ಟ್ರೋಲ್ಗಳಿಗೆ ಸೆಡ್ಡು... ದಕ್ಷಿಣ ಭಾರತಕ್ಕೆ ಮತ್ತೊಂದು Vande Bharat ರೈಲು
ವಂದೇ ಭಾರತ್ ರೈಲುಗಳ ಬಗ್ಗೆ ಈಗಾಗಲೇ ಹಲವು ಟ್ರೋಲ್ಗಳು ವೈರಲ್ ಆಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ಅತ್ಯಾಧುನಿಕ ರೈಲಿಗೆ ಕಲ್ಲು ಹೊಡೆಯುವುದು, ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಪ್ರಚಾರ ಮಾಡುವ ಹಲವು ವಿಡಿಯೋಗಳ ನಡುವೆಯೂ ಭಾರತೀಯ ರೈಲ್ವೆ ತನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿದೆ.
ಭಯಾನಕ ಟ್ರೋಲ್ಗಳು: Vande Bharat ಎಕ್ಸ್ಪ್ರೆಸ್ ರೈಲನ್ನು ಸಾಮಾನ್ಯ ರೈಲು ಎಂಜಿನ್ ಎಳೆದೊಯ್ಯುವ ವಿಡಿಯೋವೊಂದು ಸಖತ್ ವೈರಲ್ ಆದ ಬೆನ್ನಲ್ಲೇ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಫುಲ್ ಟ್ರೋಲ್ ಮಾಡಲಾಗಿತ್ತು. ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಹೊಸ ಮಾರ್ಗವೆಂದು ರೈಲ್ವೆಯನ್ನು ಎಲ್ಲೆಡೆ ಫುಲ್ ಟ್ರೋಲ್ ಮಾಡಿದ್ದರು.

ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಸಾಮಾನ್ಯ ರೈಲು ಎಂಜಿನ್ನಿಂದ ಎಳೆಯುವುದನ್ನು ತೋರಿಸುವ 25 ಸೆಕೆಂಡ್ಗಳ ಈ ವಿಡಿಯೋಗೆ ಜನರು ಕೂಡ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ವಂದೇ ಭಾರತ್ ಡಬಲ್ ಎಂಜಿನ್ ಹೊಂದಿದೆ. ಟಿಕೆಟ್ ಬೆಲೆ ಹೆಚ್ಚಿಸಿ ಹೀಗೆ ಮಾಡಿದ್ರೆ ಇಲಾಖೆಗೆ ಇದು ಸ್ವಲ್ಪ ಮಿತವ್ಯಯಕಾರಿ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದರು.
ಇಲಾಖೆ ಸ್ಪಷ್ಟನೆ: ವಂದೇ ಭಾರತ್ ರೈಲನ್ನು ಸೇವೆಗೆ ತರುವ ಮೊದಲು ಈ ವಿಡಿಯೋವನ್ನು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿತ್ತು. ರೈಲನ್ನು ಆರಂಭದಲ್ಲಿ ಟ್ರ್ಯಾಕ್ಗಳಿಗೆ ಸೇರಿಸಿದಾಗ, ಅದರ ಮಾರ್ಗವನ್ನು ನಿರ್ಧರಿಸುವವರೆಗೆ ಅದನ್ನು ಮತ್ತೊಂದು ಎಂಜಿನ್ನಿಂದ ಎಳೆಯಲಾಗುತ್ತದೆ. ಗೊತ್ತುಪಡಿಸಿದ ಮಾರ್ಗವನ್ನು ತಿಳಿಯುವವರೆಗೆ ಪ್ರಯೋಗಗಳ ಸಮಯದಲ್ಲಿ ರೈಲನ್ನು ಹೀಗೆ ಕಾರ್ಯಚರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ ಬಳಿಕ ಟ್ರೋಲ್ಗಳು ಕಡಿಮೆಯಾಗಿದ್ದವು.

ದಕ್ಷಿಣ ಭಾರತಕ್ಕೆ ಮತ್ತೊಂದು ರೈಲು: ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 6 ರಂದು ತಮಿಳುನಾಡಿನಲ್ಲಿ ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಧಿಕೃತ ಹೇಳಿಕೆಯ ಪ್ರಕಾರ, ರೈಲು ಚೆನ್ನೈ ಮತ್ತು ತಿರುನಲ್ವೇಲಿ ನಡುವೆ ಕಾರ್ಯನಿರ್ವಹಿಸುತ್ತದೆ. ಎಂಟು ಕೋಚ್ಗಳನ್ನು ಹೊಂದಿರುವ ಈ ವಂದೇ ಭಾರತ್ ರೈಲು ತಿರುಚ್ಚಿ ಮತ್ತು ಮಧುರೈ ಸ್ಥಳಗಳಲ್ಲಿ ಮಾತ್ರ ನಿಲ್ಲುತ್ತದೆ.
ಈ ಮಾರ್ಗದಲ್ಲಿ ಪ್ರಯಾಣಿಕರು ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಬರೋಬ್ಬರಿ ಎರಡು ಗಂಟೆಗಳ ಪ್ರಯಾಣ ಸಮಯವನ್ನು ಉಳಿಸಬಹುದಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮಧುರೈನ ವಿಭಾಗೀಯ ವ್ಯವಸ್ಥಾಪಕರು ರೈಲಿನ ನಿರ್ವಹಣಾ ಸೌಲಭ್ಯಕ್ಕಾಗಿ ಸಂಭವನೀಯ ಸ್ಥಳಗಳಿಗಾಗಿ ಕಲ್ಲೂರು, ಪಾಳಯಂಕೊಟ್ಟೈ ಮತ್ತು ಚೇರನ್ಮಹಾದೇವಿ ಸೇರಿದಂತೆ ಮೂರು ರೈಲು ನಿಲ್ದಾಣಗಳನ್ನು ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ.

ಯಶಸ್ವಿಯಾಗಿ ಓಡುತ್ತಿದೆ ಮೊದಲ ರೈಲು: ಇದಕ್ಕೂ ಮುನ್ನ ಏಪ್ರಿಲ್ 8 ರಂದು ಪ್ರಧಾನಿ ಮೋದಿ ಅವರು ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದರು. ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ, ಆಧುನಿಕ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರ ಸೌಕರ್ಯಗಳಿಂದ ಕೂಡಿದ ರೈಲಿಗೆ ಪ್ರಧಾನಮಂತ್ರಿ ಚಾಲನೆ ನೀಡಿದ್ದು, ಸದ್ಯ ಯಶಸ್ವಿಯಾಗಿ ರೈಲು ಓಡುತ್ತಿದೆ.
ಎರಡು ತಮಿಳುನಾಡಿನ ನಗರಗಳನ್ನು ಸಂಪರ್ಕಿಸುವ ಈ ಮೊದಲ ವಂದೇ ಭಾರತ್ ರೈಲು, ಸ್ಥಳೀಯ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ 'ಕವಾಚ್'ನೊಂದಿಗೆ ಎಲ್ಲಾ ಕೋಚ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಆಟೋಮ್ಯಾಟಿಕ್ ಸ್ಲೈಡಿಂಗ್ ಡೋರ್ಗಳೊಂದಿಗೆ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಒಂದು ದೇಶದ ಅಭಿವೃದ್ಧಿಯು ಅಲ್ಲಿನ ಸಾರಿಗೆ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳ ಜೊತೆಗೆ ಉತ್ತಮ ರಸ್ತೆಗಳ ಮೇಲೆ ಆಧಾರಿಸಿರುತ್ತದೆ. ಸದ್ಯ ನಮ್ಮ ರೈಲ್ವೆಗೆ ವಂದೇ ಭಾರತ್ ರೈಲುಗಳು ಹೊಸ ಸೇರ್ಪಡೆಯಾದ್ದರಿಂದ ನಿಧಾನವಾಗಿ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡು ನಿಧಾನವಾಗಿ ಕ್ರಾಂತಿಯನ್ನುಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್, ಭಾರತದ ಸೆಮಿ-ಹೈ-ಸ್ಪೀಡ್ ರೈಲು ಈಗ ದೇಶದಾದ್ಯಂತ ಎಲ್ಲಾ ರೈಲು-ವಿದ್ಯುದ್ದೀಕೃತ ರಾಜ್ಯಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದೆ. ಅತ್ಯಾಧುನಿಕ ಸೌಕರ್ಯಗಳು ಹಾಗೂ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ. ಮುಂದಿನ ದಿನಗಳಲ್ಲಿ ಇದರ ಮುಂದುವರಿದ ಭಾಗವಾಗಿ ಬುಲೆಟ್ ರೈಲುಗಳು ಕೂಡ ಬರಲಿವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ನಲ್ಲಿ ತಿಳಿಸಿ.


Click it and Unblock the Notifications








