ಮತ್ತೊಂದು ಜನಪರ ಕ್ರಮ ಕೈಗೊಂಡ ಜಗನ್ ಸರ್ಕಾರ
ಕರೋನಾ ವೈರಸ್ ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಆಂಧ್ರಪ್ರದೇಶವೂ ಒಂದು. ಆಂಧ್ರಪ್ರದೇಶದಲ್ಲಿ 44,000ಕ್ಕೂ ಹೆಚ್ಚು ಜನರಲ್ಲಿ ಕರೋನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ.

ಕರೋನಾ ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಹಾಗೂ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ತುತ್ತಾಗಿರುವ ಜನರಿಗೆ ಸಹಾಯ ಮಾಡಲು ಆಂಧ್ರ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಹಾಗೂ ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿರುವ ಆಂಧ್ರ ಸರ್ಕಾರವು ಸಹಾಯ ಧನವನ್ನು ಸಹ ನೀಡಿದೆ. ಲಾಕ್ ಡೌನ್ ಸಡಿಲಿಸಿದ್ದರೂ ಸಹ ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ.

ಕರೋನಾ ವೈರಸ್ ಸೋಂಕಿನ ಭಯದಿಂದ ಜನರು ಸಾರ್ವಜನಿಕ ಸಾರಿಗೆ ಸೇವೆಗಳಾದ ಬಸ್, ಆಟೋ ಹಾಗೂ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಬದಲಿಗೆ ಜನರು ತಮ್ಮ ಸ್ವಂತ ವಾಹನಗಳಾದ ಕಾರು ಹಾಗೂ ಬೈಕ್ಗಳಲ್ಲಿ ಪ್ರಯಾಣಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಇದರಿಂದಾಗಿ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಜೀವನವು ಸಂಕಷ್ಟಕ್ಕೆ ಸಿಲುಕಿದೆ. ಈ ಕಾರಣಕ್ಕೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ನಾಲ್ಕು ತಿಂಗಳ ಹಿಂದೆ ವೈಎಸ್ಆರ್ ವಾಹನ ಮಿತ್ರ ಯೋಜನೆಗೆ ಚಾಲನೆ ನೀಡಿ, ಈ ಯೋಜನೆಯಡಿ ಸುಮಾರು 2.62 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ ರೂ.10,000 ಸಹಾಯಧನ ನೀಡಿದೆ.

ಇದರ ಜೊತೆಗೆ ಕರೋನಾ ವೈರಸ್ ಸಮಸ್ಯೆಯನ್ನು ನಿಭಾಯಿಸಲು ಹೆಚ್ಚಿನ ಆಂಬುಲೆನ್ಸ್ಗಳ ಅಗತ್ಯವನ್ನು ಮನಗಂಡ ಜಗನ್ ಮೋಹನ್ ರೆಡ್ಡಿರವರು ಕೆಲ ದಿನಗಳ ಹಿಂದಷ್ಟೇ ಸಾವಿರಕ್ಕೂ ಹೆಚ್ಚು ಹೊಸ ಆಂಬುಲೆನ್ಸ್ಗಳನ್ನು ಖರೀದಿಸಿ ಜನರ ಸೇವೆಗೆ ನಿಯೋಜಿಸಿದ್ದರು. ಜಗನ್ ಮೋಹನ್ ರೆಡ್ಡಿರವರ ಈ ಕ್ರಮವು ಇಡೀ ದೇಶದ ಗಮನ ಸೆಳೆಯಿತು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈಗ ಆಂಧ್ರ ಪ್ರದೇಶ ಸರ್ಕಾರವು ಕೋವಿಡ್ -19 ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಬಸ್ಸುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಮಾರ್ಪಡಿಸಿ ಕೋವಿಡ್ -19 ಪರೀಕ್ಷೆಗಳನ್ನು ನಡೆಸುತ್ತಿದೆ. ಹೈ ರಿಸ್ಕ್ ಇರುವ ಪ್ರದೇಶಗಳಲ್ಲಿ ಬಸ್ಗಳನ್ನು ನಿಲ್ಲಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಈ ಮೊದಲು 50 ಬಸ್ಗಳನ್ನು ಕೋವಿಡ್ -19 ಪರೀಕ್ಷೆಗಾಗಿ ನಿಯೋಜಿಸಲಾಗಿತ್ತು. ಈಗ ಮತ್ತೆ ಹೊಸದಾಗಿ 52 ಹೊಸ ಬಸ್ಗಳನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಮೊಬೈಲ್ ಕೋವಿಡ್ -19 ಬಸ್ ಗಳ ಸಂಖ್ಯೆ 102ಕ್ಕೇರಿದೆ. ಈ ಬಸ್ಸುಗಳನ್ನು ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿ, ಸೋಂಕಿತರನ್ನು ಪತ್ತೆ ಹಚ್ಚಿ, ಕ್ವಾರಂಟೈನ್ ಗೆ ಒಳಪಡಿಸುವುದು ಕೋವಿಡ್ -19 ವೈರಸ್ ಅನ್ನು ನಿಯಂತ್ರಿಸುವ ಮುಖ್ಯ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರದ ಕ್ರಮವನ್ನು ಶ್ಲಾಘಿಸಲಾಗುತ್ತಿದೆ.

ಆಂಧ್ರಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ದೊಡ್ಡ ಪ್ರಮಾಣದ ಪರೀಕ್ಷೆಗಳಿಗಾಗಿ 102 ವಿಶೇಷ ಬಸ್ಸುಗಳನ್ನು ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಈ ಬಸ್ಸುಗಳು ಒಂದು ಸಮಯದಲ್ಲಿ 10-12 ಜನರಿಗೆ ಪರೀಕ್ಷೆಗಳನ್ನು ನಡೆಸಲಿವೆ. ಇದರಿಂದಾಗಿ ಜನಸಂದಣಿಯನ್ನು ತಪ್ಪಿಸಬಹುದು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪ್ರತಿ ಬಸ್ನಲ್ಲಿ 10 ಕೌಂಟರ್ಗಳು ಇರುತ್ತವೆ. ಪ್ರತಿ ಕೌಂಟರ್ನಲ್ಲಿಯೂ ಆರೋಗ್ಯ ಕಾರ್ಯಕರ್ತರು ಇರಲಿದ್ದಾರೆ. ಮಾರ್ಪಡಿಸಿದ ಬಸ್ಸುಗಳನ್ನು ನಿಯೋಜಿಸುವುದರ ಹೊರತಾಗಿ, ಕೋವಿಡ್ -19 ವೈರಸ್ ವಿರುದ್ಧ ಹೋರಾಡಲು ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರನ್ನು ನೇಮಿಸಿಕೊಳ್ಳಲು ಆಂಧ್ರಪ್ರದೇಶ ಸರ್ಕಾರವು ಮುಂದಾಗಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿರವರ ಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಎಲ್ಲಾ ರಾಜ್ಯಗಳಿಗೂ ಜಗನ್ ಮೋಹನ್ ರೆಡ್ಡಿರವಂತಹ ಮುಖ್ಯ ಮಂತ್ರಿಗಳು ಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ.


Click it and Unblock the Notifications