ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್
ಚೆನ್ನೈನಲ್ಲಿ ನಡೆಯಬೇಕಿದ್ದ 2021 ರ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ನ ಚೆನ್ನೈ ಸುತ್ತನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಪ್ರಕಟಿಸಿದೆ.

ಈ ರ್ಯಾಲಿ ಸುತ್ತನ್ನು ಮುಂದೂಡಲು ಕರೋನಾ ವೈರಸ್ ಕಾರಣವಲ್ಲ. ಬದಲಿಗೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದು ಕಾರಣವಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ.

ಈ ಹಠಾತ್ ಮಳೆಯು 2021 ರ ಭಾರತೀಯ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಶಿಪ್ನ ಚೆನ್ನೈ ಸುತ್ತಿನ ರದ್ದತಿಗೆ ಕಾರಣವಾಗಿದೆ. ರ್ಯಾಲಿ ನಡೆಯುವ ಸ್ಥಳವು ಮಳೆಯಿಂದ ಸ್ವಲ್ಪ ಪ್ರಮಾಣದಲ್ಲಿ ಹಾನಿಗೊಳಗಾಗಿದೆ.

ಈ ಸ್ಥಳಗಳು ಮಳೆ ಹಾಗೂ ತೇವಾಂಶದಿಂದ ಆವೃತ್ತವಾಗಿವೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ನಡೆಯಬೇಕಿದ್ದ ಸುತ್ತನ್ನು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ತಾತ್ಕಾಲಿಕವಾಗಿ ಮುಂದೂಡಿದೆ.

ಈ ಸುತ್ತು ಜುಲೈ 31 ಹಾಗೂ ಆಗಸ್ಟ್ 1 ರಂದು ನಡೆಯುವ ನಿರೀಕ್ಷೆಗಳಿವೆ. ಆದರೆ ಅಧಿಕೃತವಾಗಿ ಇನ್ನೂ ಯಾವುದೇ ದಿನಾಂಕವನ್ನು ಘೋಷಿಸಿಲ್ಲ. ರ್ಯಾಲಿಯನ್ನು ಹೀಗೆ ಅನಿರ್ದಿಷ್ಟಾವಧಿಗೆ ಮುಂದೂಡುತ್ತಿರುವುದು ಇದೇ ಮೊದಲ ಬಾರಿಯಲ್ಲ.

ಕರೋನಾ ವೈರಸ್ನ ಎರಡನೇ ಅಲೆಯ ಆರ್ಭಟದ ಹಿನ್ನೆಲೆಯಲ್ಲಿ ಈ ರ್ಯಾಲಿಯನ್ನು ಮುಂದೂಡಲಾಗಿತ್ತು. ಈಗ ಮಳೆಯ ಕಾರಣಕ್ಕೆ ಈ ರ್ಯಾಲಿಯನ್ನು ಮತ್ತೆ ಮುಂದೂಡಲಾಗಿದೆ.

ಈ ರ್ಯಾಲಿಯ ಮೊದಲ ಪಂದ್ಯವನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಿಗದಿಪಡಿಸಲಾಗಿತ್ತು. ಆ ಸಮಯದಲ್ಲಿ ಕರೋನಾ ವೈರಸ್ ಎರಡನೇ ಅಲೆ ಹೆಚ್ಚು ಹಾನಿಯನ್ನುಂಟು ಮಾಡಿದ ಕಾರಣ ಈ ರ್ಯಾಲಿಯನ್ನು ಮುಂದೂಡಲಾಗಿತ್ತು.

ಈ ರ್ಯಾಲಿ ಸಂಯೋಜಕರು ಹಾಗೂ ಭಾರತದ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಗಳ ಒಕ್ಕೂಟವು ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಗಳಿವೆ. ಈಗಮುಂದೂಡಲ್ಪಟ್ಟಿರುವ ರ್ಯಾಲಿ ಒಟ್ಟು ಆರು ಹಂತಗಳಲ್ಲಿ ನಡೆಯಲಿದೆ.

ಚೆನ್ನೈ ಮಾತ್ರವಲ್ಲದೆ, ಬೆಂಗಳೂರು, ಕೊಯಮತ್ತೂರು, ದೆಹಲಿ-ಎನ್ಸಿಆರ್, ಹಂಪಿ ಹಾಗೂ ನಾಗಾಲ್ಯಾಂಡ್ನಲ್ಲಿ ಈ ರ್ಯಾಲಿಯನ್ನು ನಡೆಸಲು ರೇಸ್ ಸಂಘಟಕರು ಚಿಂತನೆ ನಡೆಸುತ್ತಿದ್ದಾರೆ.


Click it and Unblock the Notifications