ಕಲಾಂಗೆ ಸಲಾಂ: ಕ್ಷಿಪಣಿಗಳ ಜನಕ, ವಿಜ್ಞಾನಿಯೊಬ್ಬ ರಾಷ್ಟ್ರಪತಿಯಾಗಿ..!
ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮೈಗೂಡಿಸಿ ಬಂದಿರುವ ಭಾರತದ ಮಾಜಿ ರಾಷ್ಟ್ರಪತಿ ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಇಂದು ನಮ್ಮೊಂದಿಗಿಲ್ಲ. ಆದರೆ ಜೀವನದಲ್ಲಿ ಅವರು ಪಾಲಿಸಿಕೊಂಡು ಬಂದ ಆದರ್ಶಗಳು, ನುಡಿಮುತ್ತುಗಳು ಸದಾ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಲಿದೆ.
ನಿಮಗಿದು ಗೊತ್ತೇ?
ಕ್ಷಿಪಣಿ ಹಾಗೂ ರಾಕೆಟ್ ತಂತ್ರಜ್ಞಾನವನ್ನು ತಯಾರಿಸುವ ಮೂಲಕ ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯಾ) ಎಂದೇ ಕೀರ್ತಿ ಪಡೆದಿರುವ ಅಬ್ದುಲ್ ಕಲಾಂ ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಡಿದ ದೇಶದ ಪ್ರಥಮ ರಾಷ್ಟ್ರಪತಿ ಎಂಬ ಗೌರವಕ್ಕೆ ಪಾತ್ರವಾಗಿದ್ದರು.

ಅಬ್ದುಲ್ ಕಲಾಂ ರಾಷ್ಟ್ರಪತಿ ಆಗುವುದಕ್ಕೂ ಮುನ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಇಸ್ರೊದಲ್ಲಿ ವೈಮಾನಿಕ ಎಂಜಿನಿಯರ್ ಆಗಿಯೂ ಕೆಲಸ ಸಲ್ಲಿಸಿದ್ದರು.

ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ 2002 ಜುಲೈ 25ರಂದು ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ್ದ ಕಲಾಂ ಮೇಷ್ಟ್ರು, ಜನಸಾಮಾನ್ಯರ ರಾಷ್ಟ್ರಪತಿಯಾಗಿ ಗುರುತಿಸಿಕೊಂಡಿದ್ದರು.

ಇದಕ್ಕೂ ಮೊದಲು 1997ರಲ್ಲಿ ದೇಶದ ಪರಮೋಚ್ಚ ಭಾರತ ರತ್ನ ಪ್ರಶಸ್ತಿಯಿಂದಲೂ ಗೌರವಿಸಲ್ಪಟ್ಟಿದ್ದ ಅಬ್ದುಲ್ ಕಲಾಂ, 2006ರಲ್ಲಿ ರಾಷ್ಟ್ರಪತಿಯಾಗಿದ್ದಾಗ ಸುಖೋಯ್-30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಡಿದ್ದರು.

74ನೇ ವಯಸ್ಸಿನಲ್ಲಿ ಶಕ್ತಿಶಾಲಿ ಫೈಟರ್ ಜೆಟ್ ನಲ್ಲಿ ಹಾರಾಡಿದ ದೇಶದ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಅಂದು ಕಲಾಂ ನೀಡಿದ ಕೆಲವು ಹೇಳಿಕೆಗಳು ಮುಂದೆ ಉಲ್ಲೇಖಿಸಲಾಗಿದೆ.

"ಸ್ವತ: ಎಂಜಿನಿಯರಿಂಗ್ ಆಗಿರುವ ತನ್ನಲ್ಲಿ ಚಿಕ್ಕವನಿಂದಲೇ ಹುಟ್ಟಿಕೊಂಡಿರುವ ಕನಸು ಇದಾಗಿತ್ತು" ಎಂದು 7.5 ಕೀ.ಮೀ. ಎತ್ತರದಲ್ಲಿ 36 ನಿಮಿಷಗಳ ಸಾಹಸಮಯ ಪಯಣದ ಬಳಿಕ ಕಲಾಂ ಹೇಳಿಕೊಂಡಿದ್ದರು.

ಸುಖೋಯ್ ಯುದ್ಧ ವಿಮಾನವು ಗಂಟೆಗೆ 1,200 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ತಲೆ ಕಳಗಾದ ಹಾರಾಟ ಎಲ್ಲವೂ ಅದ್ಭುತ ಅನುಭವವಾಗಿತ್ತು ಎಂದಿದ್ದರು.

ಇಲ್ಲಿ ಗಮನಾರ್ಹ ಅಂಶವೆಂದರೆ ಕಲಾಂ ಬಹಳ ಹಿಂದೆಯೇ 1958ರಲ್ಲಿ ಭಾರತೀಯ ವಾಯು ಸೇನೆಗೆ ಸೇರುವ ಪ್ರಯತ್ನ ಮಾಡಿದ್ದರು. ಆದರೆ ಪೈಲಟ್ ಆಗುವ ಅಂದಿನ ಅವರ ಕನಸು ವಿಫಲವಾಗಿತ್ತು.

ಪ್ರಸ್ತುತ ಮಹಾನ್ ಚೇತನವು ತಮ್ಮ ನೆಚ್ಚಿನ ವೃತ್ತಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವೇಳೆಯೇ ದಿವಂಗತರಾಗಿದ್ದಾರೆ. ಆದರೆ ಓರ್ವ ವಿಜ್ಞಾನಿಯಾಗಿ ರಾಷ್ಟ್ರಪತಿಯಾಗಿ ದೇಶಕ್ಕೆ ಸಲ್ಲಿಸಿರುವ ಸೇವೆ ಅಪಾರ.


Click it and Unblock the Notifications








