ವಾಣಿಜ್ಯ ರಾಜಧಾನಿಯಲ್ಲಿ ಮತ್ತೆ ಏರಿಕೆಯಾಯ್ತು ಸಿಎನ್ಜಿ ಇಂಧನದ ಬೆಲೆ
ಒಂದೆಡೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನದ ಬಳಕೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದರೆ, ಮತ್ತೊಂದೆಡೆ ಪರಿಸರ ಸ್ನೇಹಿ ಹಾಗೂ ಪರ್ಯಾಯ ಇಂಧನಗಳಲ್ಲಿ ಒಂದಾದ ಸಿಎನ್ಜಿ ಬೆಲೆಯನ್ನು ಏರಿಸಲಾಗಿದೆ. ಮುಂಬೈನಲ್ಲಿ ಮತ್ತೊಮ್ಮೆ ಸಿಎನ್ಜಿ ಬೆಲೆ ಏರಿಕೆಯಾಗಿದೆ. ಸಿಎನ್ಜಿ ಬೆಲೆಯನ್ನು ಈಗ ಭಾರತದ ವಾಣಿಜ್ಯ ರಾಜಧಾನಿಯಲ್ಲಿ ಪ್ರತಿ ಕೆ.ಜಿಗೆ ರೂ. 3.96 ಗಳಷ್ಟು ಹೆಚ್ಚಿಸಲಾಗಿದೆ.

ಈ ಬೆಲೆ ಹೆಚ್ಚಳದ ನಂತರ ಈಗ ಮುಂಬೈನಲ್ಲಿ ಸಿಎನ್ಜಿ ಬೆಲೆ ಕೆ.ಜಿಗೆ ರೂ. 61.5 ಗಳಾಗಿದೆ. ಈ ಬೆಲೆ ಏರಿಕೆ ಶನಿವಾರದಿಂದ ಜಾರಿಗೆ ಬಂದಿದೆ. ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ಸಿಎನ್ಜಿ ಬೆಲೆ ಏರಿಸಲಾಗಿದೆ. ಮಹಾನಗರ ಗ್ಯಾಸ್ ಲಿಮಿಟೆಡ್ ಹಾಗೂ ಎಂಜಿಎಲ್ ಕಂಪನಿಗಳು ಕಳೆದ ಹತ್ತು ತಿಂಗಳಲ್ಲಿ ಸಿಎನ್ಜಿ ಬೆಲೆಯನ್ನು 14 ಬಾರಿ ಹೆಚ್ಚಿಸಿವೆ. ಪೆಟ್ರೋಲ್, ಡೀಸೆಲ್ಗೆ ಹೋಲಿಸಿದರೆ ಸಿಎನ್ಜಿಯನ್ನು ಪರಿಸರ ಸ್ನೇಹಿ ಎಂದು ಪರಿಗಣಿಸಲಾಗುತ್ತದೆ.

ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ಇಂಧನಗಳಿಗಿಂತ ಸಿಎನ್ಜಿ ಬೆಲೆ ತುಂಬಾ ಅಗ್ಗವಾಗಿದೆ. ಕಡಿಮೆ ವೆಚ್ಚ ಎಂಬ ಕಾರಣಕ್ಕೆ ಆಟೋರಿಕ್ಷಾ, ಟ್ಯಾಕ್ಸಿ, ದೊಡ್ಡ ವಾಣಿಜ್ಯ ವಾಹನ ಹಾಗೂ ಪ್ರಯಾಣಿಕ ವಾಹನಗಳಲ್ಲಿ ಸಿಎನ್ಜಿ ಬಳಸಲಾಗುತ್ತದೆ. ಸಿಎನ್ಜಿ ಬೆಲೆಗಳ ನಿರಂತರ ಹೆಚ್ಚಳದಿಂದಾಗಿ ಈಗ ವಾಹನ ಮಾಲೀಕರ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಹಜವಾಗಿಯೇ ಸಾರಿಗೆ ವೆಚ್ಚವು ಹೆಚ್ಚಾಗುತ್ತದೆ.

ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ಗಿಂತ ಸಿಎನ್ಜಿ ಬೆಲೆ ಸಾಮಾನ್ಯವಾಗಿ 62% ಹಾಗೂ 35% ನಷ್ಟು ಅಗ್ಗವಾಗಿದೆ. ಮುಂಬೈ ನಗರದಲ್ಲಿ ಈಗ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ ರೂ. 109.98 ಗಳಾದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 94.14 ಗಳಾಗಿದೆ. ಸತತ 25 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿಲ್ಲ. ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಎರಡರ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದರಿಂದ ಈ ಎರಡೂ ಇಂಧನಗಳ ಬೆಲೆ ಸ್ಥಿರವಾಗಿದೆ.

ಹೊಸ ತೈಲ ಬೆಲೆಗಳು ಪ್ರತಿ ದಿನ 6 ಗಂಟೆಗೆ ಜಾರಿಗೆ ಬರುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ನಿತ್ಯ ಇಂಧನ ಬೆಲೆಯನ್ನು ಪರಿಷ್ಕರಿಸುತ್ತವೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ. ಇದಲ್ಲದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಇತರ ಅಂಶಗಳಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್, ಡೀಲರ್ ಕಮಿಷನ್, ಸರಕು ಶುಲ್ಕ ಇತ್ಯಾದಿಗಳು ಸೇರಿವೆ.

ಇಂಧನದ ಬೆಲೆಯನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ.

ಇನ್ನು ವಾಹನಗಳಲ್ಲಿ ಸರಿಯಾದ ಇಂಧನವನ್ನು ಬಳಸದೇ ಇದ್ದರೆ ಎಂಜಿನ್ಗೆ ದೊಡ್ಡ ಪ್ರಮಾಣದ ಹಾನಿ ಉಂಟಾಗುತ್ತದೆ. ಆದರೆ ಬೇರೆ ಇಂಧನದಿಂದ ಉಂಟಾಗುವ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸುವುದರಿಂದ ಅನಗತ್ಯ ಖರ್ಚನ್ನು ಕಡಿಮೆ ಮಾಡಬಹುದು. ಪೆಟ್ರೋಲ್ ಎಂಜಿನ್ ವಾಹನಗಳಲ್ಲಿ ಡೀಸೆಲ್ ತುಂಬಿಸಿದರೆ, ಅಥವಾ ಡೀಸೆಲ್ ಎಂಜಿನ್ ವಾಹನಗಳಲ್ಲಿ ಪೆಟ್ರೋಲ್ ತುಂಬಿಸಿದರೆ ಅದರಿಂದ ವಾಹನದ ಎಂಜಿನ್ ಹಾಳಾಗುವುದು ಖಚಿತ.

ಇದೇ ರೀತಿಯ ಘಟನೆಯೊಂದು ಇತ್ತೀಚಿಗೆ ವರದಿಯಾಗಿದೆ. 2021 ರಲ್ಲಿ ಖರೀದಿಸಲಾದ ಹೊಸ ಮಹೀಂದ್ರ ಥಾರ್ ಪೆಟ್ರೋಲ್ ಎಂಜಿನ್ ಮಾದರಿಗೆ ಅಚಾತುರ್ಯದಿಂದ ಡೀಸೆಲ್ ತುಂಬಿಸಲಾಗಿದೆ. ತಕ್ಷಣವೇ ಇದನ್ನು ಗಮನಿಸಿದ ಪೆಟ್ರೋಲ್ ಪಂಕ್ ಸಿಬ್ಬಂದಿ ಡೀಸೆಲ್ ಹೊರ ತೆಗೆದಿದ್ದಾರೆ. ವಾಹನಗಳಲ್ಲಿ ತಪ್ಪಾದ ಇಂಧನ ತುಂಬಿಸಿದಾಗ ಉದ್ದದ ಪೈಪ್ ಮೂಲಕ ವಾಹನದಿಂದ ಸಾಧ್ಯವಾದಷ್ಟು ಇಂಧನವನ್ನು ತೆಗೆದುಹಾಕಬೇಕು.

ಹೊಂದಿಕೆಯಾಗದ ಇಂಧನವಿದ್ದರೆ ಅದು ಎಂಜಿನ್'ಗೆ ಹೋಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಮುಖ್ಯ ಇಂಧನ ಪೈಪ್ನಲ್ಲಿ ಯಾವುದೇ ಇಂಧನವಿದ್ದರೆ ಅವುಗಳನ್ನು ಹೊರತೆಗೆಯಬೇಕು. ಎಲ್ಲಾ ಇಂಧನವನ್ನು ಬಿಡುಗಡೆ ಮಾಡಿದ ನಂತರ, ಎಂಜಿನ್ ಅನ್ನು ಕೆಲವು ಬಾರಿ ಸ್ಟಾರ್ಟ್ ಮಾಡಬೇಕು. ಆಗ ಎಂಜಿನ್ ಸಿಸ್ಟಂ ಯಾವುದೇ ಇಂಧನವನ್ನು ಹೊರಹಾಕುತ್ತದೆ.

ಇದೆಲ್ಲವನ್ನೂ ಮಾಡಿದ ನಂತರ, ಸೂಕ್ತವಾದ ಇಂಧನವನ್ನು ಸುಮಾರು ಎರಡು ಲೀಟರ್'ನಷ್ಟು ತುಂಬಿಸಿ ಎಂಜಿನ್ ಸ್ಟಾರ್ಟ್ ಮಾಡಬೇಕು. ಈ ಇಂಧನವನ್ನು ಸಹ ಬಿಡುಗಡೆ ಮಾಡಿದ ನಂತರ ವಾಹನದ ಫ್ಯೂಯಲ್ ಟ್ಯಾಂಕ್ ಅನ್ನು ತುಂಬಿಸಿ.

ಹಲವು ಬಾರಿ ಪೆಟ್ರೋಲ್ ಬಂಕ್ ಗಳಿಗೆ ಇಂಧನ ತುಂಬಿಸಲು ಹೋದಾಗ ನೀಡಿದ ಹಣಕ್ಕೆ ತಕ್ಕಷ್ಟು ಇಂಧನವನ್ನು ತುಂಬಿಸುವುದಿಲ್ಲವೆಂಬ ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ದೇಶದ ಹಲವು ಭಾಗಗಳಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ಫ್ಯೂಯಲ್ ಫಿಲ್ಟರ್ಗಳಲ್ಲಿ ಅನಿರ್ದಿಷ್ಟ ವ್ಯವಸ್ಥೆಯನ್ನು ಬಳಸಿ ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ಇಂಧನವನ್ನು ವಿತರಿಸದೇ ವಂಚಿಸಲಾಗುತ್ತಿರುವ ಬಗ್ಗೆ ವರದಿಗಳಾಗುತ್ತಲೇ ಇರುತ್ತವೆ.

ಇತ್ತೀಚಿಗೆ ಇದೇ ಕಾರಣಕ್ಕಾಗಿ ಪೆಟ್ರೋಲ್ ಬಂಕ್ ವೊಂದನ್ನು ಸೀಲ್ ಮಾಡಲಾಗಿದೆ. ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಪೆಟ್ರೋಲ್ ಬಂಕಿಗೆ ಗುಜರಾತ್ ರಾಜ್ಯದ ಕೃಷಿ, ಇಂಧನ ಹಾಗೂ ಪೆಟ್ರೋಕೆಮಿಕಲ್ ಸಚಿವರಾದ ಮುಖೇಶ್ ಪಟೇಲ್ ರವರೇ ಮುಂದೆ ನಿಂತು ಬಂದ್ ಮಾಡಿಸಿದ್ದಾರೆ. ಅವರು ಈ ಪೆಟ್ರೋಲ್ ಬಂಕ್ ನಲ್ಲಿ ನಡೆಯುತ್ತಿದ್ದ ಅಕ್ರಮವನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೆಟ್ರೋಲ್ ಬಂಕಿಗೆ ಬೀಗ ಹಾಕಿಸಿದ್ದರು.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications