ರಸ್ತೆ ಅಪಘಾತ: ಮಾನವೀಯತೆ ಮರೆಯಾಗದಿರಲಿ
ರಸ್ತೆ ಅಪಘಾತ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳುವರ ಸಂಖ್ಯೆ ಹೆಚ್ಚಲು ಸಾರ್ವಜನಿಕರು ಕೂಡ ಪ್ರಮುಖ ಕಾರಣ. ರಸ್ತೆ ಅಪಘಾತವಾದ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ ಅಥವಾ ಪ್ರಥಮ ಚಿಕಿತ್ಸೆ ನೀಡದೆ ನೆಗ್ಲೆಕ್ಟ್ ಮಾಡುವ ಜನರಿಂದಾಗಿ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ.
ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿದರೆ, ಸಂಬಂಧಿಸಿದ ಸಂಸ್ಥೆಗಳಿಗೆ ಮಾಹಿತಿ ನೀಡಿದರೆ, ಅಂಬ್ಯುಲೆನ್ಸಿಗೆ ಕರೆ ಮಾಡಿದರೆ ಗಾಯಗೊಂಡವರ ಅಮೂಲ್ಯ ಪ್ರಾಣ ಉಳಿಯಬಹುದು. ಪೊಲೀಸ್, ಕೋರ್ಟ್ ರಗಳೆ ಬೇಡವೆಂದು ಹೆಚ್ಚಿನ ಜನರು ಮಾನವೀಯತೆ ಮರೆಯುತ್ತಾರೆ.
ಆದರೆ ಈಗ ಕಾನೂನು ಬದಲಾಗಿದೆ. ಅಪಘಾತದ ಸಂದರ್ಭದಲ್ಲಿ ನೆರವಾದವರಿಗೆ ಪೊಲೀಸ್, ಕಾನೂನು ಕಟ್ಟಲೆ ಕಿರಿಕಿರಿ ಇರದು. ಆಸ್ಪತ್ರೆಗಳೂ ಕೂಡ ಮೊದಲು ಚಿಕಿತ್ಸೆ ನೀಡಬೇಕು. ಕಂಪ್ಲೆಂಟ್ ನಂತರ ನೀಡಿದರೆ ಸಾಕು. ಈಗ ಅಪಘಾತದ ಸಂದರ್ಭದಲ್ಲಿ ನೆರವು ನೀಡಿದರೆ ಬಹುಮಾನವೂ ದೊರಕಬಹುದು.
ಅಪಘಾತದಂತಹ ಸಂದರ್ಭದಲ್ಲಿ ಮಾನಿವೀಯತೆಯ ನೆಲೆಯಲ್ಲಿ ಯೋಚಿಸಿ ಪ್ರತಿಯೋಬ್ಬರು ಸಹಾಯ ಹಸ್ತ ಚಾಚಬೇಕು. ಒಬ್ಬರು ಸಹಾಯ ನೀಡಲು ಮುಂದಾದರೆ ಮತ್ತೊಬ್ಬರು ನೆರವಾಗುತ್ತಾರೆ.
ಅಪಘಾತಗಳ ಸಂದರ್ಭದಲ್ಲಿ ಇತರರಿಗೆ ನೆರವು ನೀಡಲು ಹಿಂಜರಿಯಬೇಡಿ. ಗಾಯಗೊಂಡವರಿಗೆ ಪ್ರತಿ ಸೆಕೆಂಡು ಕೂಡ ಮಹತ್ವವಾದದ್ದು. ಯಾವಾಗಲೂ ನಿಮ್ಮ ಮೊಬೈಲಿನಲ್ಲಿ ತುರ್ತು ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸಿಡಿ. ನಿಮ್ಮಲ್ಲಿ ವಾಹನವಿದ್ದರೆ ಅದರಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ವಸ್ತುಗಳಿರಲಿ. ಇದು ಇತರರಿಗೆ ತಕ್ಷಣ ನೆರವು ನೀಡಲು ನೆರವಾಗುತ್ತದೆ. ಕೆಲವೊಮ್ಮೆ ನಿಮಗೂ ಇದರ ಅಗತ್ಯ ಬಂದರೂ ಬರಬಹುದು.
ಒಮ್ಮೆ ಕಲ್ಪಿಸಿಕೊಳ್ಳಿ. ರಸ್ತೆಯ ಬದಿಯಲ್ಲಿ ನಿಮಗೆ ತುಂಬಾ ಬೇಕಾದವರೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ನೀವು ಅವರನ್ನು ಅಲ್ಲೇ ಬಿಟ್ಟುಬಿಡುತ್ತೀರಾ? ಇಲ್ಲ ತಾನೇ. ಹೀಗಾಗಿ ರಸ್ತೆಯಲ್ಲಿ ಅಪಘಾತಗಳು ನಡೆದಾಗ ಕಣ್ ಮುಚ್ಚಿಕೊಂಡು ಮುಂದೆ ಹೋಗಬೇಡಿ. ಗಾಯಗೊಂಡವರಿಗೆ ನೆರವು ನೀಡಿ.


Click it and Unblock the Notifications









