ವಾಹನಗಳಲ್ಲಿ ಕಲರ್ ಸ್ಟಿಕ್ಕರ್ ಅಂಟಿಸಿಕೊಳ್ಳಲು ಸೂಚನೆ ನೀಡಿದ ಸಾರಿಗೆ ಇಲಾಖೆ
ಭಾರತದಲ್ಲಿ ವಾಯು ಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮುಗಿದ ದೀಪಾವಳಿ ಹಬ್ಬದ ನಂತರ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನಿಂದ ಚಲಿಸುವ ವಾಹನಗಳು ವಾಯು ಮಾಲಿನ್ಯದ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿವೆ. ವಾಯು ಮಾಲಿನ್ಯದಿಂದಾಗಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ತೀವ್ರವಾಗಿ ಹದಗೆಟ್ಟಿದೆ.

ಈ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಸಾಧ್ಯವಾದರೆ ಎರಡು ದಿನ ದೆಹಲಿಯಲ್ಲಿ ಲಾಕ್ ಡೌನ್ ಜಾರಿಗೊಳಿಸುವಂತೆ ಸೂಚನೆ ನೀಡಿತ್ತು. ದೆಹಲಿ ಮಾತ್ರವಲ್ಲದೇ ಭಾರತದ ಹಲವು ನಗರಗಳು ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳೂ ಸಹ ಹೊರತಾಗಿಲ್ಲ. ಆಯಾ ರಾಜ್ಯ ಸರ್ಕಾರಗಳು ವಾಯು ಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ.

ವಾಯು ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರವು ವಾಹನ ಮಾಲೀಕರಿಗೆ ತಮ್ಮ ವಾಹನಗಳಿಗೆ ಬಣ್ಣದ ಸ್ಟಿಕ್ಕರ್ಗಳನ್ನು ಪಡೆಯಲು ಸಲಹೆ ನೀಡುತ್ತಿದೆ. ದೆಹಲಿ ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ಈ ಸೂಚನೆ ನೀಡಿದೆ. ದೆಹಲಿ ಸಾರಿಗೆ ಇಲಾಖೆಯ ತನ್ನ ಹೇಳಿಕೆಯಲ್ಲಿ, ಸುಪ್ರೀಂ ಕೋರ್ಟ್ ಆದೇಶ ಹಾಗೂ ಕೇಂದ್ರ ಮೋಟಾರು ವಾಹನ ನಿಯಮ 1989 ರ ಪ್ರಕಾರ ದೆಹಲಿಯಲ್ಲಿ ನೋಂದಾಯಿಸಲಾದ ಎಲ್ಲಾ ವಾಹನಗಳಿಗೆ ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಸ್ಟಿಕ್ಕರ್ ಕಡ್ಡಾಯವಾಗಿದೆ ಎಂದು ಹೇಳಿದೆ.

ಈ ಸ್ಟಿಕ್ಕರ್ ಅನ್ನು ವಾಹನಗಳಲ್ಲಿ ಅಳವಡಿಸಬೇಕು. ದೆಹಲಿ ಸಾರಿಗೆ ಇಲಾಖೆ ಈ ಬಗ್ಗೆ ನವೆಂಬರ್ 19ರಂದು ಸೂಚನೆ ನೀಡಿದೆ. ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಸ್ಟಿಕ್ಕರ್ಗಳನ್ನು ಅಂಟಿಸಲು ಹಳೆಯ ವಾಹನ ಮಾಲೀಕರು ತಮ್ಮ ವಿತರಕರನ್ನು ಸಂಪರ್ಕಿಸಬೇಕು ಎಂದು ಸಾರಿಗೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇಂಧನದ ಪ್ರಕಾರಕ್ಕೆ ಸೂಕ್ತವಾದ ಬಣ್ಣದಲ್ಲಿ ಸ್ಟಿಕ್ಕರ್ ಅನ್ನು ಅಂಟಿಸಲಾಗುತ್ತದೆ.

ಕಲರ್ ಲೈನ್ ಸ್ಟಿಕ್ಕರ್ಗಳನ್ನು ಅಂಟಿಸುವುದರಿಂದ ಅಧಿಕಾರಿಗಳು ರಸ್ತೆಯಲ್ಲಿ ವಾಹನಗಳನ್ನು ಪರಿಶೀಲಿಸುವಾಗ ಇಂಧನದ ಪ್ರಕಾರವನ್ನು ಸುಲಭವಾಗಿ ಗುರುತಿಸಬಹುದು ಎಂಬುದು ಗಮನಾರ್ಹ. 2019ರ ಏಪ್ರಿಲ್'ಗೂ ಮುನ್ನ ನೋಂದಾಯಿಸಲಾದ ವಾಹನಗಳು ಈ ಸ್ಟಿಕ್ಕರ್ಗಳನ್ನು ಹೊಂದಿರುವುದಿಲ್ಲ. ಕೂಡಲೇ ಆ ವಾಹನಗಳ ಮೇಲೆ ಸ್ಟಿಕ್ಕರ್ಗಳನ್ನು ಅಂಟಿಸಬೇಕು.

ಪೆಟ್ರೋಲ್, ಸಿಎನ್ಜಿ ವಾಹನಗಳಿಗೆ ನೀಲಿ ಬಣ್ಣದ ಸ್ಟಿಕ್ಕರ್ಗಳನ್ನು ಅಂಟಿಸಲಾಗುತ್ತದೆ. ಇನ್ನು ಡೀಸೆಲ್ ವಾಹನಗಳಿಗೆ ಕಿತ್ತಳೆ ಬಣ್ಣದ ಸ್ಟಿಕ್ಕರ್ ಅಂಟಿಸಲಾಗುವುದು. ವಾಹನಗಳಲ್ಲಿ ಕಲರ್ ಲೈನ್ ಸ್ಟಿಕ್ಕರ್ ಅಂಟಿಸದೇ ಇರುವವರಿಗೆ ದಂಡ ವಿಧಿಸುವ ನಿಯಮಗಳಿವೆ. ಆದರೆ ಸದ್ಯಕ್ಕೆ ದಂಡ ವಿಧಿಸುವ ಉದ್ದೇಶವಿಲ್ಲಎಂದು ಹೇಳಿರುವ ಸಾರಿಗೆ ಅಧಿಕಾರಿಗಳು ಸದ್ಯ ಈ ಸ್ಟಿಕ್ಕರ್ಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸ್ಟಿಕ್ಕರ್ಗಳು ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ ಹಾಗೂ ಚಾಸಿಸ್ ಸಂಖ್ಯೆಗಳನ್ನು ಹೊಂದಿರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ದೆಹಲಿಯಲ್ಲಿನ ವಾಯು ಮಾಲಿನ್ಯ ಸಮಸ್ಯೆಯಿಂದ ಪರಿಸ್ಥಿತಿ ಉಲ್ಬಣಗೊಂಡಿದೆ. ಹಾಗಾಗಿ ವಾಯು ಮಾಲಿನ್ಯದ ಸಮಸ್ಯೆಯನ್ನು ತುರ್ತಾಗಿ ನಿಯಂತ್ರಿಸುವ ಅಗತ್ಯವಿದೆ. ಅದಕ್ಕಾಗಿಯೇ ಈ ರೀತಿಯ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ದೆಹಲಿಯಲ್ಲಿ ವಾಯು ಮಾಲಿನ್ಯದ ಸಮಸ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿ ಸಿಎನ್ಜಿ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ದೆಹಲಿ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ಹಾಗೂ ಸಿಎನ್ಜಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ದೆಹಲಿ ಮಾತ್ರವಲ್ಲದೆ ಇತರ ರಾಜ್ಯ ಸರ್ಕಾರಗಳೂ ಇದೇ ಹಾದಿಯತ್ತ ಸಾಗುತ್ತಿವೆ. ದೆಹಲಿಯಂತಯೇ ಭಾರತದ ಹಲವು ನಗರಗಳೂ ಸಹ ವಾಯು ಮಾಲಿನ್ಯದಿಂದ ತತ್ತರಿಸುತ್ತಿವೆ. ಪೆಟ್ರೋಲ್, ಡೀಸೆಲ್ನಂತಹ ಸಾಂಪ್ರದಾಯಿಕ ಇಂಧನಗಳಲ್ಲಿ ಚಲಿಸುವ ವಾಹನಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗುತ್ತಿವೆ. ಈ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಪೆಟ್ರೋಲ್ ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಎಲೆಕ್ಟ್ರಿಕ್ ಹಾಗೂ ಪರ್ಯಾಯ ಇಂಧನ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವು ದಿನಗಳ ಹಿಂದಷ್ಟೇ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯು ಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿದೆ.

ಇದರನ್ವಯ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ನೌಕರರು ಪ್ರತಿ ಬುಧವಾರದಂದು ಪೆಟ್ರೋಲ್ ಹಾಗೂ ಡೀಸೆಲ್ನಲ್ಲಿ ಚಲಿಸುವ ವಾಹನಗಳಲ್ಲಿ ಕಚೇರಿಗೆ ಬರಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ. ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಇದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯ ಆವರಣದಲ್ಲಿ ವಾಯು ಮಾಲಿನ್ಯ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆಗಳಿವೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಉದಯನ್, ವಾಹನಗಳಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್ ಆರೋಗ್ಯಕ್ಕೆ ಹಾನಿಕಾರಕ.

ಈ ಹಿನ್ನೆಲೆಯಲ್ಲಿ ಎಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ನೌಕರರು ಬುಧವಾರ ಇಂಧನ ವಾಹನಗಳನ್ನು ಬಳಸಬಾರದು ಎಂದು ತಿಳಿಸಿದ್ದಾರೆ. ಇದರಿಂದ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಆವರಣದಲ್ಲಿ ಪ್ರತಿ ಬುಧವಾರ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಗಳಿವೆ. ವಾಯು ಮಾಲಿನ್ಯ ಪ್ರಮಾಣವು ಸುಮಾರು 20% ನಷ್ಟು ಕಡಿಮೆಯಾಗಬಹುದು ಎಂದು ಅಧಿಕಾರಿಗಳು ಭಾವಿಸುತ್ತಾರೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications