ಆಟೋ ಮೊಬೈಲ್ ಉದ್ಯಮಕ್ಕೆ ನವ ಚೈತನ್ಯ ನೀಡಲು ಮುಂದಾದ ಕೇಂದ್ರ ಸರ್ಕಾರ
ಕರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮೊಬೈಲ್ ಉದ್ಯಮಕ್ಕೆ ದೊಡ್ಡ ಪರಿಹಾರ ನೀಡಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ. ಬುಧವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಟೋ ವಲಯದ ಪರಿಷ್ಕೃತ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ಅನುಮೋದಿಸುವ ಸಾಧ್ಯತೆಗಳಿವೆ.

ದೇಶಿಯ ವಾಹನ ತಯಾರಿಕೆಯನ್ನು ಉತ್ತೇಜಿಸಲು ಹಾಗೂ ಉದ್ಯೋಗವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಘೋಷಿಸಬಹುದು ಎಂದು ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ, ಕೇಂದ್ರ ಸರ್ಕಾರವು ಪಿಎಲ್ಐ ಯೋಜನೆಯಲ್ಲಿನ ವೆಚ್ಚವನ್ನು ರೂ. 26,000 ಕೋಟಿಗಳಿಗೆ ಇಳಿಸಿದೆ. ಕಳೆದ ವರ್ಷ ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ರೂ. 57,043 ಕೋಟಿಗಳನ್ನು ವಾಹನ ಹಾಗೂ ವಾಹನ ಭಾಗಗಳ ವಲಯಕ್ಕೆ ಘೋಷಿಸಿತ್ತು.

ಪಿಎಲ್ಐ ಯೋಜನೆಯು ಹಂಚಿಕೆ ಮಾಡಬೇಕಾದ ಮೊತ್ತವನ್ನು ಕಡಿಮೆ ಮಾಡುತ್ತಿರುವ ಕಾರಣವನ್ನು ನಿರ್ದಿಷ್ಟಪಡಿಸಿಲ್ಲ. ಆದರೆ ಕೇಂದ್ರ ಸರ್ಕಾರವು ಈಗ ಎಲೆಕ್ಟ್ರಿಕ್ ವಾಹನ ಹಾಗೂ ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಲು ಬಯಸುತ್ತಿದೆ ಎಂದು ಹೇಳಲಾಗಿದೆ.

ಈ ಯೋಜನೆಯಡಿ ಸ್ವಯಂಚಾಲಿತ ಪ್ರಸರಣ ಅಸೆಂಬ್ಲಿಗಳು, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಸಿಸ್ಟಂ, ಸೆನ್ಸಾರ್ಗಳು, ಸೂಪರ್ ಕ್ಯಾಪಾಸಿಟರ್ಗಳು, ಸನ್ ರೂಫ್ಗಳು, ಅಡಾಪ್ಟಿವ್ ಫ್ರಂಟ್ ಲೈಟಿಂಗ್, ಆಟೋಮ್ಯಾಟಿಕ್ ಬ್ರೇಕಿಂಗ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಹಾಗೂ ಕೊಲ್ಯುಷನ್ ವಾರ್ನಿಂಗ್ ಸಿಸ್ಟಂಗಳನ್ನು ತಯಾರಿಸುವ ಕಂಪನಿಗಳು ಪ್ರಯೋಜನವನ್ನು ನೀಡಬಹುದು.

ಈ ಯೋಜನೆಯ ಬಗ್ಗೆ ಮಾತನಾಡಿದ್ದ ಆಟೋ ಇಂಡಸ್ಟ್ರಿ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಈ ಯೋಜನೆಯನ್ನು ಘೋಷಿಸಿದ ನಂತರ ಆಟೋ ಮೊಬೈಲ್ ಉದ್ಯಮದಲ್ಲಿ ಸ್ಪರ್ಧೆಯು ಹೆಚ್ಚಾಗಲಿದೆ. ಇದರಿಂದ ಭಾರತೀಯ ಆಟೋ ಉದ್ಯಮವು ಹೊಸ ಬೆಳವಣಿಗೆಯತ್ತ ಸಾಗಲಿದೆ ಎಂದು ಹೇಳಿತ್ತು.

ಪಿಎಲ್ಐ ಯೋಜನೆ ಬಗ್ಗೆ:
ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಪಿಎಲ್ಐ ಯೋಜನೆಯನ್ನು ಆರಂಭಿಸಿದೆ. ದೇಶಿಯ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ 2020 - 21ರ ಬಜೆಟ್ನಲ್ಲಿ 13 ಉದ್ಯಮ ವಲಯಗಳಿಗೆ ರೂ. 1.97 ಲಕ್ಷ ಕೋಟಿಗಳ ಪಿಎಲ್ಐ ಯೋಜನೆಯನ್ನು ಘೋಷಿಸಿತ್ತು. ಇದರಲ್ಲಿ ಆಟೋ ಮೊಬೈಲ್ ಉದ್ಯಮಕ್ಕೆ ಸುಮಾರು ರೂ. 57 ಸಾವಿರ ಕೋಟಿ ಘೋಷಿಸಲಾಗಿದೆ.

ಚೀನಾದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ:
ಚೀನಾ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಆಟೋ ಮೊಬೈಲ್ ಉದ್ಯಮವನ್ನು ಪ್ರೋತ್ಸಾಹಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಹಾಗೂ ಸೆಮಿಕಂಡಕ್ಟರ್ ಘಟಕಗಳನ್ನು ಉತ್ತೇಜಿಸಲಾಗುತ್ತಿದೆ. ಸದ್ಯಕ್ಕೆ ಆಟೋ ಮೊಬೈಲ್ ಉದ್ಯಮವು ದೇಶಿಯ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಅವಲಂಬಿಸಿಲ್ಲ

ಭಾರತದಲ್ಲಿ ತಯಾರಿಸಲಾಗುವ ವಾಹನಗಳಿಗೆ ಬೇಕಾದ ಹಲವು ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಭಾರತವು ಎಲೆಕ್ಟ್ರಿಕ್ ವಾಹನ (ಇವಿ) ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕಾದ ಅವಶ್ಯಕತೆಯಿದೆ.

ಈ ಬಗ್ಗೆ ಮಾತನಾಡಿರುವ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ರವರು ಮುಂದಿನ ಎರಡು ವರ್ಷಗಳಲ್ಲಿ ಬ್ಯಾಟರಿಗಳ ಬೆಲೆಗಳು ಕಡಿಮೆಯಾಗಲಿವೆ.ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಕಡಿಮೆಯಾಗಲಿದೆ. ಇದಕ್ಕಾಗಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ನಾವೀನ್ಯತೆ, ದಕ್ಷತೆ ಹಾಗೂ ಹೂಡಿಕೆಯನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಕೆಲವು ದಿನಗಳ ಹಿಂದಷ್ಟೇ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯು ಪ್ರಮುಖ ಪ್ರಕಟಣೆಯನ್ನು ಹೊರಡಿಸಿತ್ತು. ಇದರನ್ವಯ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ದಾಖಲೆಯನ್ನು ನವೀಕರಿಸಲು ಸಹ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಇದಕ್ಕೂ ವಿನಾಯಿತಿ ನೀಡಲಾಗಿದೆ.

ಆಗಸ್ಟ್ 2 ರಂದು ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕ ಹಾಗೂ ನೋಂದಣಿ ನವೀಕರಣ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಈ ಘೋಷಣೆ ಮಾಡಲಾಗಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಹೇಳಿದೆ. ಈ ಘೋಷಣೆಯು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗಿರುವವರಲ್ಲಿ ಉತ್ಸಾಹವನ್ನು ಉಂಟು ಮಾಡಿದೆ.ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಾರ್ವಜನಿಕರು ಸಹ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗಿದ್ದಾರೆ.


Click it and Unblock the Notifications