ಸೈಕ್ಲಿಸ್ಟ್ಗೆ ಡಿಕ್ಕಿ, ತಡೆಯಲು ಬಂದ ಕಾನಿಸ್ಟೇಬಲ್ನನ್ನು ಬಾನೆಟ್ ಮೇಲೆ 2 ಕಿ.ಮೀ ಎಳೆದೊಯ್ದ ಯುವಕ
ಸೈಕ್ಲಿಸ್ಟ್ ಮತ್ತು ಟ್ರಾಫಿಕ್ ಕಾನಿಸ್ಟೆಬಲ್ಗೆ ಡಿಕ್ಕಿ ಹೊಡೆದ ಆರೋಪದ ಮೇಲೆ ಕಾರು ಚಾಲನೆ ಮಾಡುತ್ತಿದ್ದ 17 ವರ್ಷದ ಯುವಕನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಗಾಜಿಯಾಬಾದ್ನ ಸಿಹಾನಿ ಗೇಟ್ ಎಂಬಲ್ಲಿ ಸ್ನೇಹಿತರೊಂದಿಗೆ ಕಾರನ್ನು ಚಲಾಯಿಸುತ್ತಿದ್ದಾಗ ಮಂಗಳವಾರ ಈ ಘಟನೆ ನಡೆದಿದೆ.

ಜುಲೈ 12ರ ಸಂಜೆ ಕಾರು ಚಾಲಕನೊಬ್ಬ ಸೈಕ್ಲಿಸ್ಟ್ಗೆ ಡಿಕ್ಕಿ ಹೊಡೆದಿದ್ದಾನೆ. ಆತನನ್ನು ತಡೆಯಲು ಯತ್ನಿಸಿದಾಗ ಟ್ರಾಫಿಕ್ ಕಾನ್ಸ್ಟೆಬಲ್ಗೂ ಡಿಕ್ಕಿ ಹೊಡೆದಿದ್ದಾನೆ. ಘಟನೆಯನ್ನು ನೋಡಿದ ಕೆಲವರು ಕಾರನ್ನು ನಿಲ್ಲಿಸಿ ಕಾರಿನ ಚಾಲಕನನ್ನು ಹಿಡಿದಿದ್ದಾರೆ ಎಂದು ಸುದ್ದಿಸಂಸ್ಥೆ ANI ಉಲ್ಲೇಖಿಸಿದೆ.

ಸ್ಥಳೀಯ ಸರ್ಕಲ್ ಇನ್ಸ್ಪೆಕ್ಟರ್ ಅಲೋಕ್ ದುಬೆ ಈ ಬಗ್ಗೆ ವಿವರಿಸಿ, ಆರೋಪಿ ಯುವಕ ಹಾಗೂ ಆತನ ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರು ಗಾಜಿಯಾಬಾದ್ನ ಸಿಹಾನಿ ಗೇಟ್ ಎಂಬಲ್ಲಿ ಸೈಕಲ್ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಮೊದಲು ಡಿಕ್ಕಿ ಹೊಡೆದಿದ್ದಾರೆ. ಇದನ್ನು ಕಂಡ ಟ್ರಾಫಿಕ್ ಕಾನಿಸ್ಟೇಬಲ್ ಎಚ್ಚೆತ್ತು ಕಾರನ್ನು ತಡೆಯಲು ಹೋಗಿದ್ದಾರೆ.

ಈ ವೇಳೆ ಕಾರನ್ನು ನಿಲ್ಲಿಸದೇ ಕಾನಿಸ್ಟೇಬಲ್ಗೂ ಡಿಕ್ಕಿ ಹೊಡೆದ್ದಾನೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಕಾನಿಸ್ಟೇಬಲ್ ಕಾರಿನ ಬಾನೆಟ್ ಮೇಲೆ ಅಪ್ಪಳಿಸಿದ್ದು, ಹಾಗೇಯೇ ಎರಡು ಕಿಲೋಮೀಟರ್ಗಳವರೆಗೆ ಎಳೆದೊಯ್ಯಲಾಗಿದೆ. ಈ ಎಲ್ಲಾ ದೃಷ್ಯಗಳು ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇನ್ನು ಟ್ರಾಫಿಕ್ ಪೊಲೀಸ್ ಕಾರಿನ ಬಾನೆಟ್ ಮೇಲಿದ್ದಿದ್ದನ್ನು ಕಂಡ ಸಾರ್ವಜನಿಕರು ಕಾರನ್ನು ಹಿಂಬಾಲಿಸಿದ್ದಾರೆ. ಸುಮಾರು ಎರಡು ಕಿ.ಮೀವರೆಗೆ ಯಾರಿಗೂ ಸಿಕ್ಕದೇ ಕಾರನ್ನು ವೇಗವಾಗಿ ಓಡಿಸಿಕೊಂಡು ಹೋದ ಯುವಕ ಯಶೋಧಾ ಆಸ್ಪತ್ರೆ ಬಳಿಗೆ ಹೋಗುವಷ್ಟರಲ್ಲಿ ಸಾರ್ವಜನಿಕರು ಸುತ್ತುವರೆದು ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಬಾಲಕನ ಇಬ್ಬರು ಸ್ನೇಹಿತರು ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಅದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಖಾಸಗಿ ಶಾಲೆಯೊಂದರ 11ನೇ ತರಗತಿಯ ವಿದ್ಯಾರ್ಥಿಯಾಗಿರುವ 17 ವರ್ಷದ ಯುವಕನನ್ನು ಸದ್ಯ ಬಂಧಿಸಲಾಗಿದೆ. ಘಟನೆಯ ಸಮಯದಲ್ಲಿ ಕಾರಿನಲ್ಲಿದ್ದ ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿ ದುಬೆ ಹೇಳಿದ್ದಾರೆ.

ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269 (ಅತಿವೇಗದ ಚಾಲನೆ), 353 (ಸಾರ್ವಜನಿಕ ಸೇವಕನ ಕರ್ತವ್ಯದಿಂದ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ), 307 (ಕೊಲೆ ಯತ್ನ) ಮತ್ತು 427 (ಹಾನಿ ಉಂಟುಮಾಡುವ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಿಯುಸಿ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಕಠಿಣ ಕ್ರಮ
ಕರ್ನಾಟಕದಲ್ಲಿ ಪ್ರಿ-ಯೂನಿವರ್ಸಿಟಿ (ಪಿಯುಸಿ) ವಿದ್ಯಾರ್ಥಿಗಳು ಕಾಲೇಜುಗಳಿಗೆ ಮೋಟಾರು ವಾಹನಗಳನ್ನು ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ, ನಿಯಮ ಉಲ್ಲಂಘಿಸುವ ತಪ್ಪಿತಸ್ಥ ವಿದ್ಯಾರ್ಥಿಗಳ ಪೋಷಕರು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಕಮಿಷನರ್ ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಹೆಲ್ಮೆಟ್ ಧರಿಸಿ ಕಾನೂನು ನಿಯಮಗಳನ್ನು ಪಾಲಸಿ ಸಂಚರಿಸುತ್ತಿದ್ದರು ಪೊಲೀಸರು ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಅಲ್ಲದೇ ಕೆಲವೆಡೆ ಇತರ ರಾಜ್ಯಗಳಿಂದ ಬರುವ ವಾಹನಗಳನ್ನು ತಡೆದು ಪೊಲೀಸರು ಇಲ್ಲಸಲ್ಲದ ಕಾರಣ ಹೇಳಿ ಹಣ ಸುಳಿಗೆ ಮಾಡುತ್ತಿದ್ದರು. ಈ ಸಂಬಂಧ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಲವು ದೂರುಗಳು ಕೇಳಿಬಂದಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರು, ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವುದನ್ನು ಕಂಡಾಗ ಮಾತ್ರ ಅಂತಹವರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಬೇಕು, ನಿಯಮ ಪಾಲನೆ ಮಾಡುವವರನ್ನು ಸುಖಾಸುಮ್ಮನೆ ನಿಲ್ಲಿಸಬಾರದು ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು.

ಹಾಗಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಕಾನೂನು ನಿಯಮಗಳನ್ನು ಪಾಲನೆ ಮಾಡಿದರೂ ಅವರು ವಾಹನಗಳನ್ನು ಓಡಿಸುವಂತಿಲ್ಲ. ಒಂದು ವೇಳೆ ನಿಯಮಗಳನ್ನು ಪಾಲಿಸಿ ವಾಹನಗಳನ್ನು ಚಾಲನೆ ಮಾಡಿದರೆ ಅಂತವರನ್ನು ನಿಲ್ಲಿಸದಂತೆ ಸೂಚನೆ ರವಾನಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳನ್ನು ಕಂಡುಕೊಳ್ಳುವುದು ಕಷ್ಟವಾಗುತ್ತದೆ.

ಈ ನಿಟ್ಟಿನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೋಟಾರು ವಾಹನಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳನ್ನು ಸೈಕಲ್, ಬಸ್ ಅಥವಾ ಆಟೋದಂತಹ ಇತರ ಸಾರಿಗೆ ವಿಧಾನಗಳನ್ನು ಬಳಸಲು ಪ್ರೋತ್ಸಾಹಿಸಲು ನಾವು ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ವಿದ್ಯಾರ್ಥಿ ತಪ್ಪೆಸಗಿರುವುದು ಗೊತ್ತಾದರೆ ವಾಹನ ಜಪ್ತಿ ಮಾಡಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಪರಾಧದ ಆಧಾರದ ಮೇಲೆ ಅವರಿಗೆ ದಂಡ ಮತ್ತು ಚಾರ್ಜ್ಶೀಟ್ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಸ್ಕೂಲ್ ಮಕ್ಕಳು ಸಹ ಬೈಕ್, ಸ್ಕೂಟರ್ಗಳಲ್ಲಿ ಶಾಲಾ-ಕಾಲೇಜಿಗೆ ತೆರಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಸಮಾನ್ಯವಾಗಿಬಿಟ್ಟಿದೆ. ಹಲವು ಬಾರಿ ಪೋಷಕರ ಗಮನಕ್ಕೆ ತಂದು ದಂಡ ವಿಧಿಸಿದರೂ ಇಂತಹ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ದೇಶಾದ್ಯಂತ ಕೂಡ ಕಠಿಣ ಕ್ರಮಗಳು ಜಾರಿಗೆ ಬಂದರೆ ಇಂತಹ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬಹುದು.


Click it and Unblock the Notifications