ಯಶಸ್ವಿಯಾದ ವಂದೇ ಭಾರತ್ ಮೊದಲ ಹಂತ, ವಾಪಸ್ಸಾದ ಆರು ಸಾವಿರಕ್ಕೂ ಹೆಚ್ಚು ಭಾರತೀಯರು
ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಭಾರತಕ್ಕೆ ಮರಳಿ ಕರೆತರಲು ಏರ್ ಇಂಡಿಯಾ ನಡೆಸುತ್ತಿರುವ ವಂದೇ ಭಾರತ್ ಮಿಷನ್ ಅಭಿಯಾನದಡಿಯಲ್ಲಿ ಮೊದಲ ಐದು ದಿನಗಳಲ್ಲಿ 6,037 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಭಾರತೀಯ ವಿಮಾನಯಾನ ಇಲಾಖೆ ಹೇಳಿದೆ.

ಏರ್ ಇಂಡಿಯಾ ಮತ್ತು ಭಾರತ ಸರ್ಕಾರದ ಅಂಗಸಂಸ್ಥೆಯಾದ ಇಂಡಿಯನ್ ಎಕ್ಸ್ಪ್ರೆಸ್ ಮೇ 7ರಿಂದ ಮೇ 14ರವರೆಗೆ ಒಟ್ಟು 64 ವಿಮಾನಗಳಲ್ಲಿ 12 ದೇಶಗಳಲ್ಲಿ ಸಿಲುಕಿಕೊಂಡಿರುವ 15,000 ಭಾರತೀಯರನ್ನು ಕರೆತರುವ ಯೋಜನೆಯನ್ನು ಹೊಂದಿವೆ. ಯುಎಇ, ಸೌದಿ ಅರೇಬಿಯಾ, ಕತಾರ್ನಂತಹ ದೇಶಗಳಲ್ಲಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ವಿಶೇಷ ವಿಮಾನಯಾನ ವ್ಯವಸ್ಥೆ ಮಾಡಿದೆ.

ಈ ರಾಷ್ಟ್ರಗಳಲ್ಲದೆ ಅಮೆರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಾಪುರ್ ಹಾಗೂ ಫಿಲಿಪೈನ್ಸ್ ದೇಶಗಳಿಂದಲೂ ಭಾರತೀಯರನ್ನು ಕರೆತರಲಾಗುವುದು. ವಿದೇಶದಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಕರೆತರಲು ಭಾರತವು ಈ ಮೊದಲು 30 ಕಾರ್ಯಾಚರಣೆಗಳನ್ನು ನಡೆಸಿತ್ತು. ಆದರೆ ಈ ಎಲ್ಲಾ ಕಾರ್ಯಾಚರಣೆಗಳನ್ನು ಯುದ್ಧ ಅಥವಾ ನೈಸರ್ಗಿಕ ವಿಪತ್ತುಗಳ ಕಾರಣಕ್ಕೆ ನಡೆಸಲಾಗಿತ್ತು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಸೌದಿ ಅರೇಬಿಯಾ, ಕತಾರ್, ಬ್ರಿಟನ್, ಅಮೆರಿಕಾದಂತಹ ದೇಶಗಳು ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಸಾವಿರಾರು ಭಾರತೀಯರು ಆ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.

ವಂದೇ ಭಾರತ್ ಮಿಷನ್ನ ಎರಡನೇ ಹಂತವನ್ನು ಮೇ 16ರಿಂದ 22ರವರೆಗೆ ನಡೆಸಲಾಗುವುದು. ಈ ಹಂತದಲ್ಲಿ ಉಕ್ರೇನ್, ಕಿರ್ಗಿಸ್ತಾನ್, ಅರ್ಮೇನಿಯಾ, ಬೆಲಾರಸ್, ಜಾರ್ಜಿಯಾ, ಕಜಕಿಸ್ತಾನ್, ನೈಜೀರಿಯಾ ಸೇರಿದಂತೆ 31 ದೇಶಗಳಲ್ಲಿರುವ ಭಾರತೀಯರನ್ನು ಕರೆತರಲಾಗುವುದು. ಎರಡನೇ ಹಂತದಲ್ಲಿ 31 ದೇಶಗಳಿಗೆ 149 ವಿಮಾನಗಳನ್ನು ಹಾರಿಸಲಾಗುವುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಹೊರ ದೇಶಗಳಲ್ಲಿ ಸಿಲುಕಿರುವ ಭಾರತೀಯರು ಅರ್ಹತೆ ಇದ್ದರೆ ಮಾತ್ರ ವಿಮಾನದ ಟಿಕೆಟ್ ಕಾಯ್ದಿರಿಸಬಹುದು. ಅರ್ಹತೆಯನ್ನು ಪೂರೈಸದೇ ಇದ್ದರೆ ಟಿಕೆಟ್ ಬುಕ್ಕಿಂಗ್ ಮಾಡುವಂತಿಲ್ಲ. ಇದಕ್ಕೆ ಏರ್ ಇಂಡಿಯಾ ಜವಾಬ್ದಾರನಾಗಿರುವುದಿಲ್ಲ ಎಂದು ಕೇಂದ್ರ ಗೃಹ ಇಲಾಖೆಯು ಹೇಳಿದೆ.

ಗ್ರೀನ್ ಕಾರ್ಡ್ ಅಥವಾ ಒಐಸಿ ಕಾರ್ಡ್ ಹೊಂದಿರುವ, ವಿದೇಶದಲ್ಲಿ ಸಿಲುಕಿರುವ ನಾಗರಿಕರು ಬುಕ್ಕಿಂಗ್ ಮಾಡಬಹುದು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯವನ್ನು ಪರಿಶೀಲಿಸಲಾಗುವುದು ಎಂದೂ ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿರಲಿದೆ. ನಂತರವಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು, ಮಾರ್ಚ್ 25ರಿಂದ ಭಾರತದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಭಾರತದಲ್ಲಿ ಇದುವರೆಗೂ 70,000ಕ್ಕೂ ಹೆಚ್ಚು ಜನರ ಕರೋನಾ ಸೋಂಕಿಗೆ ಒಳಗಾಗಿದ್ದರೆ, ಸುಮಾರು 2,290ಕ್ಕೂ ಹೆಚ್ಚು ಜನ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ವಿಮಾನಯಾನ ಇಲಾಖೆಯು ಎಲ್ಲಾ ವಾಣಿಜ್ಯ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದೆ.


Click it and Unblock the Notifications