ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಸ್ಪೆಷಲ್ ನೋಟಿಸ್..!
ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳಿಂದಾಗಿ ಸಾರಿಗೆ ನಿಯಮಗಳ ಉಲ್ಲಂಘನೆಗಳ ಪ್ರಕರಣಗಳು ಕೂಡಾ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ತಾವು ಮಾಡುತ್ತಿರುವುದು ತಪ್ಪು ಎಂಬುವುದು ಅರಿವು ಇದ್ದರೂ ಕೂಡಾ ಬಹುತೇಕ ವಾಹನ ಮಾಲೀಕರು ಪದೇ ಪದೇ ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಇಂತಹ ವಾಹನ ಮಾಲೀಕರ ವಿರುದ್ಧ ಸಿಕಂದರ್ಬಾದ್ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ ಬಹುತೇಕ ವಾಹನಗಳ ಮೇಲೆ 10ಕ್ಕಿಂತಲೂ ಹೆಚ್ಚು ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಪದೇ ಪದೇ ಸಾರಿಗೆ ನಿಯಮ ಉಲ್ಲಂಘಿಸಿ ದಂಡ ಪಾವತಿಸದೇ ಓಡಾಡುವ ವಾಹನ ಮಾಲೀಕರಿಗೆ ಸಿಕಂದರ್ಬಾದ್ ಟ್ರಾಫಿಕ್ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ.

ಸಾರಿಗೆ ನಿಯಮ ಉಲ್ಲಂಘಿಸಿ ದಂಡ ಪಾವತಿಸಲು ಹಿಂದೇಟು ಹಾಕುವ ವಾಹನ ಮಾಲೀಕರಿಗೆ ಸ್ಪೆಷಲ್ ನೋಟಿಸ್ ನೀಡುತ್ತಿರುವ ಪೊಲೀಸರು, ಬಾಕಿ ಉಳಿಸಿಕೊಂಡಿರುವ ದಂಡವನ್ನು ಸರಿಯಾದ ಸಮಯಕ್ಕೆ ಪಾವತಿಸುವಂತೆ ಖಡಕ್ ವಾರ್ನ್ ಮಾಡುತ್ತಿದ್ದಾರೆ.

ಒಂದು ವೇಳೆ ಸಾರಿಗೆ ನಿಮಯ ಉಲ್ಲಂಘಿಸಿದ ಪ್ರಕರಣಗಳಿಗೆ ಸರಿಯಾದ ಸಮಯಕ್ಕೆ ದಂಡಪಾವತಿ ಮಾಡದೇ ಇದ್ದಲ್ಲಿ ಅಂತಹ ವಾಹನಗಳನ್ನು ಸೀಜ್ ಮಾಡುವುದಾಗಿ ವಾರ್ನ್ ಮಾಡಿರುವ ಪೊಲೀಸರು, ಪದೇ ಪದೇ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಲ್ಲಿ ಕಠಿಣ ಕ್ರಮ ನಿಶ್ಚಿತ ಎಂದಿದ್ದಾರೆ.

ಜೊತೆಗೆ 30 ಸಾವಿರಕ್ಕೂ ಹೆಚ್ಚು ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ಹೆಸರು ಮತ್ತು ವಾಹನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿರುವ ಪೊಲೀಸರು, ಇ-ಚಲನ್ ಮೂಲಕ ವಾಹನ ಮಾಲೀಕರ ಆಟೋಟೋಪಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಮೊನ್ನೆಯಷ್ಟೇ ಇದೇ ವಿಚಾರಕ್ಕೆ ಸಂಬಂಧಿಸಿ ಮಹೀಂದ್ರಾ ಎಕ್ಸ್ಯುವಿ500 ಮಾಲೀಕನಿಂದ ರೂ.33 ಸಾವಿರ ದಂಡ ವಸೂಲಿ ಮಾಡಿದ್ದಲ್ಲದೇ ಸೆಲ್ಫಿ ಜೊತೆ ಕಾರಿನ ಚಿತ್ರವನ್ನು ಪೊಲೀಸ್ ಇಲಾಖೆಯ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.

ಇನ್ನು ಸಂಚಾರಿ ನಿಯಮಗಳ ಉಲ್ಲಂಘನೆಗಳೇ ಅಪಘಾತಗಳ ಮೂಲ ಕಾರಣವಾಗಿದ್ದು, ಅಲ್ಲಿ ಯಾವ ಅದೃಷ್ಟವೂ ನಿಮ್ಮನ್ನು ಬಚಾವ್ ಮಾಡಲು ಸಾಧ್ಯವಿಲ್ಲ. ನಿಮ್ಮ ಡ್ರೈವಿಂಗ್ ಸರಿಯಿದ್ದ ಮಾತ್ರಕ್ಕೆ ಸುರಕ್ಷಿತವಾಗಿ ಗುರಿ ಮುಟ್ಟುವಿರಿ ಎಂಬುವುದಕ್ಕೂ ಯಾವ ಗ್ಯಾರಂಟಿ ಇಲ್ಲ. ಯಾಕೆಂದ್ರೆ ನಿಮ್ಮ ಎದುರುಗಡೆಯಿಂದ ಬರುವ ವಾಹನ ಸವಾರರು ಮಾಡುವ ಎಡವಿಟ್ಟಿನಿಂದಾಗಿಯೂ ಕೂಡಾ ಅಪಘಾತ ಸಂಭವಿಸಬಹುದಾಗಿದೆ.
MOST READ: ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಇದರಿಂದ 'ರಸ್ತೆ ಸುರಕ್ಷತೆ' ಎಂಬುದು ಒಂದಿಬ್ಬರು ಮಾತ್ರ ಪಾಲಿಸಬೇಕಾದ ನಿಯಮಗಳಲ್ಲ. ಪ್ರತಿಯೊಬ್ಬ ಸವಾರರು ಅತ್ಯುತ್ತಮ ಚಾಲನೆಯನ್ನು ಕರಗತ ಮಾಡಿಕೊಳ್ಳಬೇಕಲ್ಲದೇ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುವುದು ತುಂಬಾ ಮುಖ್ಯವಾಗಿರುತ್ತದೆ.

ಟ್ರಾಫಿಕ್ ನಿಯಮಗಳನ್ನು ತಪ್ಪದೇ ಪಾಲಿಸಿ
ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ವಾಹನ ಸಂಖ್ಯೆ ಹೆಚ್ಚುತ್ತಿದ್ದಂತೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಕೂಡಾ ಹೆಚ್ಚುತ್ತಲೇ ಇದೆ. ಇದು ಅಪಘಾತಗಳಿಗೆ ಮೂಲ ಕಾರಣವಾಗಿದ್ದು, ದಯವಿಟ್ಟು ಅವಸರದಲ್ಲಿ ವಾಹನ ಚಾಲನೆ ಬೇಡವೇ ಬೇಡ.

ಹೀಗಾಗಿ ಪ್ರತಿ ವಾಹನ ಸವಾರರು ಕೂಡಾ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವುದು, ಉತ್ತಮ ಹೆಲ್ಮೆಟ್ ಧರಿಸುವುದು, ವಾಹನ ಚಾಲನೆ ವೇಳೆ ಮೊಬೈಲ್ ಮುಟ್ಟದಿರುವುದು, ಸಾರ್ವಜನಿಕ ಪ್ರದೇಶಗಳಲ್ಲಿ ಅತಿ ವೇಗದ ಚಾಲನೆ ಮಾಡದಿರುವುದು, ರಸ್ತೆ ಚಿಹ್ನೆಗಳನ್ನು ಪಾಲಿಸುವುದು ಮತ್ತು ಓವರ್ಟೇಕ್ ಮಾಡುವುದನ್ನು ನಿಲ್ಲಿಸಬೇಕಾದ ಅವಶ್ಯಕತೆಯಿದ್ದು, ಇದು ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರವಲ್ಲ ನಿಮ್ಮ ಜೀವವನ್ನು ಉಳಿಸಿಕೊಳ್ಳಬಹುದು.


Click it and Unblock the Notifications








