ಸಾರ್ವಕಾಲಿಕ ದಾಖಲೆ ಕಂಡಿರುವ ಪೆಟ್ರೋಲ್ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರದಿಂದ ಹೊಸ ನಿರ್ಣಯ
ಸಾರ್ವಕಾಲಿಕ ದಾಖಲೆ ಕಾಣುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಹೊಸ ನಿರ್ಣಯ ಕೈಗೊಂಡಿದೆ.

ಕೇಂದ್ರ ಸರ್ಕಾರವು 2023ರ ವೇಳೆಗೆ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು 20%ನಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಈ ಮೊದಲು 2030ರ ವೇಳೆಗೆ ಪೆಟ್ರೋಲ್ನಲ್ಲಿ ಬೆರೆಸಿದ ಎಥೆನಾಲ್ ಪ್ರಮಾಣವನ್ನು 20%ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕಲು ಎಥೆನಾಲ್ ಮಿಶ್ರಣ ಪ್ರಮಾಣವನ್ನು ನಿಗದಿತ ಅವಧಿಯೊಳಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಪೆಟ್ರೋಲ್ ಬೆಲೆ ಇಳಿಕೆ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗಿದೆ.

ಪ್ರಸಕ್ತ ವರ್ಷದ ಎಥೆನಾಲ್ ಪೂರೈಕೆಯಲ್ಲಿ ಭಾರತ ಸರ್ಕಾರವು ಶೇಕಡಾ 10ರಷ್ಟು ಸಂಯೋಜಿತ ಎಥೆನಾಲ್ ಪೆಟ್ರೋಲ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಸಂಯೋಜಿತ ಇಂಧನಕ್ಕಾಗಿ ಕನಿಷ್ಠ 4 ಬಿಲಿಯನ್ ಲೀಟರ್ ಎಥೆನಾಲ್ ಅಗತ್ಯವಿದೆ.

ಸಾಮಾನ್ಯವಾಗಿ ಎಥೆನಾಲ್ ತೈಲಕ್ಕೆ ಬೃಹತ್ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗಿ ನಷ್ಟವಾಗುವುದನ್ನು ತಪ್ಪಿಸಲು ಹೆಚ್ಚುವರಿಯಾಗಿ ಉತ್ಪಾದನೆಯಿಂದ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿಯೇ ಸುಮಾರು 50 ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್ನ್ನು ಉತ್ಪಾದಿಸಿ 400 ಮಿಲಿಯನ್ ಲೀಟರ್ ಎಥೆನಾಲ್ ಸಂಗ್ರಹಿಸಬಹುದಾಗಿದೆ.

ಪ್ರಸ್ತುತ ಕರ್ನಾಟಕ ಒಂದರಲ್ಲೇ 30-35 ಮಿಲಿಯನ್ ಲೀಟರ್(ಶೇ.5)ರಷ್ಟು ಎಥೆನಾಲ್ನ್ನು ಮಾತ್ರ ಪೆಟ್ರೋಲ್ ಮಿಶ್ರಣಕ್ಕೆ ಬಳಕೆಯಾಗುತ್ತಿದ್ದು, ಉಳಿದಂತೆ ಉತ್ಪಾದನೆಯು ನೆರೆ ರಾಜ್ಯಗಳಲ್ಲಿ ತೈಲ ಮಿಶ್ರಣಕ್ಕೆ ಉಪಯೋಗವಾಗುತ್ತಿದೆ.

ಶರ್ಕರಾಂಶವಿರುವ ಸಸ್ಯಗಳು, ಕೃಷಿತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.
MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಈ ಎರಡೂ ಸಮಸ್ಯೆಗಳು ಭಾರತಕ್ಕೆ ತಲೆನೋವಾಗಿ ಪರಿಣಮಿಸಿವೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಪರ್ಯಾಯ ಇಂಧನಗಳ ಮೂಲಕ ಚಲಿಸುವ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಗಳನ್ನು ಕೊನೆಗಾಣಿಸಲು ಮುಂದಾಗಿದೆ.

ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ರೈತರಿಗೆ ಸಹ ಪ್ರಯೋಜನವಾಗಲಿದೆ ಎಂಬುದು ಗಮನಾರ್ಹ. ಎಥೆನಾಲ್ ಜೊತೆಗೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನಗಳಾದ ಸಿಎನ್ಜಿ ಹಾಗೂ ಎಲ್ಎನ್ಜಿ ಬಳಕೆಯನ್ನು ಸಹ ಉತ್ತೇಜಿಸುತ್ತಿದೆ.
MOST READ: ಲಾಕ್ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಇವುಗಳ ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಕಚ್ಚಾ ತೈಲ ಆಮದು ಹಾಗೂ ವಾಯುಮಾಲಿನ್ಯ ಕಡಿತಗೊಳಿಸಲು ಎಲೆಕ್ಟ್ರಿಕ್ ವಾಹನಗಳು ನೆರವಾಗಲಿವೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.


Click it and Unblock the Notifications








