ಸಂಕಷ್ಟದ ನಡುವೆಯೂ ಉದ್ಯೋಗ ಕಡಿತವಿಲ್ಲವೆಂದ ಎಂಜಿ ಮೋಟಾರ್
ಕರೋನಾ ವೈರಸ್ ಪ್ರಪಂಚದೆಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಬಡವರು, ಶ್ರೀಮಂತರು ಎಂಬುದನ್ನು ನೋಡದೇ ಪ್ರಪಂಚದ ಎಲ್ಲಾ ದೇಶಗಳಿಗೂ ಹಬ್ಬಿದೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನರು ಈ ಮಹಾಮಾರಿ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನ ಈ ಮಾರಣಾಂತಿಕ ವೈರಸ್ ಗೆ ಬಲಿಯಾಗಿದ್ದಾರೆ.

ಕರೋನಾ ವೈರಸ್ ಭಾರತಕ್ಕೂ ಹಬ್ಬಿದೆ. ಹೆಚ್ಚು ಜನರಿಗೆ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ದೇಶಾದ್ಯಂತ ಮುಂದುವರೆದಿರುವ ಈ ಲಾಕ್ಡೌನ್ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳು ನಷ್ಟವನ್ನು ಅನುಭವಿಸುತ್ತಿವೆ. ಇದರಿಂದಾಗಿ ಬಹುತೇಕ ಉದ್ಯೋಗಗಳು ಅನಿಶ್ಚತತೆಯನ್ನು ಎದುರಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಎಂಜಿ ಮೋಟಾರ್ ಕಂಪನಿಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಎಂಜಿ ಮೋಟಾರ್ ಕಂಪನಿಯು ತನ್ನ ಕಂಪನಿಯ ಉತ್ಪಾದನೆಯು ಸ್ಥಗಿತಗೊಂಡಿದ್ದರೂ ಯಾವುದೇ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲವೆಂದು ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಂಜಿ ಮೋಟಾರ್ನ ವ್ಯವಸ್ಥಾಪಕ ನಿರ್ದೇಶಕರು 2020ರಲ್ಲಿ ಯಾವುದೇ ಉದ್ಯೋಗಿಯ ಉದ್ಯೋಗ ಕಡಿತವಾಗುವುದಿಲ್ಲವೆಂದು ತಿಳಿಸಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿಯೂ ಎಂಜಿ ಮೋಟಾರ್ ಯಾರೊಬ್ಬರ ಕೆಲಸವನ್ನು ಕಸಿದುಕೊಳ್ಳುವುದಿಲ್ಲವೆಂದು ಅವರು ಹೇಳಿದ್ದಾರೆ.

ಎಂಜಿ ಮೋಟಾರ್ ಕಂಪನಿಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಬೇರೆ ಕಂಪನಿಗಳು ಸಹ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಎಂಜಿ ಮೋಟಾರ್ನ ಕಂಪನಿಯ ಉದ್ಯೋಗಿಗಳು ಕಂಪನಿಯ ಈ ನಿರ್ಧಾರದಿಂದ ಖುಷಿಯಾಗಿದ್ದಾರೆ ಎಂದು ಹೇಳಲಾಗಿದೆ. ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಎಂಜಿ ಮೋಟಾರ್ ಕಂಪನಿಯು ರೂ.2 ಕೋಟಿ ದೇಣಿಗೆ ನೀಡಿದೆ.

ಇದರ ಜೊತೆಗೆ, ಎಂಜಿ ಮೋಟಾರ್ ಕಂಪನಿಯು ಕಡಿಮೆ ಬೆಲೆಯ ವೆಂಟಿಲೇಟರ್ ಸವಾಲನ್ನು ಹಾಕಿದೆ. ಈ ಸವಾಲಿನಿಂದಾಗಿ ಸುಲಭವಾಗಿ ಹಾಗೂ ವೇಗವಾಗಿ ತ್ವರಿತವಾಗಿ ತಯಾರಿಸಿದ ವೆಂಟಿಲೇಟರ್ ಗಳನ್ನು ತಯಾರಿಸಲು ಅನುಕೂಲವಾಗಲಿದೆ.

ಎಂಜಿ ಮೋಟಾರ್ ಕಂಪನಿಯು ತನ್ನ ಕಾರುಗಳನ್ನು ಸೋಂಕು ನಿವಾರಕಗೊಳಿಸಿದ ನಂತರವೇ ತಲುಪಿಸುತ್ತಿದೆ, ಇದಕ್ಕಾಗಿ ಕಂಪನಿಯು ಸೋಂಕು ನಿವಾರಕ ಹಾಗೂ ವಿತರಣೆ ಎಂಬ ಯೋಜನಯನ್ನು ಹಮ್ಮಿಕೊಂಡಿದೆ.


Click it and Unblock the Notifications








