ಪೆಟ್ರೋಲ್ ಬೆಲೆ: ತೆರಿಗೆ ಇಳಿಕೆಗಾಗಿ ಮಹತ್ವದ ಮುನ್ನಡೆ ಸಾಧಿಸಿದ ಕೇಂದ್ರ ಸರ್ಕಾರ
ಸಾರ್ವಕಾಲಿಕ ದಾಖಲೆ ಕಾಣುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ನಿಯಂತ್ರಣ ತಪ್ಪುತ್ತಿರುವ ಪೆಟ್ರೋಲ್ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಹೊಸ ನಿರ್ಣಯದೊಂದಿಗೆ ಮಹತ್ವದ ಮುನ್ನಡೆ ಸಾಧಿಸುತ್ತಿದೆ.

ಪೆಟ್ರೋಲ್ ದರ ಇಳಿಕೆಗಾಗಿ 2025ರ ವೇಳೆಗೆ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ.20 ಹೆಚ್ಚಿಸುವ ಗುರಿ ಹೊಂದಿದ್ದು, ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹಂತ-ಹಂತವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ಅವಧಿಗೂ ಮುನ್ನ ಶೇ.10 ಎಥೆನಾಲ್ ಮಿಶ್ರಣದ ಗುರಿಯನ್ನು ತಲುಪಿದೆ.

ಯೋಜನೆಯ ಪ್ರಕಾರ 2022ರ ಕೊನೆಯಲ್ಲಿ ಶೇ.5 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಹೊಂದಲಾಗಿತ್ತು. ಆದರೆ ನಿಗದಿತ ಅವಧಿಗೂ ಮುನ್ನವೇ ಎಥೆನಾಲ್ ಪ್ರಮಾಣದ ಮಿಶ್ರಣವನ್ನು ಮೇ ಆರಂಭದಲ್ಲಿಯೇ ಗುರಿತಲುಪಲಾಗಿದ್ದು, ವರ್ಷಾಂತ್ಯಕ್ಕೆ ಇದರ ಪ್ರಮಾಣವು ಶೇ.12ಕ್ಕೆ ಹೆಚ್ಚಳವಾಗಬಹುದಾಗಿದೆ.

ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಇಳಿಕೆ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಗುರಿಸಾಧನೆಯೊಂದಿಗೆ ಸರ್ಕಾರವು ಮುಂದಿನ ಅಕ್ಟೋಬರ್ ವೇಳೆಗೆ ಪೆಟ್ರೋಲ್ ಮೇಲಿನ ಹಸಿರು ತೆರಿಗೆ ಇಳಿಕೆಯನ್ನು ಪ್ರತಿ ಲೀಟರ್ಗೆ ರೂ.2 ರಷ್ಟು ಇಳಿಕೆ ಮಾಡಬಹುದಾಗಿದೆ.

ದೇಶದಲ್ಲಿ ಎಥೆನಾಲ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ತೈಲ ಸಚಿವಾಲಯ ಮತ್ತು ಸರ್ಕಾರದ ನೀತಿ ಆಯೋಗವು ಜಂಟಿಯಾಗಿ ಸಿದ್ಧಪಡಿಸಿದ ಮಿಶ್ರಣದ ಮಾರ್ಗಸೂಚಿಯಂತೆ 2022ರ ಅಂತ್ಯದ ವೇಳೆಗೆ ಶೇ. 5 ರಷ್ಟು ಮತ್ತು 2025ರ ವೇಳೆಗೆ ಶೇ.20 ರಷ್ಟು ಮಿಶ್ರಣ ಮಾಡುವ ಗುರಿಯನ್ನು ಹೊಂದಿತ್ತು.

ಇದೀಗ ನಿಗದಿತ ಅವಧಿಗೂ ಮುನ್ನ ಎಥೆನಾಲ್ ಮಿಶ್ರಣ ಪ್ರಮಾಣವು ಹೆಚ್ಚಳವಾಗಿರುವುದರಿಂದ ಮುಂಬರುವ ಕೇಂದ್ರದ ಚಳಿಗಾಲ ಅಧಿವೇಶನದ ವೇಳೆ ಹೊಸ ತೆರಿಗೆ ಕಡಿತ ಕುರಿತಂತೆ ಅಧಿಕೃತ ಸುತ್ತೋಲೆ ಹೊರಡಿಸಲಿರುವ ಕೇಂದ್ರ ಸರ್ಕಾರವು ಪೆಟ್ರೋಲ್ ಹೊರೆಯನ್ನು ತಗ್ಗಿಸಲಿದೆ.

ಪೆಟ್ರೋಲ್ನಲ್ಲಿ ಶೇ.20 ರಷ್ಟು ಎಥೆನಾಲ್ ಮಿಶ್ರಣದ ಮೂಲಕ ಕೇಂದ್ರ ಸರ್ಕಾರವು ತೈಲ ಆಮದು ವಹಿವಾಟಿನಲ್ಲಿ ವಾರ್ಷಿಕವಾಗಿ 5 ಬಿಲಿಯನ್ ಡಾಲರ್(ರೂ.30,000 ಕೋಟಿ ರೂ.ಗಿಂತ ಹೆಚ್ಚು) ಉಳಿತಾಯ ಮಾಡಲಿದೆ.

ಇದರೊಂದಿಗೆ ಕೇಂದ್ರ ಸರ್ಕಾರವು 2030ರ ವೇಳೆಗೆ ಶೇ.5 ರಷ್ಟು ಜೈವಿಕ ಡೀಸೆಲ್ ಅನ್ನು ಡೀಸೆಲ್ನೊಂದಿಗೆ ಮಿಶ್ರಣ ಮಾಡುವ ಗುರಿಯನ್ನು ಹೊಂದಲಾಗಿದ್ದು, ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯಾ ಯೋಜನೆಗಳ ಭಾಗವಾಗಿ ಶುದ್ಧ ಇಂಧನಗಳ ಅಳವಡಿಕೆಯನ್ನು ವೇಗಗೊಳಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಎಥೆನಾಲ್ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ವಿವಿಧ ಮೂಲಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಹೊಸ ಗುರಿಸಾಧನೆಗೆ ಕನಿಷ್ಠ 4 ಬಿಲಿಯನ್ ಲೀಟರ್ನಷ್ಟು ಎಥೆನಾಲ್ ಅಗತ್ಯವಿದೆ.

ಸಾಮಾನ್ಯವಾಗಿ ಎಥೆನಾಲ್ ತೈಲಕ್ಕೆ ಬೃಹತ್ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆಯಿದ್ದು, ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗುವ ನಷ್ಟವಾಗುವುದನ್ನು ತಪ್ಪಿಸಲು ಹೆಚ್ಚುವರಿಯಾಗಿ ಉತ್ಪಾದನೆಯಿಂದ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 50ಕ್ಕಿಂತ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್ನ್ನು ಉತ್ಪಾದಿಸಿ 400 ಮಿಲಿಯನ್ ಲೀಟರ್ ಎಥೆನಾಲ್ ಸಂಗ್ರಹಿಸಬಹುದಾಗಿದೆ.

ಪ್ರಸ್ತುತ ಕರ್ನಾಟಕ ಒಂದರಲ್ಲೇ 30-35 ಮಿಲಿಯನ್ ಲೀಟರ್(ಶೇ.5)ರಷ್ಟು ಎಥೆನಾಲ್ನ್ನು ಮಾತ್ರ ಪೆಟ್ರೋಲ್ ಮಿಶ್ರಣಕ್ಕೆ ಬಳಕೆಯಾಗುತ್ತಿದ್ದು, ಉಳಿದಂತೆ ಉತ್ಪಾದನೆಯು ನೆರೆ ರಾಜ್ಯಗಳಲ್ಲಿ ತೈಲ ಮಿಶ್ರಣಕ್ಕೆ ಉಪಯೋಗವಾಗುತ್ತಿದೆ.

ಶರ್ಕರಾಂಶವಿರುವ ಸಸ್ಯಗಳು, ಕೃಷಿತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ರೈತರಿಗೂ ಸಹ ಹೆಚ್ಚಿನ ಪ್ರಯೋಜನವಾಗಲಿದೆ ಎಂಬುದು ಗಮನಾರ್ಹ. ಎಥೆನಾಲ್ ಜೊತೆಗೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನಗಳಾದ ಸಿಎನ್ಜಿ ಹಾಗೂ ಎಲ್ಎನ್ಜಿ ಬಳಕೆಯನ್ನು ಸಹ ಉತ್ತೇಜಿಸುತ್ತಿದೆ.

ಇವುಗಳ ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಕಚ್ಚಾ ತೈಲ ಆಮದು ಹಾಗೂ ವಾಯುಮಾಲಿನ್ಯ ಕಡಿತಗೊಳಿಸಲು ಎಲೆಕ್ಟ್ರಿಕ್ ವಾಹನಗಳು ನೆರವಾಗಲಿವೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.


Click it and Unblock the Notifications








