BMW ಕಾರಿನಲ್ಲಿ 23 ವರ್ಷದ ಯುವಕ ಹಿಟ್ ಅಂಡ್ ರನ್: ಪರಾರಿಗೆ ಯತ್ನಿಸಿ ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ
ಮುಂಬೈನಲ್ಲಿ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಶಂಕಿತ 23 ವರ್ಷದ ಕೀತ್ ಸಲೋಮ್ ಮೆನೆಜಸ್ ಎಂಬ ಯುವಕನನ್ನು ಮುಂಬೈ ಪೊಲೀಸರು ಶನಿವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಏರ್ಪೋರ್ಟ್ನಿಂದ ಕೀತ್ ದುಬೈಗೆ ಪಲಾಯನ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆಗಸ್ಟ್ 29 ರ ಮುಂಜಾನೆ ಮುಂಬೈನ ಥಾಣೆಯ ನಿವಾಸಿ ಹ್ಯಾರಿ ಬಾಸ್ಟಿಯನ್ ಎಂಬಾತ ಕಾಂದಿವ್ಲಿಯ ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯ ಫ್ಲೈಓವರ್ ಮೇಲೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ BMW ಕಾರು ಆತನಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಹ್ಯಾರಿ ಸೇತುವೆಯಿಂದ ಹಾರಿ ಕೆಳಗಿನ ರಸ್ತೆಯಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ.

ಅದೇ ದಿನ ಅಪರಿಚಿತ ವ್ಯಕ್ತಿಯೊಬ್ಬ ಬಿಎಂಡಬ್ಲ್ಯು ಕಾರನ್ನು ಅದರ ಹಾನಿಗೊಳಗಾದ ಫೆಂಡರ್ ಅನ್ನು ಸರಿಪಡಿಸಲು ಅಂಧೇರಿಯ ಗ್ಯಾರೇಜ್ಗೆ ಬಂದು ಸಣ್ಣ ಪುಟ್ಟ ಡೆಂಟ್ಗಳನ್ನು ಸರಿಪಡಿಸಿಕೊಂಡಿದ್ದ. ಇದಾದ ಬಳಿಕ ಸಿಸಿಟಿವಿ ಆಧಾರದ ಮೇಲೆ BMW ಕಾರಿನ ಮುಂಭಾಗದ ಎಡಭಾಗದಲ್ಲಿ ಹಾನಿಗೊಳಗಾದ ಚಿತ್ರಗಳನ್ನು ಮಧ್ಯಾಹ್ನ ಪ್ರಕಟಿಸಿದ ನಂತರ ಆರೋಪಿ ಕೀತ್ ಸಲೋಮ್ ಮೆನೆಜಸ್ ತನ್ನ ಮನೆಗೆ ಹಿಂತಿರುಗಿರಲಿಲ್ಲ.

ಅಪಘಾತದ ನಂತರ ಕೀತ್ ಸ್ಥಳವನ್ನು ತೊರೆದು ಅವರ ಕಾರನ್ನು ಉನ್ನತ ಮಟ್ಟದ ಗ್ಯಾರೇಜ್ನಲ್ಲಿ ಬಿಟ್ಟಿದ್ದಾನೆ. ಸಿಸಿಟಿವಿ ಫೂಟೇಜ್ನಲ್ಲಿ ವಾಹನದ ನಂಬರ್ ಪ್ಲೇಟ್ ಸರಿಯಾಗಿ ಕಾಣದ ಕಾರಣ ಪೊಲೀಸರಿಗೆ ಬಿಎಂಡಬ್ಲ್ಯು ಅನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ಗ್ಯಾರೇಜ್ನ ಮಾಲೀಕರು ವಿಷಯ ತಿಳಿದು, ರಿಪೇರಿಗಾಗಿ ತಮ್ಮ ಗ್ಯಾರೇಜ್ನಲ್ಲಿ ನಿಲ್ಲಿಸಿದ ಕಾರು ಅದೇ ಆಗಿರಬಹುದೇ ಎಂದು ಅನುಮಾನಿಸಿದ್ದಾರೆ.

ಈ ಬಗ್ಗೆ ಗ್ಯಾರೇಜ್ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಏಕೆಂದರೆ ಇದು ಬಿಎಂಡಬ್ಲ್ಯು ಅಲ್ಲ ಸ್ಕೋಡಾ ಕಾರು ಎಂದು ಪೊಲೀಸರು ಭಾವಿಸಿದ್ದರು. ಆದರೆ, 32 ವರ್ಷದ ಹ್ಯಾರಿ ಬಾಸ್ಟಿಯನ್ ಎಂಬಾತನನ್ನು ಆಸ್ಪತ್ರೆಗೆ ಕರೆದೊಯ್ದ ಪ್ರತ್ಯಕ್ಷದರ್ಶಿಗಳು ವಾಹನವನ್ನು ನೋಡಿ ಅದು ಬಿಎಂಡಬ್ಲ್ಯು ಎಂದು ಖಚಿತಪಡಿಸಿದ್ದಾರೆ.

ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಬಂಧನ
ಮುಂಬೈ ಪೊಲೀಸ್ ಜಂಟಿ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ವಿಶ್ವಾಸ್ ನಂಗ್ರೆ-ಪಾಟೀಲ್ ಮಧ್ಯಾಹ್ನದ ವೇಳೆಗೆ, ಕೀತ್ ಮೆನೆಜಸ್ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ. ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮುಂಬೈ ಪೊಲೀಸರ ಒಂದು ತಂಡವನ್ನು ಹೈದರಾಬಾದ್ಗೆ ಕಳುಹಿಸಲಾಯಿತು.

ಕೀತ್ ಮೆನೆಜಸ್ ದುಬೈಗೆ ವಿಮಾನ ಹತ್ತಲು ಹೊರಟಿದ್ದ. ಆದರೆ ಶನಿವಾರ 4:30ಕ್ಕೆ ಆರೋಪಿಯನ್ನು ಬಂಧಿಸಲಾಯಿತು. ಬಳಿಕ ಮೆನೇಜಸ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಆದರೆ ಜಾಮೀನು ನೀಡಬಹುದಾದ ಅಪರಾಧವಾಗಿರುವುದರಿಂದ ಆತನನ್ನು ಬಿಡಲಾಯಿತು. ವೇಗದ ಚಾಲನೆಗಾಗಿ ಕಾರಿನ ವಿರುದ್ಧ ಹಲವು ಚಲನ್ಗಳು ಬಾಕಿ ಉಳಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿಹೆಚ್ಚು ಅಪಘಾತ ನಡೆಯುವ ದೇಶಗಳಲ್ಲಿ ಭಾರತವೂ ಒಂದು
ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಪ್ರಾಣ ನಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಅಪಘಾತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

2020ರಲ್ಲಿ ದೇಶದಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಗೆ ಸಂಬಂಧಿಸಿದಂತೆ 1,58,964 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಟ್ಟು 56,873 ಜನರು ಸಾವನ್ನಪ್ಪಿದ್ದಾರೆ. 2019 ರಲ್ಲಿ ಒಟ್ಟು ಅಪಘಾತಗಳ ಸಂಖ್ಯೆ 1,67,184 ದಾಖಲಾಗಿದ್ದು, ಇದರಲ್ಲಿ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಒಟ್ಟು 56,136 ಜನರು ಜೀವ ಕಳೆದುಕೊಂಡಿದ್ದಾರೆ.

ಈ ಅಪಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆ ಮುಖ್ಯ ಕಾರಣವಾಗಿದೆ. ಜೊತೆಗೆ ರಾಂಗ್ ಸೈಡ್ ಡ್ರೈವಿಂಗ್, ಅತಿವೇಗ, ಸಿಗ್ನಲ್ ಜಂಪ್, ಅಪ್ರಾಪ್ತ ವಯಸ್ಸಿನವರ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿರುವುದಾಗಿ ಸಾರಿಗೆ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 1.50 ಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇತರ ಯಾವುದೇ ದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕವಾಗಿದೆ. ಭಾರತದಲ್ಲಿ ಅಂಗವೈಕಲ್ಯಕ್ಕೆ ರಸ್ತೆ ಅಪಘಾತಗಳು ಮುಖ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಮತ್ತು ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾನೆ. ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿವೆ. ಅಂಕಿಅಂಶಗಳ ಪ್ರಕಾರ ದ್ವಿಚಕ್ರ ವಾಹನ ಚಾಲಕರೇ ರಸ್ತೆ ಅಪಘಾತಗಳಲ್ಲಿ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ.


Click it and Unblock the Notifications