ಗರ್ಭಿಣಿಗೆ ನೆರವಾಗಿ ಸಂಕಷ್ಟಕ್ಕೆ ಸಿಲುಕಿದ ಆಟೋ ಡ್ರೈವರ್
ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ 24ರಂದು ಲಾಕ್ ಡೌನ್ ಜಾರಿಗೊಳಿಸಲಾಯಿತು. ಇದರಿಂದಾಗಿ ದಿನ ನಿತ್ಯದ ಆದಾಯವನ್ನು ನಂಬಿ ಬದುಕುತ್ತಿದ್ದವರ ಮೇಲೆ ಗಂಭೀರ ಪರಿಣಾಮ ಉಂಟಾಯಿತು.

ಇವರಲ್ಲಿ ಆಟೋ ಡ್ರೈವರ್ಗಳು ಸಹ ಸೇರಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ಆಟೋ ಚಾಲಕರು ಸುಮಾರು 2 ತಿಂಗಳಿಗಿಂತ ಹೆಚ್ಚು ಕಾಲ ಕೆಲಸವಿಲ್ಲದೇ ಇರಬೇಕಾಯಿತು. ಲಾಕ್ ಡೌನ್ ನಲ್ಲಿ ಸಡಿಲಿಕೆ ನೀಡಿದ ನಂತರ ಆಟೊಗಳ ಸಂಚಾರಕ್ಕೆ ಅನುಮತಿ ನೀಡಲಾಯಿತು. ಆದರೂ ಆಟೋಗಳ ಮೇಲೆ ಸಂಚಾರದ ಮೇಲೆ ಹಲವು ನಿರ್ಬಂಧಗಳಿವೆ. ಭಾರತದಲ್ಲಿ ಇನ್ನೂ ಹಲವಾರು ನಗರಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಕರೋನಾ ಹರಡಬಹುದೆಂಬ ಕಾರಣಕ್ಕೆ ಜನರು ಆಟೋಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ.

ಆಟೋ ಚಾಲಕರ ಗೋಳು ಇಷ್ಟಕ್ಕೆ ಮುಗಿದಿಲ್ಲ. ಮೊದಲೇ ಆದಾಯವಿಲ್ಲದೇ ತತ್ತರಿಸಿರುವ ಆಟೋ ಚಾಲಕರೊಬ್ಬರಿಗೆ ಪೊಲೀಸರು ದಂಡ ವಿಧಿಸಿ ಗಾಯದ ಮೇಲೆ ಬರೆ ಎಳೆದಿದ್ದಾರೆ. ಗರ್ಭಿಣಿಯನ್ನು ಹೆರಿಗೆಗೆಂದು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಈ ಘಟನೆ ನಡೆದಿರುವುದು ತಮಿಳುನಾಡಿನ ಮಧುರೈನಲ್ಲಿ. 40 ವರ್ಷದ ಮಧುರೈನ ಮೇಳನುಪ್ಪನಾಡಿ ನಿವಾಸಿ ಮುತ್ತು ಕೃಷ್ಣನ್ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಲ್ಲಿ ಮುತ್ತು ಕೃಷ್ಣನ್ ಸಹ ಒಬ್ಬರು.

ಯಾವುದೇ ಪರಿಸ್ಥಿತಿಯಿರಲಿ ತಮ್ಮ ಆಟೋದಲ್ಲಿ ಗರ್ಭಿಣಿಯರಿಗೆ ಉಚಿತ ಸೇವೆಯನ್ನು ನೀಡುತ್ತಾರೆ. ಇದೇ ತಿಂಗಳ 8ನೇ ತಾರೀಖಿನಂದು ಅವರ ಮನೆಯ ಹತ್ತಿರವೇ ಇದ್ದ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ನರಳಿದ್ದಾರೆ.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಈ ಬಗ್ಗೆ ಮಾಹಿತಿ ಪಡೆದ ಮುತ್ತು ಕೃಷ್ಣನ್ ಗರ್ಭಿಣಿಯನ್ನು ತಮ್ಮ ಆಟೋದಲ್ಲಿ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಮನೆಗೆ ಹಿಂದಿರುಗಿದ್ದಾರೆ.

ಅವರು ಮನೆಗೆ ಹಿಂತಿರುಗುವ ವೇಳೆಯಲ್ಲಿ ಪೊಲೀಸರು ಗೋರಿಪಾಳ್ಯಮ್ ಎಂಬ ಪ್ರದೇಶದಲ್ಲಿ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಮುತ್ತು ಕೃಷ್ಣನ್ ಅವರಆಟೋವನ್ನು ತಡೆದು ತಪಾಸಣೆ ನಡೆಸಿದ್ದಾರೆ. ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ಆಗುತ್ತಿರುವುದಾಗಿ ಮುತ್ತು ಕೃಷ್ಣನ್ ಪೊಲೀಸರಿಗೆ ತಿಳಿಸಿದ್ದಾರೆ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಆದರೆ ಪೊಲೀಸರು ಅವರ ಮಾತನ್ನು ನಂಬಲಿಲ್ಲ. ಬದಲಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ. ಸಂಕಷ್ಟದಲ್ಲಿದ್ದ ಗರ್ಭಿಣಿಗೆ ನೆರವಾದ ಕಾರಣಕ್ಕೆ ಪೊಲೀಸರು ದಂಡ ವಿಧಿಸಿದ್ದರಿಂದ ಮುತ್ತು ಕೃಷ್ಣನ್ ಎದೆಗುಂದಿದ್ದಾರೆ. ಈ ಕುರಿತು ಅವರು ವೀಡಿಯೊ ಬಿಡುಗಡೆಗೊಳಿಸಿದ್ದಾರೆ.

ಈ ವೀಡಿಯೊ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೊ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದರೆ ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಮುತ್ತು ಕೃಷ್ಣನ್ ಮನವಿ ಮಾಡಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಈ ವೀಡಿಯೊ ವೀಕ್ಷಿಸಿದ ಮಧುರೈ ಮಹಾನಗರ ಪೊಲೀಸ್ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ ತಕ್ಷಣವೇ ತಮ್ಮ ಮೊಬೈಲ್ ಮೂಲಕ ಮುತ್ತು ಕೃಷ್ಣನ್ ಅವರನ್ನು ಸಂಪರ್ಕಿಸಿ ಪೊಲೀಸರ ಪರವಾಗಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಮುತ್ತು ಕೃಷ್ಣನ್ ಅವರಿಂದ ಪಡೆದ ದಂಡವನ್ನು ತಕ್ಷಣವೇ ಹಿಂದಿರುಗಿಸಿ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಸಹ ಹೇಳಲಾಗಿದೆ. ಮಧುರೈ ಪೊಲೀಸ್ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ ಅವರ ಈ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.
ಮೂಲ: ಅಧಿರಾದಿ ಬಷೀರ್
ಸೂಚನೆ: ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications