಿಟ್ಟಿದೆ. ಜನರಿಗೆ ಗೊತ್ತಿರದ ಅದೆಷ್ಟೋ ಸುಲಗೆ ಸಂಘಟನೆಗಳು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿ ಹಸಿರು ಬೋರ್ಡ್ ಬಳಕೆ ಮಾಡುತ್ತಿದ್ದು, ಇನ್ಮುಂದೆ ಇಂಹತ ಕಾರುಗಳಿಗೆ ಸಾರಿಗೆ ಇಲಾಖೆ ಭರ್ಜರಿ ಶಾಕ್ ನೀಡಲು ಸಜ್ಜಾಗಿದೆ.

ನಮ್ಮಲ್ಲಿ ಕೆಲವರ ಮನಸ್ಥಿತಿ ಹೇಗಾಗಿದೆ ಅಂದ್ರೆ, ಕಾನೂನಿಗೆ ವಿರುದ್ಧವಾಗಿ ನಡೆಯುವುದೇ ಒಂದು ಫ್ಯಾಶನ್ ಎಂದುಕೊಂಡಿದ್ದಾರೆ. ಇದರ ಪರಿಣಾಮವೇ, ದಿನದಿಂದ ದಿನಕ್ಕೆ ಸಾರಿಗೆ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ರಾಜಕೀಯ ಮತ್ತು ಸಂಘಟನೆಗಳ ಹೆಸರಿನಲ್ಲಿ ಹಸಿರು ಬೋರ್ಡ್ ಹಾಕಿಕೊಂಡು ಪೋಸ್ ಕೊಡುವವರ ಸಂಖ್ಯೆ ಮಾತ್ರ ಮಿತಿ ಮೀರಿದೆ.

ಹಸಿರು ಬಣ್ಣದ ಬೋರ್ಡ್ ಹಾಕಿಕೊಂಡು ಶೋಕಿ ಮಾಡ್ತಿದ್ದ ವಿವಿಧ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹೆಸರಿನ ಗ್ರಿನ್ ಬೋರ್ಡ್ಗೆ ಲಗಾಮು ಹಾಕಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಭರ್ಜರಿ ಕಾರ್ಯಚರಣೆಗೆ ಇಳಿದಿದೆ.

ವಾಹನಗಳ ನಂಬರ್ ಪ್ಲೇಟ್ಗಳ ಮೇಲೆ ಕೆಲವು ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು ಎಂದು ಬೋರ್ಡ್ ಹಾಕಿಕೊಂಡಿದ್ದ ಕೆಲವು ಸಂಘಗಳ ಪದಾಧಿಕಾರಿಗಳ ವಾಹನಗಳ ಮೇಲಿನ ನಾಮ ಫಲಕಗಳನ್ನು ಈಗಾಗಲೇ ತೆರವು ಮಾಡಲಾಗುತ್ತಿದ್ದು, ಜೊತೆಗೆ ದಂಡವನ್ನು ಸಹ ವಿಧಿಸಲಾಗುತ್ತಿದೆ.

ಮೇ ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಹೊಸ ನಿಯಮದ ಪ್ರಕಾರ ಸಂಘಟನೆಗಳು ಮತ್ತು ರಾಜಕೀಯ ಮುಖಂಡರ ಹೆಸರಿನ ಹಸಿರು ಬಣ್ಣದ ಬೋರ್ಡ್ಗಳನ್ನು ತೆಗೆದುಹಾಕಲಾಗುತ್ತಿದೆ.

ಸಾರಿಗೆ ನಿಯಮದ ಪ್ರಕಾರ, ಬಿಳಿ ಬಣ್ಣದ ಪ್ಲೇಟ್ ಮೇಲೆ ಕ್ರಮಬದ್ಧ ಆಕಾರದಲ್ಲಿ ಕಪ್ಪು ಬಣ್ಣದಿಂದಲೇ ಸಂಖ್ಯೆಗಳನ್ನು ಮುದ್ರಿಸಬೇಕು ಎಂದು ತಿಳಿಸಿಲಾಗಿದ್ದು, ಇದರ ಜೊತೆಗೆ ನಿಯಮ ಬಾಹಿರವಾಗಿ ಹಸಿರು ಬೋರ್ಡ್ ಅಳವಡಿಸುವವರ ವಿರುದ್ಧ ಸೂಕ್ತ ಕ್ರಮ ಜರಗಿಸುವ ಎಚ್ಚರಿಕೆ ನೀಡಲಾಗಿದೆ.

ಕೇಂದ್ರ ಸಾರಿಗೆ ಇಲಾಖೆಯು ಮೊದಲ ಬಾರಿಗೆ ಹೊಸ ರೂಲ್ಸ್ ಅನ್ನು ಮಧ್ಯಪ್ರದೇಶದ ಇಂಧೋರ್ನಲ್ಲಿ ಜಾರಿಗೊಳಿಸಲು ಆದೇಶಿಸಿದ್ದು, ರಾಷ್ಟ್ರೀಯ ಹೆದ್ದಾರಿ 3 ಮತ್ತು ಇಂಧೋರ್ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಕಾರ್ಯಚರಣೆ ನಡೆಸಿ ಹಸಿರು ಬಣ್ಣದ ಬೋರ್ಡ್ಗಳನ್ನು ಸ್ಥಳದಲ್ಲೇ ತೆರವು ಮಾಡಲಾಗಿದೆ.

ಕಾರ್ಯಾಚರಣೆ ವೇಳೆ ಕಾಂಗ್ರೆಸ್ ನಾಯಕರೊಬ್ಬರ ಮಿಟ್ಸುಬಿಷಿ ಪಜೆರೋ ಕಾರಿನ ನಂಬರ್ ಪ್ಲೇಟ್ ಅನ್ನು ತೆರವುಗೊಳಿಸಿರುವ ಇಂಧೋರ್ ಪೊಲೀಸರು ಕಾರಿನ ನಂಬರ್ ಪ್ಲೇಟ್ ಮೇಲೆ ಹಾಕಲಾಗಿದ್ದ ಡಿಸಿಗ್ನೇಶನ್ ಕಿತ್ತುಹಾಕಿರುವುದಲ್ಲದೆ ದಂಡ ವಿಧಿಸಿದ್ದಾರೆ.

ಇದಲ್ಲದೇ ರಾಜಕೀಯ ಮುಖಂಡರ ಕಾರುಗಳಲ್ಲಿ ಅಳವಡಿಸಲಾಗುವ ಕೆಂಪು ದೀಪಗಳನ್ನು ಸಹ ಈಗಾಗಲೇ ಸುಪ್ರೀಂಕೋರ್ಟ್ ಸೂಚನೆಯೆಂತೆ ನಿಷೇಧ ಮಾಡಲಾಗಿದ್ದು, ತುರ್ತು ವಾಹನಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಲೋಕಸಭೆ ಸ್ಪೀಕರ್ ಹೊರತುಪಡಿಸಿ ಇನ್ಯಾವುದೇ ವಿಐಪಿಗಳು ಕೆಂಪು ದೀಪದ ವಾಹನವನ್ನು ಹೊಂದುವಂತಿಲ್ಲ.
MOST READ: ಫಾರ್ಚೂನರ್ ಕಾರಿಗಿಂತ ದುಬಾರಿಯೆಂತೆ ಈ ಪೋರ್ಷೆ ಕಾರಿನ ನಂಬರ್ ಪ್ಲೇಟ್..!

ಇದು ಈಗಾಗಲೇ ಪರಿಣಾಮಕಾರಿ ಜಾರಿಗೆ ಬಂದಿದ್ದು, ಸಂಘಟನೆಗಳ ಹೆಸರಿನಲ್ಲಿ ಬೋರ್ಡ್ ಹಾಕಿಕೊಳ್ಳುವ ಪ್ರವೃತ್ತಿಗೆ ಮಾತ್ರ ಬ್ರೇಕ್ ಬಿಳುತ್ತಿಲ್ಲ. ಹೀಗಾಗಿ ಕೇಂದ್ರ ಸಾರಿಗೆ ಇಲಾಖೆಯು ಈ ಬಾರಿ ಖಡಕ್ ಆದೇಶ ಜಾರಿಗೆ ಮಾಡಿದ್ದು, ಯಾವುದೇ ರಾಜಕೀಯ ಮುಖಂಡರು ಇದ್ದರೂ ಸಹ ಸ್ಥಳದಲ್ಲೇ ಬೋರ್ಡ್ ತೆರವು ಮಾಡಿ ದಂಡ ವಿಧಿಸಲು ಸೂಚಿಸಿದೆ.

ಸದ್ಯ ಇಂಧೋರ್ನಲ್ಲಿ ಮಾತ್ರ ಈ ಕಾರ್ಯಚರಣೆ ಶುರುವಾಗಿದ್ದು, ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಈ ಹಿಂದೆ ಕೆಲವು ಸಂಘಟನೆಗಳ ಹೆಸರಿನಲ್ಲಿ ನಕಲಿ ಬೋರ್ಡ್ ಬಳಕೆ ಮಾಡುತ್ತಿದ್ದ ಸಾವಿರಾರು ಪ್ರಕರಣಗಳನ್ನು ಪತ್ತೆಹಚ್ಚಿದ್ದರು.
MOST READ: 102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಆದ್ರೆ ಇದೀಗ ರಾಜಕೀಯ ಮುಖಂಡರ ಕಾರುಗಳಿಗೂ ಸಂಕಷ್ಟ ಎದುರಾಗಿದ್ದು, ಮುಂದಿನ 15 ದಿನಗಳ ಒಳಗಾಗಿ ಬೆಂಗಳೂರು ಸೇರಿಂದಂತೆ ದೇಶಾದ್ಯಂತ ಟ್ರಾಫಿಕ್ ಪೊಲೀಸರಿಂದ ವಿಶೇಷ ಕಾರ್ಯಾಚರಣೆಯು ಆರಂಭವಾಗಲಿದೆ ಎನ್ನಲಾಗಿದೆ.

ಇದರ ಜೊತೆಗೆ ಎಸ್ಯುವಿ ಕಾರುಗಳ ಖದರ್ ಹೆಚ್ಚಿಸುವ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ಗಳನ್ನು ಕೇಂದ್ರ ಸರ್ಕಾರವು ಬ್ಯಾನ್ ಮಾಡಿದ್ದು, ಹೊಸ ಆದೇಶದಂತೆ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳು ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್ಗಳನ್ನು ಹಾಕಿರುವ ವಾಹನಗಳ ವಿರುದ್ಧ ಕ್ರಮ ಜರಗಿಸಲು ಆರಂಭಿಸಲಾಗುತ್ತಿದೆ.
MOST READ: ಟೊಯೊಟಾ ಇನೋವಾ ಜನಪ್ರಿಯತೆಗೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಾ?

ಸಾರಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಸೆಕ್ಷನ್ 190 ಹಾಗೂ 191 ಅಡಿ ಕ್ರಮ ಜರುಗಿಸಿ ದಂಡ ವಿಧಿಸಬೇಕೆಂದು ಕೇಂದ್ರ ಸಾರಿಗೆ ಸಚಿವಾಲಯವು ಸುತ್ತೋಲೆ ಹೊರಡಿಸಿದ್ದು, ಅದರಂತೆಯೇ ಕಾರು ಮಾಲೀಕರಿಗೆ 1 ಸಾವಿರ ದಂಡ ವಿಧಿಸುವುದಲ್ಲದೇ ಹೊಸ ನಿಯಮ ಪಾಲನೆಗೆ ಖಡಕ್ ಸೂಚನೆ ನೀಡಲಾಗುತ್ತಿದೆ.


Click it and Unblock the Notifications








