ಶೋರೂಂನಲ್ಲಿ ರೈತನ ಅಪಮಾನಕ್ಕೆ ಪ್ರಕರಣಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆಸಿದ ಆನಂದ್ ಮಹೀಂದ್ರಾ
ಹೊಸ ವಾಹನ ಖರೀದಿ ಉದ್ದೇಶಕ್ಕೆ ಶೋರೂಂಗೆ ಭೇಟಿ ನೀಡಿದ್ದ ಯುವ ರೈತನಿಗೆ ಮಹೀಂದ್ರಾ ಶೋರೂಂ ಸಿಬ್ಬಂದಿ ಅವಮಾನ ಮಾಡಿದ ಪ್ರಕರಣಕ್ಕೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮೊದಲ ಬಾರಿಗೆ ಪ್ರತಿಕ್ರಿಯೆಸಿದ್ದಾರೆ.

ಮಹೀಂದ್ರಾ ಶೋರೂಂನಲ್ಲಿ ಅವಮಾನ ಪ್ರಕರಣಕ್ಕೆ ಸಂಬಂಧ ಶೋರೂಂ ಹಿರಿಯ ಅಧಿಕಾರಿ ಕ್ಷೆಮೆ ಕೋರಿದ ಬೆನ್ನಲ್ಲೇ ಕಂಪನಿಯ ಸಿಇಓ ವಿಜಯ್ ನಕ್ರಾ ಮತ್ತು ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಕೂಡಾ ಪ್ರತಿಕ್ರಿಯೆಸಿದ್ದು, ಅಧಿಕೃತ ಟ್ವಿಟರ್ ಖಾತೆಯ ಮೂಲಕ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೊದಲಿಗೆ ಮಹೀಂದ್ರಾ ವಾಹನಗಳ ವಿಭಾಗದ ಸಿಇಒ ವಿಜಯ್ ನಕ್ರಾ ಪ್ರತಿಕ್ರಿಯೆ ನೀಡಿದ್ದು, ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಬೇಕೆಂಬ ನಮ್ಮ ಧೇಯೋದ್ದೇಶದಲ್ಲಿ ಡೀಲರ್ಗಳ ಪಾತ್ರ ಅತಿಮುಖ್ಯವಾಗಿರುತ್ತದೆ. ಗ್ರಾಹಕರನ್ನು ಗೌರವದಿಂದ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ನಮ್ಮ ನಿಯಮವಾಗಿದ್ದು, ಘಟನೆ ಕುರಿತಂತೆ ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಿದ್ದು, ಗ್ರಾಹಕರನ್ನು ಗೌರವಿಸುವ ಕಂಪನಿಯ ನಿಯಮದಿಂದ ಯಾವುದೇ ಡೀಲರ್ ದೂರ ಸರಿದರೂ ಅಗತ್ಯವಾಗಿ ಸಿಬ್ಬಂದಿಗೆ ಕೌನ್ಸೆಲಿಂಗ್ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ವಿಜಯ್ ನಕ್ರಾ ಅವರ ಟ್ವಿಟ್ ಅನ್ನು ಮರು ಟ್ವಿಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ಕೂಡಾ ಘಟನೆಗೆ ವಿಷಾದ ವ್ಯಕ್ತಪಡಿಸಿ ಕಂಪನಿಯ ಉದ್ದೇಶವೇ ಎಲ್ಲಾ ಸಮುದಾಯಗಳನ್ನು ಮತ್ತು ಪಾಲುದಾರರಿಗೆ(stakeholders) ಶಕ್ತಿ ತುಂಬುವುದಾಗಿದ್ದು, ಪ್ರತಿಯೊಬ್ಬರ ಘನತೆಯನ್ನು ಎತ್ತಿಹಿಡಿಯುವುದು ಕಂಪನಿಯ ಮೂಲ ಆಶಯವಾಗಿದೆ. ನಮ್ಮ ಮೌಲ್ಯಗಳೊಂದಿಗೆ ರಾಜಿ ಆಗುವುದು ಮತ್ತು ನಮ್ಮ ನೀತಿಗಳಿಂದ ದೂರ ಸರಿಯುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

ಗ್ರಾಹಕನಿಗೆ ಅವಮಾನಿಸಿದ್ದ ಶೋರೂಂ ಸಿಬ್ಬಂದಿ!
ತುಮಕೂರಿನ ರಾಮನಪಾಳ್ಯದಲ್ಲಿ ಕೆಂಪೇಗೌಡ ಅನ್ನುವ ಯುವ ರೈತ ವಾಣಿಜ್ಯ ಬಳಕೆಗಾಗಿ ಬೊಲೆರೊ ಪಿಕ್ಅಪ್ ಖರೀದಿಸಲು ಮಹೀಂದ್ರಾ ಶೋರೂಂಗೆ ತಮ್ಮ ಸ್ನೇಹಿತರೊಂದಿಗೆ ಬುಕ್ ಮಾಡಲು ಬಂದಿದ್ದರು. ಈ ವೇಳೆ ರೈತನ ಸಾಮಾನ್ಯ ವೇಷ ಭೂಷಣ ನೋಡಿದ ಶೋರೂರಂ ಸಿಬ್ಬಂದಿ ವಾಹನ ಬಗೆಗೆ ಸರಿಯಾದ ಮಾಹಿತಿ ನೀಡದೆ ಅವಮಾನಿಸಿದ್ದಲ್ಲದೆ 10 ರೂಪಾಯಿ ಹೊಂದಿಸಲು ಯೋಗ್ಯತೆ ಇಲ್ಲ, ಹೊಸ ವಾಹನ ಖರೀದಿಸುತ್ತಾನಂತೆ ಎಂದು ಹಂಗಿಸಿದ್ದರು.

ಶೋರೂಂ ಸಿಬ್ಬಂದಿ ಮಾತಿಗೆ ಕೆರಳಿದ ರೈತ ಕೆಂಪೇಗೌಡ ಅರ್ಧ ಗಂಟೆಯಲ್ಲಿ ರೂ.10 ಲಕ್ಷ ರೂಪಾಯಿ ಹೊಂದಿಸುವ ಮೂಲಕ ಇಂದೇ ಹೊಸ ವಾಹನವನ್ನು ಡೆಲಿವರಿ ಕೊಡುವಂತೆ ಆಗ್ರಹಿಸಿದ್ದರು.

ಮೊದಲು ಬೇಜವಾಬ್ದಾರಿಯಾಗಿ ವರ್ತಿಸಿದ್ದಲ್ಲದೆ ಅವಮಾನದ ಮಾತುಗಳ್ನಾಡಿದ್ದ ಶೋರೂಂ ಸೆಲ್ಸ್ ಸಿಬ್ಬಂದಿಯು ದುಡ್ಡು ಹೊಂದಿಸಿದ ರೈತನ ಸವಾಲಿಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ ಶೋರೂಂ ಸಿಬ್ಬಂದಿಯು ದುಡ್ಡು ತಂದ ರೈತನಿಗೆ ಕೊಟ್ಟ ಮಾತಿನಂತೆ ವಾಹನ ನೀಡದೆ ಸಬೂಬು ಹೇಳಿ ರೈತನನ್ನು ಸಾಗ ಹಾಕಲು ಮುಂದಾಗಿದ್ದಾರೆ.

ಶೋರೂಂ ಸಿಬ್ಬಂದಿಯ ವರ್ತನೆಗೆ ಬೇಸತ್ತ ಕೆಂಪೇಗೌಡ ಸಿಬ್ಬಂದಿ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಶೋರೂಂ ಸಿಬ್ಬಂದಿಯ ಮಾತಿನಂತೆಯೇ ಹಣ ತಂದಿದ್ದು, ಬಟ್ಟೆ ನೋಡಿ ಅವಮಾನಿಸಿದ ಸಿಬ್ಬಂದಿ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.

ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ದಿಗ್ಗಜರು' ಸಿನಿಮಾದಲ್ಲಿನ ದೃಶ್ಯದಂಥ ಘಟನೆಯು ಇಡೀ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಎಚ್ಚತ್ತುಕೊಂಡ ಮಹೀಂದ್ರಾ ಕಂಪನಿಯ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಇತ್ಯರ್ಥ್ಯಗೊಳಿಸಿದ್ದಾರೆ.

ರೈತನಿಗೆ ಆದ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೋರೂಂ ಸಿಇಒ ದೀಪಕ್ ಕುಮಾರ್ ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷೆಮೆ ಕೋರಿದ್ದಾರೆ. ನಮ್ಮ ಸಿಬ್ಬಂದಿ ರೈತನ ಬಟ್ಟೆ ನೋಡಿ ಅವಮಾನಿಸಿಲ್ಲ, ಕೆಲವು ತಪ್ಪು ಕಲ್ಪನೆಗಳಿಂದ ಈ ಘಟನೆ ನಡೆದಿದೆ. ನಮ್ಮ ಶೋರೂಂನಲ್ಲಿ ರೈತರು, ಚಾಲಕರೇ ಮುಖ್ಯ ಗ್ರಾಹಕರಾಗಿದ್ದು, ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಪ್ರಕಣಕ್ಕೆ ಮಂಗಳ ಹಾಡಿದ್ದಾರೆ.

ಜೊತೆಗೆ ಪೂರ್ತಿ ಹಣ ನೀಡಿದರೂ ವಾಹನ ನೀಡದಿರುವ ಬಗೆಗೆ ಸ್ಪಷ್ಟನೆ ನೀಡಿದ ಸಿಇಒ ದೀಪಕ್ ಕುಮಾರ್ ವಾಹನ ಖರೀದಿಗಾಗಿ ಗ್ರಾಹಕರಿಂದ ಗರಿಷ್ಠ ಪ್ರಮಾಣದಲ್ಲಿ ನೇರವಾಗಿ ಹಣ ಪಡೆಯಲು ಸಾಧ್ಯವಿರಲಿಲ್ಲ. ಹೊಸ ವಾಹನ ಖರೀದಿಗೆ ಗ್ರಾಹಕರು ನಿಗದಿತ ಪ್ರಮಾಣದಲ್ಲಿ ಮಾತ್ರ ಹಣ ಸ್ವಿಕರಿಸಿ ಇನ್ನಳಿದ ಮೊತ್ತವನ್ನು ಕಡ್ಡಾಯವಾಗಿ ಆರ್ಟಿಜಿಎಸ್ ಅಥವಾ ಚೆಕ್ ಮೂಲಕ ಮಾತ್ರ ಸ್ವಿಕರಿಸಬೇಕಿತ್ತು. ಇದರಿಂದ ಆದ ಗೊಂದಲಗಳೇ ಈ ಘಟನೆ ಕಾರಣವಾಗಿದೆ ಎಂದಿದ್ದಾರೆ.

ಅಪಮಾನ ಪ್ರಕರಣದ ಕುರಿತು ಮಾತನಾಡಿದ ಯುವ ರೈತ ಕೆಂಪೇಗೌಡ ಶೋರೂಂ ಸಿಬ್ಬಂದಿ ಮಾಡಿದ ಅಪಮಾನವು ಕೇವಲ ನನಗೆ ಮಾತ್ರವಲ್ಲ ಇಡೀ ರೈತ ಕುಲಕ್ಕೆ ಅಪಚಾರ ಮಾಡಿದಂತೆ ಎಂದು ವಿಷಾದ ವ್ಯಕ್ತಪಡಿಸಿದ್ದು, ಶೋರೂಂ ಸಿಇಒ ಘಟನೆ ಕುರಿತು ಕ್ಷೆಮೆ ಕೋರಿದ್ದಕ್ಕೆ ಕೇಸ್ ವಾಪಸ್ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಮತ್ತಷ್ಟು ಮಾಹಿತಿ ಹಂಚಿಕೊಂಡ ರೈತ ಕೆಂಪೇಗೌಡರು ಅಂದು ಶೋರೂಂ ಸಿಬ್ಬಂದಿ ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದ್ದಲ್ಲದೇ 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದ್ದರು. ವಾಹನ ಖರೀದಿಗಾಗಿ ನಾವು ಒಟ್ಟು ಏಳು ಹೋಗಿದ್ದಾಗ ನೀವು ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ' ಎಂದು ಅವಮಾನಿಸಿದ್ದರಂತೆ.

ಕಳೆದ ಡಿಸೆಂಬರ್ 4ರಂದು ಕೂಡಾ ಹೊಸ ವಾಹನ ಖರೀದಿಯ ಉದ್ದೇಶದಿಂದಲೇ ಕೊಟೇಷನ್ ಪಡೆದಿದ್ದ ಕೆಂಪೇಗೌಡರ ಜೊತೆ ಸಿಬ್ಬಂದಿ ಚೆನ್ನಾಗಿಯೇ ಮಾತನಾಡಿದ್ದಂತೆ. ಆದರೆ ಮೊನ್ನೆ ಮುಂಗಡವಾಗಿ ರೂ.2 ಲಕ್ಷ ಡೌನ್ ಪೆಮೆಂಟ್ ಮೂಲಕ ವಾಹನ ಖರೀದಿಗೆ ಬಂದಿದ್ದಾಗ ಶೋರೂಂ ಸಿಬ್ಬಂದಿ ತಮ್ಮ ಯೋಗ್ಯತೆ ಕುರಿತಂತೆ ಮಾತನಾಡಿದ್ದು ತುಂಬಾ ಬೇಸರ ತಂದಿತು ಎಂದಿದ್ದಾರೆ.

ನಾವು ಶೋರೂಂ ಸಿಬ್ಬಂದಿ ಹೇಳಿದಂತೆ ರೂ.10 ಲಕ್ಷ ತಂದ ಕೊಟ್ಟ ನಂತರವೂ ಸಿಬ್ಬಂದಿ ವರ್ತನೆಯು ತಮಗೆ ಬೇಸರ ತಂದಿತು. ಹೀಗಾಗಿ ನಾವು ಅವರು ವಿರುದ್ದ ಪ್ರಕರಣ ದಾಖಲೆ ಮಾಡಿದ್ದೇವು. ಇದೀಗ ಶೋರೂಂ ಸಿಇಒ ಕ್ಷೆಮೆ ಕೋರಿದ್ದರಿಂದ ನಾವು ಕೇಸ್ ವಾಪಸ್ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.


Click it and Unblock the Notifications