ಆರಿತು ಹಲವು ಮನೆಗಳ ನಂದಾದೀಪ! Air India ವಿಮಾನ ಪತನಕ್ಕೆ ಮುಖ್ಯ ಕಾರಣ ಇದೇನಾ?
ದೇಶದ ಇತಿಹಾಸದಲ್ಲೇ ದೊಡ್ಡ ವಿಮಾನ ದುರಂತವೊಂದು ನಡೆದು ಹೋಗಿದ್ದು, ಎಷ್ಟೋ ಜನರ ಭವಿಷ್ಯದ ಕನಸು ನುಚ್ಚು ನೂರಾಗಿದೆ. ತಮ್ಮ ಆತ್ಮೀಯರನ್ನು ಕಳೆದುಕೊಂಡವರ ದುಃಖವು ಹೇಳತೀರದು. ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನವು ಪತನಗೊಂಡಿದ್ದು, ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ 241 ಮಂದಿ ಇಹಲೋಕ ತ್ಯಜಿಸಿದ್ದಾರೆ ಎಂಬ ವಿವರಗಳು ಲಭ್ಯವಾಗಿವೆ. ಅದೃಷ್ಟವಶಾತ್ ಓರ್ವ ಪ್ರಯಾಣಿಕ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಅಹಮದಾಬಾದ್ನಿಂದ ಮಧ್ಯಾಹ್ನ 1:17ಕ್ಕೆ ಸಂಚಾರ ಆರಂಭಿಸಿದ್ದ 'ಏರ್ ಇಂಡಿಯಾ ಎಐ171' ವಿಮಾನ ಬರೋಬ್ಬರಿ 10 ಗಂಟೆಗಳ ಪ್ರಯಾಣದ ಬಳಿಕ ಲಂಡನ್ಗೆ ಸೇರಿಕೊಳ್ಳಬೇಕಾಗಿತ್ತು. ಆದರೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಶುರು ಮಾಡಿದ ಕೆಲವೇ ಸೆಕೆಂಡುಗಳಲ್ಲಿ ಬಿಜೆ ಮೆಡಿಕಲ್ ಕಾಲೇಜಿನ ಮೆಸ್ ಕಟ್ಟಡಕ್ಕೆ ಡಿಕ್ಕಿಯಾಗಿದೆ. 5 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದೇ ವಿಮಾನದಲ್ಲಿ ಹಲವು ಕನಸುಗಳನ್ನು ಹೊತ್ತು ಲಂಡನ್ಗೆ ತೆರಳಲು 230 ಪ್ರಯಾಣಿಕರು ಟಿಕೆಟ್ನ್ನು ಬುಕ್ ಮಾಡಿದ್ದರು. ಜೊತೆಗೆ ಇಬ್ಬರು ಪೈಲಟ್ಗಳು ಹಾಗೂ 10 ಕ್ಯಾಬಿನ್ ಕ್ರ್ಯೂ ಸಿಬ್ಬಂದಿಗಳು ಇದ್ದರು. ಈ ಪ್ರಯಾಣಿಕರಲ್ಲಿ 169 ಭಾರತ, 53 ಬ್ರಿಟನ್ 7 ಪೋರ್ಚುಗಲ್ ಹಾಗೂ ಒಬ್ಬ ಕೆನಡಾ ಪ್ರಜೆಯು ಸೇರಿದ್ದಾರೆ.
ಈ ಏರ್ ಇಂಡಿಯಾ ವಿಮಾನ ದುರಂತ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ವಿಮಾನ ಪತನಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ಮನಕಲುಕುವ ಈ ದೃಶ್ಯಗಳು ಕಂಡು ಹಲವರ ಕಣ್ಣುಗಳು ಒದ್ದೆಯಾಗಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ವಿಶ್ವ ನಾಯಕರು ಸಹ ಸಂತಾಪ ಸೂಚಿಸಿದ್ದಾರೆ.

ಸದ್ಯ, ಏರ್ ಇಂಡಿಯಾ ವಿಮಾನ ಪತನ ಸಂಬಂಧ ಉನ್ನತ ಮಟ್ಟದ ತನಿಖೆಯು ಆರಂಭಗೊಂಡಿದೆ. ಆದರೆ, ಈ ದುರಂತವು ಏರ್ ಇಂಡಿಯಾ ಹಾರಾಟಕ್ಕಾಗಿ ಬಳಕೆ ಮಾಡಿದ್ದ 'ಬೋಯಿಂಗ್ 787 ಡ್ರೀಮ್ಲೈನರ್' ವಿಮಾನದಿಂದಲೇ ನಡೆದಿದೆ ಎನ್ನಲಾಗಿದೆ. ಅದಕ್ಕೆ ಬೋಯಿಂಗ್ ಕಂಪನಿ ಉದ್ಯೋಗಿಯೊಬ್ಬರು ಕೆಲ ವರ್ಷಗಳ ಹಿಂದೆ, ನೀಡಿದ್ದ ಹೇಳಿಕೆಯೊಂದರ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿದೆ.
ಬೋಯಿಂಗ್ನಲ್ಲಿ ಕ್ವಾಲಿಟಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ಯಾಮ್ ಸಲೆಹ್ಪೋರ್, 777 ಮತ್ತು 787 ಡ್ರೀಮ್ಲೈನರ್ ವಿಮಾನಗಳ ತಯಾರಿಕೆಯಲ್ಲಿ ಅವ್ಯವಹಾರ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಉತ್ಪಾದನಾ ವೆಚ್ಚಗಳನ್ನು ಕಡಿಮೆಗೊಳಿಸಲು ಕಂಪನಿಯು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ವಿಮಾನ ಸಿದ್ಧಪಡಿಸುವಲ್ಲಿ ಒಂದಷ್ಟು ದೋಷಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.
ಏರ್ ಇಂಡಿಯಾ ವಿಮಾನ ದುರಂತ ನಡೆದ ಕೆಲವೇ ಗಂಟೆಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ದುರಂತ ಸ್ಥಳಕ್ಕೆ ತೆರಳಿದ್ದು, ಅವರಿಗೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸಾಥ್ ನೀಡಿದ್ದಾರೆ.
ಇನ್ನು, ಏರ್ ಇಂಡಿಯಾ ವಿಮಾನ ಪತನವು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿದೆ. ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಏರ್ ಇಂಡಿಯಾ ಮಾಲೀಕತ್ವ ಹೊಂದಿರುವ 'ಟಾಟಾ ಗ್ರೂಪ್' ರೂ.1 ಕೋಟಿ ಪರಿಹಾರ ಘೋಷಣೆ ಮಾಡಿದೆ. ಈ ದುರ್ಘಟನೆ ಸಂಬಂಧ ಸರಿಯಾದ ತನಿಖೆಯಿಂದಷ್ಟೇ ಸತ್ಯ ಸತ್ಯತೆ ಹೊರಬೀಳಲಿದೆ.


Click it and Unblock the Notifications








