ಕರೋನಾ ವೈರಸ್ ಎಫೆಕ್ಟ್: ಟ್ರಕ್ ಚಾಲನೆ ಮಾಡಲು ಚಾಲಕರೇ ಸಿಗುತ್ತಿಲ್ಲ..!
ಕರೋನಾ ವೈರಸ್ನಿಂದಾಗಿ ಇಡಿ ವಿಶ್ವವೇ ಆತಂಕದಲ್ಲಿದ್ದು, ಈ ಮಾರಣಾಂತಿಕ ವೈರಸ್ ಹರಡದಂತೆ ತಡೆಯಲು ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಾಮಾರಿ ಕರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಕರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರವು 21 ದಿನಗಳ ಲಾಕ್ ಡೌನ್ ಜಾರಿಗೊಳಿಸಿದೆ. ಜನರು ವಿನಾಕಾರಣ ಮನೆಗಳಿಂದ ಹೊರಬಾರದಂತೆ ಮನವಿ ಮಾಡಲಾಗಿದೆ. ಇದರಿಂದಾಗಿ ಬಸ್, ರೈಲು, ಟ್ರಕ್ ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಆದರೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಕೆಲವು ಸೂಚನೆಗಳನ್ನು ನೀಡಿ ಟ್ರಕ್ ಗಳ ಓಡಾಟಕ್ಕೆ ಅನುಮತಿ ನೀಡಿದೆ. ಆದರೆ ಹಲವಾರು ಸಮಸ್ಯೆಗಳಿರುವುದಾಗಿ ಟ್ರಕ್ ಮಾಲೀಕರ ಸಂಘವು ತಿಳಿಸಿದೆ.

100 ಟ್ರಕ್ಗಳಿಗೆ ಕೇವಲ 15 ಚಾಲಕರು ಮಾತ್ರ ಲಭ್ಯವಿರುವುದಾಗಿ ಟ್ರಕ್ ಮಾಲೀಕರ ಸಂಘವು ಹೇಳಿದೆ. ಕರೋನಾ ವೈರಸ್ ಹರಡುವುದಕ್ಕೆ ಮುನ್ನ 100 ಟ್ರಕ್ಗಳಿಗೆ 58-60 ಚಾಲಕರು ಲಭ್ಯರಿದ್ದರು ಎಂದು ಹೇಳಲಾಗಿದೆ.

ಕರೋನಾ ವೈರಸ್ ಹರಡುವ ಭೀತಿಯಿಂದ ಟ್ರಕ್ ಚಾಲಕರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ ಎಂದು ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘದ (ಎಐಟಿಡಬ್ಲ್ಯೂಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರೋನಾ ವೈರಸ್ ಪೀಡಿತ ರಾಜ್ಯಗಳಲ್ಲಿರುವ ಟ್ರಕ್ ಚಾಲಕರು ತಮ್ಮ ಮನೆಗಳಿಗೆ ಹೋಗಲು ಬಯಸಿದ್ದಾರೆ.

ಕೇವಲ 10%ನಷ್ಟು ಲಾರಿಗಳು ಮಾತ್ರ ಓಡಾಟ ನಡೆಸುತ್ತಿದ್ದು, ಇದರಿಂದಾಗಿ ಅಗತ್ಯ ವಸ್ತುಗಳ ವಿತರಣೆಯಲ್ಲಿ ಸಾಕಷ್ಟು ತೊಂದರೆಗಳಾಗುತ್ತಿದೆ ಎಂದು ಅವರು ಹೇಳಿದರು. ಇದರಿಂದಾಗಿ ಅಗತ್ಯ ವಸ್ತುಗಳು ಲಭ್ಯವಿಲ್ಲದೇ ಬೆಲೆ ಏರಿಕೆಯುಂಟಾಗಿದೆ.

ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಟ್ರಕ್ ಗಳು ಸಾಮಾನ್ಯ ರೀತಿಯಲ್ಲಿ ಓಡಾಡುತ್ತಿರಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆದರೆ ಸರ್ಕಾರದ ಸೂಚನೆಯು ಸರಿಯಾಗಿ ಪಾಲನೆಯಾಗುತ್ತಿಲ್ಲ.

ಲಾಕ್ಡೌನ್ ಸಮಯದಲ್ಲಿ ಟ್ರಕ್ ಚಾಲಕರು ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. ಟ್ರಕ್ ಗಳನ್ನು ತಡೆದು ಅನಗತ್ಯವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಯೂನಿಯನ್ ಹೇಳಿದೆ. ಅನೇಕ ಸ್ಥಳಗಳಲ್ಲಿ ಟ್ರಕ್ ಚಾಲಕರನ್ನು ಥಳಿಸಿದ ಪ್ರಕರಣಗಳೂ ನಡೆದಿವೆ.

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ರೂ.50 ಲಕ್ಷಗಳ ವಿಮಾ ರಕ್ಷಣೆಯನ್ನು ನೀಡಲಾಗಿದ್ದು, ಟ್ರಕ್ ಚಾಲಕರಿಗೂ ಸಹ ವಿಮೆಯನ್ನು ನೀಡಬೇಕೆಂದು ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.


Click it and Unblock the Notifications