ಒಲಂಪಿಕ್ ಪದಕ ವಿಜೇತರಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿದ ವಿಮಾನಯಾನ ಕಂಪನಿಗಳು
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಒಲಂಪಿಕ್ ಕ್ರೀಡಾ ಕೂಟವನ್ನು ಆಯೋಜಿಸಲಾಗುತ್ತದೆ. 2020 ರ ಒಲಂಪಿಕ್ ಕ್ರೀಡಾ ಕೂಟವು ಜಪಾನ್'ನ ಟೋಕಿಯೊದಲ್ಲಿ ಕಳೆದ ವರ್ಷ ನಡೆಯ ಬೇಕಾಗಿತ್ತು. ಆದರೆ ಕಳೆದ ವರ್ಷ ಕರೋನಾ ವೈರಸ್ ಮಹಾಮಾರಿ ತನ್ನ ಅಟ್ಟಹಾಸವನ್ನು ತೋರಿದ ಕಾರಣಕ್ಕೆ ಈ ಕ್ರೀಡಾ ಕೂಟವನ್ನು ಮುಂದೂಡಲಾಗಿತ್ತು.

2020 ರ ಒಲಂಪಿಕ್ ಕ್ರೀಡಾಕೂಟವನ್ನು ಕಳೆದ ತಿಂಗಳು ಆಯೋಜಿಸಲಾಗಿತ್ತು. ಕರೋನಾ ವೈರಸ್ ಸಾಂಕ್ರಾಮಿಕ ಹರಡುವ ಭೀತಿಯ ನಡುವೆಯೇ ಜುಲೈ 23 ರಂದು ಜಪಾನ್ನ ಟೋಕಿಯೊದಲ್ಲಿ ಈ ಕ್ರೀಡಾ ಕೂಟ ಆರಂಭವಾಯಿತು. ಸುಮಾರು 1 ವರ್ಷ ತಡವಾಗಿ ಆರಂಭವಾದ ಈ ಕ್ರೀಡಾ ಕೂಟವು ಆಗಸ್ಟ್ 8 ರಂದು ಕೊನೆಗೊಂಡಿತು.

ಈ ಒಲಂಪಿಕ್ಸ್ನಲ್ಲಿ ಭಾರತದ ಅಭಿಯಾನವು ಆಗಸ್ಟ್ 7 ರ ಶನಿವಾರ ಅಂತ್ಯ ಗೊಂಡಿತು. ಭಾರತವು ಈ ಬಾರಿಯ ಒಲಂಪಿಕ್ಸ್ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಪಡೆಯಿತು. ಈ ಮೂಲಕ ಭಾರತವು ಇದೇ ಮೊದಲ ಬಾರಿಗೆ ಒಲಂಪಿಕ್ಸ್ನಲ್ಲಿ ಗರಿಷ್ಠ ಸಂಖ್ಯೆಯ ಪದಕಗಳನ್ನು ಪಡೆಯಿತು.

7 ಪದಕಗಳನ್ನು ಪಡೆಯುವ ಮೂಲಕ ಭಾರತವು ಪದಕ ಪಟ್ಟಿಯಲ್ಲಿ 48 ನೇ ಸ್ಥಾನ ಗಳಿಸಿತು. ಈ ಬಾರಿಯ ಒಲಂಪಿಕ್ಸ್ನಲ್ಲಿ ಭಾರತದ 23 ವರ್ಷದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರು. ಈ ಮೂಲಕ ಭಾರತವು ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು.

ಇನ್ನು ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ರವಿಕುಮಾರ್ ಧಹಿಯಾ 57 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಮೀರಾಬಾಯಿ ಚಾನು 48 ಕೆ.ಜಿ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದರು.

ಬ್ಯಾಡ್ಮಿಂಟನ್ನಲ್ಲಿ ಪಿವಿ ಸಿಂಧು, ಬಾಕ್ಸಿಂಗ್ನಲ್ಲಿ ಲಾವ್ಲಿನಾ ಬಾರ್ಗೋಯಿನ್, ಕುಸ್ತಿಯಲ್ಲಿ ಭಜರಂಗ್ ಪುನಿಯಾ ಹಾಗೂ ಪುರುಷರ ಹಾಕಿ ತಂಡದಿಂದ ಭಾರತಕ್ಕೆ ಕಂಚಿನ ಪದಕಗಳು ಲಭಿಸಿದವು. 2020 ರ ಒಲಂಪಿಕ್ಸ್ನಲ್ಲಿ ಭಾರತ ಗೆದ್ದ ಈ ಪದಕಗಳ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಸಹ ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವು ಉದ್ಯಮಿಗಳು, ಗಣ್ಯ ವ್ಯಕ್ತಿಗಳು ಪದಕ ವಿಜೇತರಿಗೆ ನಾನಾ ರೀತಿಯ ಉಡುಗೊರೆಗಳನ್ನು ಘೋಷಿಸುತ್ತಿದ್ದಾರೆ.

ಇದರಲ್ಲಿ ಗೋ ಫಸ್ಟ್ ಹಾಗೂ ಸ್ಟಾರ್ ಏರ್ ವಿಮಾನಯಾನ ಕಂಪನಿಗಳು ಸಹ ಸೇರಿವೆ. ಈ ಎರಡೂ ಕಂಪನಿಗಳು ಈ ಬಾರಿಯ ಒಲಂಪಿಕ್ಸ್ನ ಪದಕ ವಿಜೇತರಿಗೆ ಉಚಿತ ವಿಮಾನಯಾನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿವೆ.

ಈ ಹಿಂದೆ ಗೋ ಏರ್ ಎಂದು ಕರೆಯಲಾಗುತ್ತಿದ್ದ ಗೋ ಫಸ್ಟ್ ವಿಮಾನ ಯಾನ ಕಂಪನಿಯು 2020 ರ ಒಲಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾ ಪಟುಗಳಿಗೆಮುಂದಿನ 5 ವರ್ಷಗಳ ಕಾಲ ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿದೆ.

ಇದೇ ವೇಳೆ ಮತ್ತೊಂದು ವಿಮಾನಯಾನ ಕಂಪನಿಯಾದ ಸ್ಟಾರ್ ಏರ್, ಒಲಂಪಿಕ್ ಪದಕ ವಿಜೇತರಿಗೆ ತಮ್ಮ ಜೀವಿತಾವಧಿಯವರೆಗೂ ಉಚಿತ ವಿಮಾನಯಾನ ನೀಡಲಾಗುತ್ತದೆ ಎಂದು ಘೋಷಿಸಿದೆ. ಗಮನಾರ್ಹ ಸಂಗತಿಯೆಂದರೆ ಸ್ಟಾರ್ ಏರ್ ಭಾರತೀಯ ಮೂಲದ ವಿಮಾನಯಾನ ಕಂಪನಿಯಾಗಿದೆ.

ಇದರ ಜೊತೆಗೆ ನಾನಾ ರಾಜ್ಯ ಸರ್ಕಾರಗಳೂ ಸಹ ಒಲಂಪಿಕ್ ಪದಕ ವಿಜೇತರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿವೆ. ನಮ್ಮ ಕೆಎಸ್ಆರ್ಟಿಸಿ ಸಂಸ್ಥೆಯು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ನೀರಜ್ ಚೋಪ್ರಾರವರಿಗೆ ಉಚಿತ ಐರಾವತ ಕ್ಲಬ್ ಕ್ಲಾಸ್ ಬಸ್ಸಿನ ಟಿಕೆಟ್'ಗಳನ್ನು ಘೋಷಿಸಿದೆ.

ಅದರಲ್ಲೂ ಭಾರತಕ್ಕಾಗಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಹಲವಾರು ಬಹುಮಾನಗಳನ್ನು ಪಡೆಯುತ್ತಿದ್ದಾರೆ. ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾರವರಿಗೆ ಹರಿಯಾಣ ಸರ್ಕಾರವು ರೂ. 6 ಕೋಟಿ ಬಹುಮಾನ ಘೋಷಿಸಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗೋಲ್ಡನ್ ಬಾಯ್ ನೀರಜ್ ಚೋಪ್ರಾರವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ. ಒಲಂಪಿಕ್ ಟ್ರ್ಯಾಕ್ ಹಾಗೂ ಫೀಲ್ಡ್ ಈವೆಂಟ್ಗಳಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ನೀರಜ್ರವರಿಗೆ ಉದ್ಯಮಿ ಆನಂದ್ ಮಹೀಂದ್ರಾ ಹೊಸ ಕಾರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಈ ಹಿಂದೆ ಅವರು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದ ಯುವ ಕ್ರಿಕೆಟಿಗರಿಗೆ ಹೊಸ ಮಹೀಂದ್ರಾ ಥಾರ್ ಎಸ್ಯುವಿಯನ್ನು ಉಡುಗೊರೆಯಾಗಿ ನೀಡಿದ್ದರು.

ಈಗ ಅವರು ನೀರಜ್ ಚೋಪ್ರಾರವರಿಗೆ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಎಕ್ಸ್ಯುವಿ 700 ಕಾರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಸ್ವತಃ ಆನಂದ್ ಮಹೀಂದ್ರಾರವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.


Click it and Unblock the Notifications