ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಬೇಸತ್ತಿರುವ ವಾಹನ ಮಾಲೀಕರಿಗೆ ಗುಡ್ ನ್ಯೂಸ್
ಸಾರ್ವಕಾಲಿಕ ದಾಖಲೆ ಕಾಣುತ್ತಿರುವ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಯಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ಕೈಗೊಂಡಿದೆ.

ದಿನಂಪ್ರತಿ ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರವು ದೀಪಾವಳಿ ಸಂಭ್ರಮದ ವೇಳೆ ಶುಭ ಸುದ್ದಿ ನೀಡಿದ್ದು, ಇಂಧನಗಳ ಮೇಲೆ ಅಬಕಾರಿ ಸುಂಕ(Excise Duty) ಪ್ರಮಾಣವನ್ನು ಕಡಿತ ಮಾಡಿದೆ. ಅಬಕಾರಿ ಸುಂಕ ಇಳಿಕೆ ಮಾಡಿರುವ ಪರಿಣಾಮ ತುಸಿ ತುಪ್ಪವಾಗಿ ಪರಿಣಮಿಸಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಸು ಇಳಿಕೆಯಾಗಿದ್ದು, ಹೊಸ ದರ ಇಂದಿನಿಂದಲೇ ಅಧಿಕೃತವಾಗಿ ಜಾರಿಯಾಗಿದೆ.

ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 5 ಮತ್ತು ಡೀಸೆಲ್ ಮೇಲೆ ರೂ.10 ಅಬಕಾರಿ ಸುಂಕ ಕಡಿತ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ ರೂ. 107.64 ಪೈಸೆ ಮತ್ತು ಡೀಸೆಲ್ ಪ್ರತಿ ಲೀಟರ್ಗೆ ರೂ. 92.03 ಪೈಸೆಗೆ ಇಳಿಕೆಯಾಗಿದೆ.
ಕೇಂದ್ರ ಸರ್ಕಾರವು ಅಬಕಾರಿ ಸುಂಕ ಕಡಿತಗೊಳಿಸುತ್ತಿದ್ದಂತೆ ಕರ್ನಾಟಕ ಸರ್ಕಾರವು ಸಹ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ ರೂ. 6.29 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ ರೂ. 12.47 ಪೈಸೆ ಇಳಿಕೆ ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಿಂದ ಕೇವಲ ವಾಹನ ಮಾಲೀಕರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಕೂಡಾ ಸಾಕಷ್ಟು ಹೊರೆಯಾಗುತ್ತಿದ್ದು, ಇಂಧನಗಳ ಬೆಲೆ ಏರಿಕೆಯಿಂದಾಗಿ ಸೇವಾ ವಲಯದ ಕಾರ್ಯಾಚರಣೆಯ ವೆಚ್ಚವು ಹೆಚ್ಚಿರುವುದರಿಂದ ಅದರ ಹೊರೆ ಪ್ರತಿಯೊಬ್ಬರಿಗೂ ತಟ್ಟುತ್ತಿದೆ.

ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿ ನಿರಂತರ ಒತ್ತಡ ನಡುವೆಯೂ ಕೇಂದ್ರ ಸರ್ಕಾರವು ಇದೀಗ ಮಹತ್ವದ ನಿರ್ಣಯ ಪ್ರಕಟಿಸಿದ್ದು, ದೀಪಾವಳಿ ವೇಳೆಯೇ ದೇಶದ ಜನರಿಗೆ ಅತಿದೊಡ್ಡ ರಿಲೀಫ್ ಸಿಕ್ಕಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಯ ಸಮರದಿಂದಾಗಿ ದುಬಾರಿಯಾಗುತ್ತಿರುವ ಇಂಧನ ಬೆಲೆಯನ್ನು ನಿಯಂತ್ರಿಸಲು ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹೆಚ್ಚಿಸುತ್ತಿದೆ.

2023ರ ವೇಳೆಗೆ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ. 20ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕಲು ಎಥೆನಾಲ್ ಮಿಶ್ರಣ ಪ್ರಮಾಣವನ್ನು ನಿಗದಿತ ಅವಧಿಯೊಳಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪ್ರಸಕ್ತ ವರ್ಷದ ಎಥೆನಾಲ್ ಪೂರೈಕೆಯಲ್ಲಿ ಭಾರತ ಸರ್ಕಾರವು ಶೇಕಡಾ 10ರಷ್ಟು ಸಂಯೋಜಿತ ಎಥೆನಾಲ್ ಪೆಟ್ರೋಲ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಸಂಯೋಜಿತ ಇಂಧನಕ್ಕಾಗಿ ಕನಿಷ್ಠ 4 ಬಿಲಿಯನ್ ಲೀಟರ್ ಎಥೆನಾಲ್ ಅಗತ್ಯವಿದೆ.

ಸಾಮಾನ್ಯವಾಗಿ ಎಥೆನಾಲ್ ತೈಲಕ್ಕೆ ಬೃಹತ್ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗಿ ನಷ್ಟವಾಗುವ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿಯೇ ಸುಮಾರು 50 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್ನ್ನು ಉತ್ಪಾದಿಸಿ 400 ಮಿಲಿಯನ್ ಲೀಟರ್ ಎಥೆನಾಲ್ ಸಂಗ್ರಹಿಸುವ ಸಿದ್ದತೆ ನಡೆದಿದೆ.

ಪ್ರಸ್ತುತ ಕರ್ನಾಟಕ ಒಂದರಲ್ಲೇ 30-35 ಮಿಲಿಯನ್ ಲೀಟರ್(ಶೇ.5)ರಷ್ಟು ಎಥೆನಾಲ್ನ್ನು ಮಾತ್ರ ಪೆಟ್ರೋಲ್ ಮಿಶ್ರಣಕ್ಕೆ ಬಳಕೆಯಾಗುತ್ತಿದ್ದು, ಉಳಿದಂತೆ ಉತ್ಪಾದನೆಯು ನೆರೆ ರಾಜ್ಯಗಳಲ್ಲಿನ ತೈಲ ಮಿಶ್ರಣಕ್ಕೆ ಉಪಯೋಗವಾಗುತ್ತಿದೆ.

ಶರ್ಕರಾಂಶವಿರುವ ಸಸ್ಯಗಳು, ಕೃಷಿ ತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಈಗಾಗಲೇ ತಜ್ಞರು ದೃಡಪಡಿಸಿದ್ದಾರೆ.

ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ರೈತರಿಗೆ ಸಹ ಪ್ರಯೋಜನವಾಗಲಿದೆ ಎಂಬುದು ಗಮನಾರ್ಹವಾಗಿದ್ದು, ಎಥೆನಾಲ್ ಜೊತೆಗೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನಗಳಾದ ಸಿಎನ್ಜಿ ಹಾಗೂ ಎಲ್ಎನ್ಜಿ ಬಳಕೆಯನ್ನು ಸಹ ಉತ್ತೇಜಿಸುತ್ತಿದೆ.

ಇವುಗಳ ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಕಚ್ಚಾ ತೈಲ ಆಮದು ಹಾಗೂ ವಾಯುಮಾಲಿನ್ಯ ಕಡಿತಗೊಳಿಸಲು ಎಲೆಕ್ಟ್ರಿಕ್ ವಾಹನಗಳು ನೆರವಾಗಲಿವೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.


Click it and Unblock the Notifications








