ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ
ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಳ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ ಆರಂಭಗೊಂಡಿದ್ದು, ಸರಿ ಸುಮಾರು 137 ದಿನಗಳ ಬಳಿಕ ಭಾರತದ ಪ್ರಮುಖ ನಗರಗಳಲ್ಲಿ ಇಂದು ಇಂಧನ ದರದಲ್ಲಿ ಏರಿಕೆಯಾಗಿದೆ.

ದೇಶದ ಪ್ರಮುಖ ಸರ್ಕಾರಿ ತೈಲ ಕಂಪನಿಗಳು ಮಂಗಳವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಪರಿಷ್ಕಣೆ ಮಾಡಿದ್ದು, ಹೊಸ ದರಗಳು ವಾಹನ ಮಾಲೀಕರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ. ಕಳೆದ ನವೆಂಬರ್ 2ರಂದು ಕೊನೆಯ ಬಾರಿಗೆ ಇಂಧನ ಬೆಲೆ ಹೆಚ್ಚಿಸಿದ್ದ ತೈಲ ಕಂಪನಿಗಳು 137 ದಿನಗಳ ಬಳಿಕ ಇದೀಗ ಮತ್ತೆ ದರ ಪರಿಷ್ಕರಣೆ ಮಾಡಿವೆ.

ಭಾರತದಲ್ಲಿ ಕಳೆದ 2 ವರ್ಷದಿಂದ ಕಚ್ಚಾತೈಲ ಬೆಲೆ ಆಧರಿಸಿ ದಿನಂಪ್ರತಿ ತೈಲ ಬೆಲೆಯಲ್ಲಿ ಏರಿಳಿತವನ್ನು ಪ್ರಕಟಿಸಲಾಗುತ್ತಿದ್ದು, ಪ್ರತಿನಿತ್ಯ ಬೆಳಗಿನ 6 ಗಂಟೆಗೆ ಹೊಸ ದರವನ್ನು ನಿಗದಿಪಡಿಸಲಾಗುತ್ತಿದೆ.

ಮಾರ್ಚ್ 22ಕ್ಕೆ ಅನ್ವಯಿಸುವಂತೆ ಪರಿಷ್ಕರಣೆ ಮಾಡಲಾದ ಇಂಧನ ದರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ತುಸು ದುಬಾರಿಯಾಗಿದ್ದು, ನಮ್ಮ ಬೆಂಗಳೂರಿನ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಬೆಲೆಯಲ್ಲಿ ಪ್ರತಿ ಲೀಟರ್ಗೆ 79 ಪೈಸೆಯಿಂದ 84 ಪೈಸೆ ಹೆಚ್ಚಳವಾಗಿದೆ.

ಇಂಧನಗಳ ದರ ಹೆಚ್ಚಳದ ನಂತರ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಪ್ರತಿ ಲೀಟರ್ ಬೆಲೆ ರೂ.100.58 ಪೈಸೆಯಿಂದ ರೂ. 101.42 ಪೈಸೆಗೆ ಹೆಚ್ಚಳವಾಗಿದ್ದರೆ ಡೀಸೆಲ್ ಬೆಲೆಯು ಪ್ರತಿ ಲೀಟರ್ಗೆ ರೂ. 85.01 ಪೈಸೆಯಿಂದ ರೂ. 85.80 ಪೈಸೆಗೆ ಹೆಚ್ಚಳವಾಗಿದೆ.

ಹೊಸ ದರಪಟ್ಟಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆಯಲ್ಲಿ 84 ಪೈಸೆ ಹೆಚ್ಚಳವಾದರೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 79 ಪೈಸೆ ಹೆಚ್ಚಳವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಯ ಪರಿಣಾಮ ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗಿ ಪರಿಣಮಿಸಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯು ಪ್ರತಿ ಬ್ಯಾರೆಲ್ಗೆ 118.9 ಯುಸ್ ಡಾಲರ್ನಂತೆ ವ್ಯವಹಾರ ನಡೆಸುತ್ತಿದ್ದು, ಒಂದೇ ದಿನಗಳಲ್ಲಿ ಶೇ 3.31ರಷ್ಟು ಏರಿಕೆ ಕಂಡಿದೆ. ಜೊತೆಗೆ ವಿವಿಧ ರಾಜ್ಯಗಳು ಇಂಧನಗಳ ವಿಧಿಸುವ ಅಬಕಾರಿ ಸುಂಕಗಳು ಇಂಧನ ಬೆಲೆಯನ್ನು ಮತ್ತಷ್ಟು ದುಬಾರಿಯಾಗಿಸುತ್ತವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಿಂದ ಕೇವಲ ವಾಹನ ಮಾಲೀಕರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಕೂಡಾ ಸಾಕಷ್ಟು ಹೊರೆಯಾಗುತ್ತಿದ್ದು, ಇಂಧನಗಳ ಬೆಲೆ ಏರಿಕೆಯಿಂದಾಗಿ ಸೇವಾ ವಲಯದ ಕಾರ್ಯಾಚರಣೆಯ ವೆಚ್ಚವು ಹೆಚ್ಚಿರುವುದರಿಂದ ಅದರ ಹೊರೆ ಪ್ರತಿಯೊಬ್ಬರಿಗೂ ತಟ್ಟುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಯ ಸಮರದಿಂದಾಗಿ ದುಬಾರಿಯಾಗುತ್ತಿರುವ ಇಂಧನಗಳ ಬೆಲೆಯನ್ನು ನಿಯಂತ್ರಿಸಲು ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಹಂತ-ಹಂತವಾಗಿ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹೆಚ್ಚಿಸುತ್ತಿದೆ.

2023-24ರ ವೇಳೆಗೆ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ. 20ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕಲು ಎಥೆನಾಲ್ ಮಿಶ್ರಣ ಪ್ರಮಾಣವನ್ನು ನಿಗದಿತ ಅವಧಿಯೊಳಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪ್ರಸಕ್ತ ವರ್ಷದ ಎಥೆನಾಲ್ ಪೂರೈಕೆಯಲ್ಲಿ ಭಾರತ ಸರ್ಕಾರವು ಶೇಕಡಾ 10ರಷ್ಟು ಸಂಯೋಜಿತ ಎಥೆನಾಲ್ ಪೆಟ್ರೋಲ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಸಂಯೋಜಿತ ಇಂಧನಕ್ಕಾಗಿ ಕನಿಷ್ಠ 4 ಬಿಲಿಯನ್ ಲೀಟರ್ ಎಥೆನಾಲ್ ಅಗತ್ಯವಿದೆ.

ಸಾಮಾನ್ಯವಾಗಿ ಎಥೆನಾಲ್ ತೈಲಕ್ಕೆ ಬೃಹತ್ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗಿ ನಷ್ಟವಾಗುವ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿಯೇ ಸುಮಾರು 50ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್ನ್ನು ಉತ್ಪಾದಿಸಿ 400 ಮಿಲಿಯನ್ ಲೀಟರ್ ಎಥೆನಾಲ್ ಸಂಗ್ರಹಿಸುವ ಸಿದ್ದತೆ ನಡೆಸಲಾಗುತ್ತಿದೆ.

ಪ್ರಸ್ತುತ ಕರ್ನಾಟಕ ಒಂದರಲ್ಲೇ 30-35 ಮಿಲಿಯನ್ ಲೀಟರ್(ಶೇ.5)ರಷ್ಟು ಎಥೆನಾಲ್ನ್ನು ಮಾತ್ರ ಪೆಟ್ರೋಲ್ ಮಿಶ್ರಣಕ್ಕೆ ಬಳಕೆಯಾಗುತ್ತಿದ್ದು, ಉಳಿದಂತೆ ಉತ್ಪಾದನೆಯು ನೆರೆ ರಾಜ್ಯಗಳಲ್ಲಿನ ತೈಲ ಮಿಶ್ರಣಕ್ಕೆ ಉಪಯೋಗವಾಗುತ್ತಿದೆ.

ಶರ್ಕರಾಂಶವಿರುವ ಸಸ್ಯಗಳು, ಕೃಷಿ ತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಈಗಾಗಲೇ ತಜ್ಞರು ದೃಡಪಡಿಸಿದ್ದಾರೆ.


Click it and Unblock the Notifications








