ಕೇಂದ್ರ ಬಜೆಟ್ 2019: ಆಟೋ ಕ್ಷೇತ್ರಕ್ಕೆ ಕೇಂದ್ರದಿಂದ ಸಿಕ್ಕಿದೇನು?
ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದು, ಮಧ್ಯಮ ವರ್ಗದ ಜನತೆಯ ನೀರಿಕ್ಷೆಗೆ ತಕ್ಕಂತೆ ಬಜೆಟ್ ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಆಟೋ ಕ್ಷೇತ್ರಕ್ಕೂ ಭರ್ಜರಿ ಕೊಡುಗೆಗಳನ್ನು ನೀಡಲಾಗಿದ್ದು, ಭವಿಷ್ಯದ ಭಾರತಕ್ಕೆ ಕೆಲವು ಮಹತ್ವದ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

2019 ಚುನಾವಣಾ ಹೊತ್ತಲ್ಲೇ ಮಧ್ಯಂತರ ಬಜೆಟ್ ಮಂಡನೆಯಾಗುತ್ತಿರುವುದರಿಂದ ಸಹಜವಾಗಿಯೇ ಎಲ್ಲರಿಗೂ ಕುತೂಹಲ ಮೂಡಿಸಿತ್ತು. ಜನತೆಯ ನೀರಿಕ್ಷೆಗೆ ತಕ್ಕಂತೆ ಹಲವು ಜನಪರ ಯೋಜನೆಗಳನ್ನು ಘೋಷಣೆ ಮಾಡಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಮತ್ತು ಗ್ರಾಮಿಣ ಭಾಗದ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದಾಗಿ ಜನಸಾಮಾನ್ಯರ ಆರೋಗ್ಯ ಪರಿಸ್ಥಿತಿ ದಿನದಿನಕ್ಕೆ ಹದಗೆಡುತ್ತಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಕೆಲವು ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಮೆಟ್ರೋ ಸಿಟಿಗಳಲ್ಲಿ ಸೆನ್ಸಾರ್ ಟೆಕ್ನಾಲಜಿ ಬಳಕೆಗೆ ಒಪ್ಪಿಗೆ ಸೂಚಿಸಿದೆ.

ಅಂದ್ರೆ ಸೆನ್ಸಾರ್ ಬೆಸ್ಡ್ ಟೆಕ್ನಾಲಜಿಯಿಂದ ಯಾವ ವಾಹನವು ನಿಗದಿಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟು ಮಾಡಿದ್ದಲ್ಲಿ ಪತ್ತೆ ಹಚ್ಚಲು ನೆರವಾಗಲಿದ್ದು, ಈ ಮೂಲಕ ಅಂತಹ ವಾಹನಗಳನ್ನು ಪತ್ತೆ ಹಚ್ಚಿ ಅವುಗಳ ವಿರುದ್ಧ ಸೂಕ್ತ ಕ್ರಮಜರಗಿಸಲಿದ್ದಾರೆ.

ಈಗಾಗಲೇ ಇದು ದೆಹಲಿ ಮತ್ತು ಹರಿಯಾಣದ ನಡುವಿನ ಪ್ರಮುಖ ರಸ್ತೆಗಳಲ್ಲಿ ಪ್ರಾಯೋಗಿಕ ಜಾರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ದೇಶದ ಇತರೆಗಳಲ್ಲೂ ಜಾರಿ ತರುವ ಮೂಲಕ ಹೆಚ್ಚಿನ ಮಟ್ಟದ ಮಾಲಿನ್ಯ ಉಂಟು ಮಾಡುವ ವಾಹನಗಳಿಗೆ ಕಡಿವಾಣ ಉದ್ದೇಶ ಹೊಂದಲಾಗಿದೆ.

ಹಾಗೆಯೇ 2030ರ ವೇಳೆ ದೇಶಾದ್ಯಂತ 100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ 'ವಿಷನ್ 2030' ಯೋಜನೆಗೆ ಚಾಲನೆ ನೀಡಲಾಗಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಆಮದ ಮಾಡಿಕೊಳ್ಳದ ಭಾರತ ನಿರ್ಮಾಣದ ಗುರಿ ಹೊಂದಲಾಗಿದೆ.

ಮುಂದುವರಿದು, ಎಲೆಕ್ಟ್ರಿಕ್ ಕಾರುಗಳ ಮುಖ್ಯ ಅಂಶವಾದ ಚಾರ್ಜಿಂಗ್ ಸ್ಟೆಷನ್ಗಳ ನಿರ್ಮಾಣ ಮತ್ತು ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಯನ್ನು ಸ್ಥಳೀಯವಾಗಿ ಹೆಚ್ಚಿಸಲು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಭರ್ಜರಿ ಆಫರ್ ನೀಡಲಾಗುತ್ತಿದ್ದು, ಇದರಿಂದ ಪರೋಕ್ಷವಾಗಿ 5 ಲಕ್ಷ ಉದ್ಯೋಗಗಳು ಸೃಷ್ಠಿಯಾಗಲಿವೆ ಎನ್ನಲಾಗಿದೆ.

ಹಾಗೆಯೇ ಮುಂದಿನ 5 ವರ್ಷಗಳಲ್ಲಿ ಭಾರತವು 5 ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು, ಮುಂದಿನ 30 ವರ್ಷಗಳ ಅಭಿವೃದ್ಧಿಗಾಗಿ ಈಗಾಗಲೇ ಹೊಸ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದಿದೆ.

ಇದಕ್ಕಾಗಿಯೇ 2022ರ ವೇಳೆಗೆ ದೇಶದ ಪ್ರತಿಯೊಬ್ಬರು ವಿಮಾನ ಪ್ರಯಾಣಿಸುವ ಮಟ್ಟಿಗೆ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು, ರಕ್ಷಣಾ ವಲಯಕ್ಕೂ ಹೆಚ್ಚಿನ ಒತ್ತು ನೀಡಿರುವುದು ನಮ್ಮ ಸರ್ಕಾರದ ಹೆಮ್ಮೆ ಎಂದಿದೆ.
MOST READ: ಬೆಂಗಳೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ 3 ಸಾವಿರ ಎಲೆಕ್ಟ್ರಿಕ್ ಬಸ್ಗಳು..!

ಜೊತೆಗೆ ಗ್ರಾಮಿಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಇದೇ ಮೊದಲ ಬಾರಿಗೆ ರೂ. 19 ಸಾವಿರ ಕೋಟಿ ಮೀಸಲು ಇರಿಸಲಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಮೀಣ ಭಾಗಕ್ಕೆ ಹೆಚ್ಚಿನ ಅನುದಾನ ನೀಡಿರುವುದನ್ನು ಸ್ವಾಗತಿಸಿವೆ.

ಇದಲ್ಲದೇ ಇದೇ ಮೊದಲ ಬಾರಿ ರಕ್ಷಣಾ ವಲಯಕ್ಕೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರವು ದೇಶದ ಭದ್ರತೆಗಾಗಿ ಅತ್ಯಾಧುನಿಕ ಯುದ್ಧ ವಿಮಾನಗಳ ಅಭಿವೃದ್ಧಿ ಒಪ್ಪಂದಗಳು, ಯುದ್ಧ ವಾಹನಗಳ ಖರೀದಿ ಮತ್ತು ಸೈನಿಕರ ಜೀವನ ಭದ್ರತೆಗಾಗಿ ಬರೋಬ್ಬರಿ 3 ಲಕ್ಷ ಕೋಟಿ ಮೀಸಲು ಇರಿಸಿದೆ.
MOST READ: ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..!

ಇನ್ನು ಆದಾಯ ತೆರಿಗೆ ಮಿತಿಯನ್ನು ರೂ. 2.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದು ಸಹ ಮಧ್ಯಮ ವರ್ಗದ ಜನತೆಗೆ ಬಂಪರ್ ಕೊಡುಗೆ ಎನ್ನಬಹುದಾಗಿದ್ದು, ಇದರಿಂದ ಮಧ್ಯಮ ವರ್ಗವು ಸಣ್ಣ ಗಾತ್ರದ ವಾಹನ ಖರೀದಿ ಮೇಲೆ ಹೆಚ್ಚಿನ ಒಲವು ತೋರುವ ವಿಶ್ವಾಸವಿದೆ ಎನ್ನುತ್ತಾರೆ ಆಟೋ ಕ್ಷೇತ್ರ ತಜ್ಞರು.


Click it and Unblock the Notifications








