ತಾಯಿಯ ಸಾವಿನ ಸುದ್ದಿ ಕೇಳಿಯೂ ಕರ್ತವ್ಯ ಮುಂದುವರೆಸಿದ ಆಂಬ್ಯುಲೆನ್ಸ್ ಚಾಲಕ
ಉತ್ತರ ಪ್ರದೇಶದ ಮಥುರಾದಲ್ಲಿ ಆಂಬ್ಯುಲೆನ್ಸ್ ಚಾಲಕನೊಬ್ಬ ತನ್ನ ತಾಯಿ ಮೃತಪಟ್ಟಿರುವ ಸುದ್ದಿ ಕೇಳಿಯೂ 15 ಜನ ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಈ ಘಟನೆ ಮೇ 15ರಂದು ನಡೆದಿದೆ.

ಪ್ರಭಾತ್ ಯಾದವ್ ಎಂಬಾತನೇ ತನ್ನ ತಾಯಿಯ ಸಾವಿನ ಸುದ್ದಿ ತಿಳಿದ ನಂತರವೂ ಕಾರ್ಯ ನಿರ್ವಹಿಸಿದ ಆಂಬ್ಯುಲೆನ್ಸ್ ಚಾಲಕ. ಪ್ರತಿ ದಿನವೂ ಬಿಜಿಯಾಗಿರುವ ಅವರು ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಫೋನ್ ಕರೆಗಳನ್ನು ಸ್ವೀಕರಿಸುತ್ತಲೇ ಇರುತ್ತಾರೆ.

ಮೇ 15ರಂದು ಕೇವಲ ಅರ್ಧದಷ್ಟು ಶಿಫ್ಟ್ ಪೂರ್ಣಗೊಂಡಿದ್ದ ವೇಳೆ ಅವರ ತಾಯಿ ತೀರಿಕೊಂಡಿರುವ ಬಗ್ಗೆ ಅವರಿಗೆ ತಿಳಿಸಲಾಯಿತು. ಆದರೆ ಪ್ರಭಾತ್ ಯಾದವ್ ತಮ್ಮ ಶಿಫ್ಟ್ ಪೂರ್ಣಗೊಂಡ ನಂತರವೇ ತಮ್ಮ ತಾಯಿಯ ಅಂತ್ಯಕ್ರಿಯೆಗೆ ಹೋಗಿದ್ದಾರೆ.
MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್ಟಿಒ ಫಾರಂಗಳಿವು!

ಪ್ರಭಾತ್ ಯಾದವ್ ಅವರ ತಾಯಿಯ ಅಂತ್ಯಕ್ರಿಯೆಯನ್ನು ಮಥುರಾದಿಂದ 200 ಕಿ.ಮೀ ದೂರದಲ್ಲಿರುವ ಮೈನ್ಪುರಿಯಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕೂಡಲೇ ಪ್ರಭಾತ್ ಯಾದವ್ ಕೆಲಸಕ್ಕೆ ಮರಳಿದ್ದಾರೆ ಎಂಬುದು ಗಮನಾರ್ಹ.

ಈ ಕುರಿತು ಮಾತನಾಡಿರುವ ಪ್ರಭಾತ್ ಯಾದವ್, ನನ್ನ ತಾಯಿಯ ನಿಧನದ ಸುದ್ದಿ ಕೇಳಿ ನಾನು ಕುಸಿದು ಬಿದ್ದೆ. ಆದರೆ ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು ನನ್ನ ಕೆಲಸವನ್ನು ಮುಂದುವರೆಸಿದೆ.
MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಈ ಸಂಕಷ್ಟದ ಸಂದರ್ಭದಲ್ಲಿ ನಾನು ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಸೋಂಕಿತರ ಜೀವವೂ ಮುಖ್ಯ ಎಂದು ಹೇಳಿದರು. ಪ್ರಭಾತ್ ಯಾದವ್ ಕಳೆದ 9 ವರ್ಷಗಳಿಂದ ಆಂಬ್ಯುಲೆನ್ಸ್ ಚಾಲನೆ ಮಾಡುತ್ತಿದ್ದಾರೆ.

ಈಗ ಅವರಿಗೆ 33 ವರ್ಷ. ಪ್ರಭಾತ್ ಯಾದವ್ 2020ರ ಮಾರ್ಚ್'ನಲ್ಲಿ ಕರೋನಾ ಸೋಂಕಿತರನ್ನು ಸಾಗಿಸುವ ಕಾರ್ಯಕ್ಕೆ ನಿಯೋಜನೆಗೊಂಡರು. ಅಂದಿನಿಂದ ಕಳೆದ ನವೆಂಬರ್'ವರೆಗೆ ಆ ಕೆಲಸವನ್ನು ಮುಂದುವರೆಸಿದ್ದರು.
MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸೋಂಕಿತರ ಸಂಖ್ಯೆ ಕ್ಷೀಣಿಸಲು ಆರಂಭಿಸಿದ ನಂತರ ಅವರು ತಮ್ಮ ಮೂಲ ಕೆಲಸಕ್ಕೆ ಮರಳಿದ್ದರು. ಕರೋನಾ ಸೋಂಕಿತರ ಸಂಖ್ಯೆ ವಿಪರೀತವಾಗಿ ಏರಿಕೆಯಾದ ನಂತರ ಮತ್ತೆ ಈ ವರ್ಷದ ಏಪ್ರಿಲ್'ನಿಂದ ಕೋವಿಡ್ 19 ಸೋಂಕಿತರನ್ನು ಸಾಗಿಸುವ ಕೆಲಸವನ್ನು ಪುನರಾರಂಭಿಸಿದರು.

ಅವರ ತಾಯಿ ಮೃತಪಟ್ಟಿದ್ದರಿಂದ ಕೆಲವು ದಿನಗಳ ಕಾಲ ಮನೆಯಲ್ಲೇ ಉಳಿಯುವಂತೆ ಅಧಿಕಾರಿಗಳು ಪ್ರಭಾತ್ ಯಾದವ್ ಅವರಿಗೆ ತಿಳಿಸಿದ್ದರು. ಆದರೆ ಪ್ರಭಾತ್ ಯಾದವ್ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.
MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಪ್ರಭಾತ್ ಯಾದವ್ ಅವರ ತಾಯಿ ನಿಧನರಾದ ವೇಳೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಭಾತ್ ಯಾದವ್ ಅವರಿಗೆ ಊರಿಗೆ ತೆರಳುವ ವ್ಯವಸ್ಥೆ ಮಾಡಿದ್ದಾರೆ.

ಪ್ರಭಾತ್ ಯಾದವ್ ಅವರ ತಂದೆ ಕಳೆದ ವರ್ಷ ಜುಲೈನಲ್ಲಿ ಕರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಆಗಲೂ ಸಹ ಪ್ರಭಾತ್ ಯಾದವ್ ತಮ್ಮ ತಂದೆಯ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ಪೂರೈಸಿ ಅದೇ ದಿನ ಕೆಲಸಕ್ಕೆ ಮರಳಿದ್ದರು ಎಂಬುದು ಗಮನಾರ್ಹ.
MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಈ ಕುರಿತು ಮಾತನಾಡಿರುವ ಪ್ರಭಾತ್ ಯಾದವ್, ನನ್ನ ತಾಯಿ ತೀರಿಕೊಂಡಿದ್ದಾರೆ. ಆದರೆ ನಾನು ಕೆಲವು ಜನರ ಪ್ರಾಣ ಉಳಿಸಲು ಸಾಧ್ಯವಾದರೆ ನನ್ನ ತಾಯಿ ತುಂಬಾ ಹೆಮ್ಮೆ ಪಡುತ್ತಾರೆ ಎಂದು ಹೇಳಿದ್ದಾರೆ. ಪ್ರಭಾತ್ ಯಾದವ್ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.


Click it and Unblock the Notifications