ಮತ್ತೆ ರಿಕ್ಷಾ, ಮೆಟ್ರೋ ರೈಲು, ವ್ಯಾಗನಾರ್ನಲ್ಲಿ ಓಡಾಡುವರೇ 'ಕ್ರೇಜಿ'ವಾಲ್ ?
ರಾಷ್ಟ್ರ ರಾಜಧಾನಿಯ ರಾಜಕೀಯ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸಿರುವ 'ಆಮ್ ಆದ್ಮಿ ಪಕ್ಷ'ದ ನಾಯಕ ಅರವಿಂದ್ ಕೇಜ್ರಿವಾಲ್, ಮಗದೊಮ್ಮೆ ನವದೆಹಲಿಯಲ್ಲಿ ನೂತನ ಸರಕಾರ ರಚಿಸಲು ಹೊರಟಿದ್ದಾರೆ. ಭ್ರಷ್ಟಾಚಾರದಿಂದ ಕೂಡಿದ ರಾಜಕಾರಣಿಗಳಿಗೊಂದು ಪಾಠ ಕಲಿಸಿಯೇ ಸಿದ್ಧ ಎಂದು ಪಣತೊಟ್ಟಿರುವ ಅರವಿಂದ್, ಎಲ್ಲ ಅರ್ಥದಲ್ಲೂ ಜನ ಸಾಮಾನ್ಯರ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಬಾಹ್ಯ ಬೆಂಬಲದಲ್ಲಿ ಸರಕಾರ ರಚಿಸಿದ್ದ ಕೇಜ್ರಿವಾಲ್ ಸಾಮಾನ್ಯ ಜನರಂತೆ ಆಟೋ ರಿಕ್ಷಾ ಹಾಗೂ ಮೆಟ್ರೋ ರೈಲಿನಲ್ಲಿ ಕಚೇರಿಗೆ ತೆರಳಿರುವುದು ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಬರ ಬರುತ್ತಾ ರಾಯರ ಕುದುರೆ ಕತ್ತೆಯಾಯ್ತು ಎಂಬ ಗಾದೆ ಮಾತಿನಂತೆ ಕೇಜ್ರಿವಾಲ್ ವಿಲಾಸಿ ಜೀವನಕ್ಕೆ ಮೊರೆ ಹೋಗಿರುವುದು ಅನುಯಾಯಿಗಳಲ್ಲಿ ಭಾರಿ ಅಸಂತೃಪ್ತಿಗೆ ಕಾರಣಾಗಿತ್ತು. ಆದರೆ ಇವೆಲ್ಲವನ್ನು ಮೆಟ್ಟಿ ನಿತ್ತಿರುವ ಕೇಜ್ರಿವಾಲ್ ದೆಹಲಿಯಲ್ಲಿ ಮಗದೊಮ್ಮೆ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಮುಂದೆಯೂ ತಮ್ಮ ಜನ ಸಾಮಾನ್ಯರ ವ್ಯಾಗನಾರ್ ಕಾರಿನಲ್ಲಿ ಓಡಾಡುವರೇ ಎಂಬುದು ಭಾರಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇವೆಲ್ಲಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

ಸಹಜವಾಗಿಯೇ ಮುಖ್ಯಮಂತ್ರಿ ಗದ್ದುಗೇರಿದವರಿಗೆ ಸಕಲ ರೀತಿಯ ಸರ್ಕಾರಿ ಸೌಲಭ್ಯಗಳು ದೊರಕುತ್ತವೆ. ಆದರೆ ಕಳೆದ ಬಾರಿ ಸರ್ಕಾರಿ ಬಂಗಲೆ ಸಹಿತ ಎಲ್ಲ ಅಧಿಕೃತ ಸೌಲಭ್ಯಗಳನ್ನು ನಿರಾಕರಿಸಿರುವ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ 'ವಿಐಪಿ' ಸಾಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದರು.

ಹಿಂದೆಲ್ಲ ಸಿಎಂ ವಾಹನಗಳಿಗೆ ಸಾಲು ಸಾಲು ಬೆಂಗಾವಲು ಪಡೆ ರಕ್ಷಣಾವೊದಗಿಸುವುದಲ್ಲದೆ ಇದಕ್ಕಾಗಿ ಕೋಟಿ ಗಟ್ಟಲೆ ರುಪಾಯಿಗಳನ್ನು ವ್ಯಯ ಮಾಡಲಾಗುತ್ತಿತ್ತು. ಆದರೆ ತನಗೆ ಯಾವುದೇ ಬೆಂಗಾವಲು ಪಡೆ ಅಥವಾ ಸರ್ಕಾರಿ ವಾಹನಗಳ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಉಚ್ಛರಿಸಿರುವ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಆದರ್ಶವನ್ನು 'ಮನಸಾ ವಾಚ ಕರ್ಮಣಾ' ಪಾಲಿಸಿದ್ದರು.

ಅಷ್ಟಕ್ಕೂ ಸಾಮಾನ್ಯರಲ್ಲಿ ಶ್ರೀ ಸಾಮಾನ್ಯರು ಮಾತ್ರ ಓಡಿಸುತ್ತಿರುವ ಮಾರುತಿ ಸುಜುಕಿಯ ನೆಚ್ಚಿನ ವ್ಯಾಗನಾರ್ ಹ್ಯಾಚ್ಬ್ಯಾಕ್ ಕಾರನ್ನು ಕೇಜ್ರಿವಾಲ್ ಹೊಂದಿದ್ದಾರೆ.

ನಿರ್ವಹಣೆ, ವಿನ್ಯಾಸ, ಚಾಲನಾ ಅನುಭವ, ಇಂಧನ ಕ್ಷಮತೆ ಮತ್ತು ಸ್ಥಳಾವಕಾಶದಲ್ಲಿ ಶ್ರೇಷ್ಠತೆಯನ್ನು ಹೊಂದಿರುವ ವ್ಯಾಗನಾರ್ ಬೆಂಗಳೂರು ಎಕ್ಸ್ ಶೋ ರೂಂ ದರ 3.67 ಲಕ್ಷ ರು.ಗಳಿಂದ 4.49 ಲಕ್ಷ ರು.ಗಳ ವರೆಗಿದೆ. ಅಲ್ಲದೆ ನಿರ್ವಹಣಾ ವೆಚ್ಚ ಕೂಡಾ ಕಡಿಮೆಯಾಗಿದೆ.

ಪೆಟ್ರೋಲ್ ಹಾಗೂ ಸಿಎನ್ಜಿ ವೆರಿಯಂಟ್ಗಳಲ್ಲಿರುವ 998ಸಿಸಿ ವ್ಯಾಗನಾರ್ ಲಭ್ಯವಿದ್ದು, ಈ ಪೈಕಿ ಪೆಟ್ರೋಲ್ ಮ್ಯಾನುವಲ್ ಪ್ರತಿ ಲೀಟರ್ಗೆ 20.5 ಹಾಗೂ ಸಿಎನ್ಜಿ ವೆರಿಯಂಟ್ 26.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

1999ನೇ ಇಸವಿಯಲ್ಲಿ ದೇಶದಲ್ಲಿ ಲಾಂಚ್ ಆಗಿದ್ದ ವ್ಯಾಗನಾರ್, ಕಳೆದೊಂದು ದಶಕದಿಂದಲೂ ದೇಶದ ರಸ್ತೆಯಲ್ಲಿ ಸದ್ದು ಮಾಡುತ್ತಿದೆ. ಅಂದ ಹಾಗೆ 2003 ಹಾಗೂ 2006ರಲ್ಲಿ ಫೇಸ್ಲಿಫ್ಟ್ ಆವೃತ್ತಿಗಳು ಲಗ್ಗೆಯಿಟ್ಟಿದ್ದವು. ಈ ಐದು ಸೀಟಿನ ಕಾರು ಹಲವು ವೆರಿಯಂಟ್ಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ ಪವರ್ ಸ್ಟೀರಿಂಗ್ ಜತೆಗೆ ಮ್ಯಾನುವಲ್ ಸ್ಟೀರಿಂಗ್ ಆಯ್ಕೆಯು ಇದೆ.

ಆಧುನಿಕ ಭಾರತದ ಇತಿಹಾಸದಲ್ಲಿ ಕೇಜ್ರಿವಾಲ್ ಬುಲೆಟ್ ಪ್ರೂಪ್ ವಾಹನದ ಬೆಂಬಲವಿಲ್ಲದೆ ಪಯಣಿಸುವ ಸಿಎಂ ಎನಿಸಿಕೊಂಡಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ರಾಜಕೀಯ ನೇತಾರರಿಗೆ ಎಲ್ಲ ಮೂಲದಿಂದಲೂ ಬೆದರಿಕೆಗಳಿವೆ. ಹಾಗಿರುವಾಗ ಕೇಜ್ರಿವಾಲ್ ನಿಜಕ್ಕೂ ದಿಟ್ಟತನದ ನಿರ್ಧಾರ ಕೈಗೊಂಡಿದ್ದರು.


Click it and Unblock the Notifications








