Bengaluru-Mumbai Highway: ಚಿತ್ರದುರ್ಗ-ದಾವಣಗೆರೆ ಮಧ್ಯೆ 6 ಲೈನ್ ಹೈವೇ.. ಪ್ರಯಾಣ ಸುಲಭ, ಸೈಟ್ ದರಗಳು ಗಗನಕ್ಕೆ!
ಚಿತ್ರದುರ್ಗ (Chitradurga) ಹಾಗೂ ದಾವಣಗೆರೆ (Davanagere) ನಡುವೆ 72 ಕಿಲೋಮೀಟರ್ ಉದ್ದದ ಹೊಸ 6 ಪಥದ ಹೆದ್ದಾರಿಯು ಬಹುತೇಕ ನಿರ್ಮಾಣಗೊಂಡಿದೆ. ಈ ರಸ್ತೆಯಿಂದ ಟೆಕ್ ಹಬ್ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ಪ್ರಯಾಣದ ಅವಧಿಯು ಮತ್ತಷ್ಟು ಇಳಿಕೆಯಾಗಲಿದೆ.
ಈ ಕುರಿತು ಸೋಮವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿರುವ ಹೆದ್ದಾರಿಯ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. '6-ಪಥದ ಚಿತ್ರದುರ್ಗ - ದಾವಣಗೆರೆ ಮಾರ್ಗವು ಬೆಂಗಳೂರು ಮತ್ತು ಮುಂಬೈ ನಡುವಿನ ಜೀವನಾಡಿಯಾಗಿದೆ. ಈ ಮಾರ್ಗವು ಸಮಯ ಹಾಗೂ ಇಂಧನವನ್ನು ಉಳಿಸಲು ನೆರವಾಗಲಿದ್ದು, ಕರ್ನಾಟಕದ ಪ್ರಾಕೃತಿಕ ಸೌಂದರ್ಯದ ಕೊಂಡಿಯಾಗಿದೆ' ಎಂದು ಹೇಳಿದ್ದಾರೆ.

ಹೊಸ ಹೆದ್ದಾರಿ (Highway) ನಿರ್ಮಾಣ ಕಾರ್ಯಗಳು ಮುಕ್ತಾಯಗೊಳ್ಳುವವರೆಗೂ ರೂ.1400 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಭವಿಷ್ಯದ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸಲು ನವೀನ ತಂತ್ರಜ್ಞಾನವನ್ನು ಬಳಸಿ, ಈ ರಸ್ತೆಯನ್ನು ಮಾಡಲಾಗುತ್ತಿದೆ. ಹಲವೆಡೆ ಹೆದ್ದಾರಿ ನಿರ್ಮಾಣದ ಕೆಲಸಗಳು ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಕೆಲವು ಭಾಗಗಳಲ್ಲಿ ಒಂದಷ್ಟು ಕಾಮಗಾರಿಗಳು ನಡೆಯುತ್ತಿವೆ ಎಂಬ ವಿವರಗಳು ಲಭಿಸಿವೆ.
ಈ ರಸ್ತೆಯಿಂದ ಬೆಂಗಳೂರು (Bengaluru) ಹಾಗೂ ಮುಂಬೈ (Mumbai) ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ ಚಿತ್ರದುರ್ಗ ಮತ್ತು ದಾವಣಗೆರೆ ಭಾಗಗಳಲ್ಲಿ ಜಮೀನು ಹಾಗೂ ನಿವೇಶನ ದರಗಳು ಮತ್ತಷ್ಟು ದುಬಾರಿಗೊಳ್ಳುವ ನಿರೀಕ್ಷೆಯಿದ್ದು, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಸಹ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಹೊಂದಿದಲಿವೆ ಎಂದು ಹೇಳಲಾಗಿದೆ.

ಬಹುನಿರೀಕ್ಷಿತ ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇ (Bengaluru Chennai Expressway) ಈ ವರ್ಷಾಂತ್ಯದೊಳಗೆ ಸಿದ್ಧಗೊಳ್ಳಲಿದೆ. ಈ ಹೆದ್ದಾರಿ ನಿರ್ಮಾಣಕ್ಕೆ 2011ರಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ತಡವಾಗಿತ್ತು. 2022ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಈ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಮೂಲಕ ಹಾದುಹೋಗುವ 262 ಕಿಮೀ ಉದ್ದದ ಈ ಹೆದ್ದಾರಿಯಿಂದ ಬೆಂಗಳೂರು ಚೆನ್ನೈ ನಗರಗಳ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈಗಿರುವ 5 ರಿಂದ 6 ಗಂಟೆ ಪ್ರಯಾಣ ಅವಧಿಯು 2 ಗಂಟೆ 30 ನಿಮಿಷಗಳಿಗೆ ಇಳಿಕೆಯಾಗುವ ಸಾಧ್ಯತೆಯಿದೆ. ಹೆದ್ದಾರಿ ನಿರ್ಮಾಣಕ್ಕೆ ಸರಿ ಸುಮಾರು ರೂ.17,000 ಕೋಟಿ ವೆಚ್ಚವಾಗಬಹುದು ಎಂದು ಹೇಳಲಾಗಿದೆ. ನೂತನ ರಸ್ತೆಯು 17 ಫ್ಲೈಓವರ್ಗಳು, 41 ವೆಹಿಕಲ್ ಅಂಡರ್ಪಾಸ್ ಗಳನ್ನು ಹೊಂದಿದೆ.
ಈ ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇಯು ದೇಶದ ಮೊದಲ ಹಸಿರು ಹೆದ್ದಾರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಹೆದ್ದಾರಿ ನಿರ್ಮಾಣಕ್ಕಾಗಿ 33 ಕಿಲೋಮೀಟರ್ ಅರಣ್ಯ ಜಾಗವನ್ನು ಮಾತ್ರ ಉಪಯೋಗಿಸಲಾಗುತ್ತಿದೆ. ನೂತನ ಎಕ್ಸ್ಪ್ರೆಸ್ವೇ ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ. ಪ್ರಸ್ತುತ, 4 ಪಥದ ಹೆದ್ದಾರಿಯಾಗಿರಲಿದ್ದು, ವಾಹನ ದಟ್ಟಣೆಗೆ ತಕ್ಕಂತೆ 8 ಪಥಗಳಿಗೆ ವಿಸ್ತರಿಸಬಹುದು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








