10 ವರ್ಷಕ್ಕಿಂತ ಹಳೆಯ ವಾಹನ ಮಾಲೀಕರಿಗೆ ಶಾಕ್: ಇಂಧನ ಹಾಕಲ್ಲ, ಸಿಕ್ಕಿಬಿದ್ದರೆ ಮುಟ್ಟುಗೋಲು!
ದೇಶ ರಾಜಧಾನಿ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಹಳೆಯ ವಾಹನಗಳನ್ನು ಓಡಿಸುತ್ತಿರುವ ಮಾಲೀಕರಿಗೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಶಾಕ್ ನೀಡಿದೆ. ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಜುಲೈ 1 ರಿಂದ ಹೊಸ ನಿಯಮ ಜಾರಿಗೊಳಿಸುತ್ತಿದ್ದು, 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ದೆಹಲಿಯ ಯಾವುದೇ ಇಂಧನ ಕೇಂದ್ರದಲ್ಲಿ ಇಂಧನ ತುಂಬಲು ಅನುಮತಿಸಲಾಗುವುದಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಸ್ಪಷ್ಟಪಡಿಸಿದೆ.
ಜುಲೈ 1 ರಿಂದ ಎಂಡ್-ಆಫ್-ಲೈಫ್ (ಇಒಎಲ್) ವಾಹನಗಳಿಗೆ ಇಂಧನ ಮಾರಾಟವನ್ನು ನಿಲ್ಲಿಸುವಂತೆ ಸಿಎಕ್ಯೂಎಂ ಈ ಹಿಂದೆ ಇಂಧನ ಕೇಂದ್ರಗಳಿಗೆ ಸೂಚನೆ ನೀಡಿತ್ತು. ಈ ನಿಯಮಗಳನ್ನು ತಪ್ಪಿಸಲು ಜನರು ಆಗಾಗ್ಗೆ ತಮ್ಮ ವಾಹನಗಳನ್ನು ದೆಹಲಿಯ ಹೊರಗೆ ನೋಂದಾಯಿಸುತ್ತಿದ್ದಾರೆ, ಆದರೆ ಈಗ ಈ ನಿಯಮಗಳು ದೆಹಲಿಯಲ್ಲಿ ನೋಂದಾಯಿಸಲಾದ ವಾಹನಗಳಿಗೆ ಮಾತ್ರವಲ್ಲ, ಎಲ್ಲಾ ಇಒಎಲ್ ವಾಹನಗಳಿಗೆ ಅನ್ವಯಿಸುತ್ತವೆ ಎಂದು ಸಿಎಕ್ಯೂಎಂನ ತಾಂತ್ರಿಕ ಸದಸ್ಯ ವೀರೇಂದ್ರ ಶರ್ಮಾ ಹೇಳಿದ್ದಾರೆ.

ಹಳೆಯ ವಾಹನ ಸಿಕ್ಕಿಬಿದ್ದರೆ ಗುಜರಿ ಸೌಲಭ್ಯ (ಆರ್ವಿಎಸ್ಎಫ್) ನಿಯಮಗಳ ಅಡಿಯಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ಸ್ಕ್ರ್ಯಾಪಿಂಗ್ಗೆ ಕಳುಹಿಸಬಹುದು. ಈ ವಾಹನಗಳನ್ನು ಪತ್ತೆಹಚ್ಚಲು ದೆಹಲಿಯ 520 ಇಂಧನ ಕೇಂದ್ರಗಳ ಪೈಕಿ 500 ನಿಲ್ದಾಣಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ ಪಿಆರ್) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಉಳಿದವು ಜೂನ್ 30 ರೊಳಗೆ ಸಿದ್ಧವಾಗುತ್ತವೆ. ಈ ಕ್ಯಾಮೆರಾಗಳು ವಾಹನ್ ಡೇಟಾಬೇಸ್ ಮೂಲಕ ವಾಹನಗಳು ಎಷ್ಟು ಹಳೆಯದಾಗಿವೆ ಎಂಬುದನ್ನು ಪರೀಕ್ಷಿಸಲು ವಾಹನದ ನಂಬರ್ ಪ್ಲೇಟ್ ಗಳನ್ನು ಸ್ಕ್ಯಾನ್ ಮಾಡುತ್ತವೆ. ಅಂತಹ ವಾಹನಗಳಿಗೆ ಇಂಧನವನ್ನು ನಿರಾಕರಿಸಲು ಇಂಧನ ಕೇಂದ್ರಗಳಿಗೆ ಸೂಚಿಸಲಾಗಿದೆ. ಇದನ್ನು ನಿರ್ಲಕ್ಷಿಸುವ ಯಾವುದೇ ಇಂಧನ ಕೇಂದ್ರವಾಗಿರಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇಂಧನ ಕೇಂದ್ರಗಳಲ್ಲಿನ ಕ್ಯಾಮೆರಾಗಳಲ್ಲಿ ಪತ್ತೆಯಾಗುವ ವಾಹನಗಳ ನಂಬರ್ ಪ್ಲೇಟ್ ಗಳನ್ನು ಸ್ಕ್ಯಾನ್ ಮಾಡಿದ ಬಳಿಕ ವಾಹನವು ತುಂಬಾ ಹಳೆಯದಾಗಿದೆ ಎಂದು ಗೊತ್ತಾದರೆ ಕೂಡಲೇ ನಿಯಂತ್ರಣ ಕೊಠಡಿ ಮತ್ತು ಜಾರಿ ತಂಡಗಳಿಗೆ ಎಚ್ಚರಿಕೆಯನ್ನು ಕಳುಹಿಸಲಾಗುತ್ತದೆ. ಬಳಿಕ ವಾಹನವನ್ನು ಮುಟ್ಟುಗೋಲು ಅಥವಾ ಸ್ಕ್ರ್ಯಾಪಿಂಗ್ಗೆ ಕಳುಹಿಸಲಾಗುತ್ತದೆ.
ಸಂಚಾರ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳನ್ನು ಒಳಗೊಂಡ 100 ತಂಡಗಳನ್ನು ನಿಯೋಜಿಸಲಾಗಿದೆ. ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಅವರು ರಸ್ತೆ ಕಣ್ಗಾವಲು ಮತ್ತು ಸ್ಮಾರ್ಟ್ ಸಂಚಾರ ವ್ಯವಸ್ಥೆಯನ್ನು ಬಳಸುತ್ತಾರೆ. ಸದ್ಯ ದೆಹಲಿಯಲ್ಲಿ 41 ಲಕ್ಷ ದ್ವಿಚಕ್ರ ವಾಹನಗಳು ಸೇರಿದಂತೆ ಸುಮಾರು 62 ಲಕ್ಷ ಹಳೆಯ ವಾಹನಗಳಿವೆ. ಈ ಹಳೆಯ ವಾಹನಗಳು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ ಎಂದು ವರದಿ ಹೇಳುತ್ತಿದೆ.

ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಹಿಂದಿನ ಆದೇಶಗಳ ಹೊರತಾಗಿಯೂ, ಹಳೆಯ ವಾಹನಗಳನ್ನು ತೆಗೆದುಹಾಕುವುದು ತುಂಬಾ ನಿಧಾನವಾಗಿದೆ. ಹಾಗಾಗಿ ಸದ್ಯ ಈ ಕಟ್ಟುನಿಟ್ಟಾದ ನಿಯಮವು ವಯಸ್ಸಾದ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯದ ವಿರುದ್ಧ ಹೋರಾಡಲು ದೆಹಲಿಯಲ್ಲಿ ತೆಗೆದುಕೊಂಡ ಅತಿದೊಡ್ಡ ಕ್ರಮಗಳಲ್ಲಿ ಒಂದಾಗಿದೆ.
ದೆಹಲಿ ಮಾತ್ರವಲ್ಲ ನವೆಂಬರ್ 1 ರಿಂದ, ಗೌತಮ್ ಬುದ್ಧ ನಗರ, ಸೋನಿಪತ್, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಎಂಬ ಐದು ಹೆಚ್ಚಿನ ದಟ್ಟಣೆಯ ಎನ್ಸಿಆರ್ ನಗರಗಳಲ್ಲಿ ಇದೇ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಈ ನಗರಗಳಲ್ಲಿನ ಎಲ್ಲಾ ಇಂಧನ ಕೇಂದ್ರಗಳು ಅಕ್ಟೋಬರ್ 31 ರೊಳಗೆ ಎಎನ್ ಪಿಆರ್ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಹೇಳಲಾಗಿದೆ.


Click it and Unblock the Notifications








