Bengaluru Mysuru Expressway: ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನೆರವಿಗೆ ಹೊಸ ಸಿಸ್ಟಂ: ಭಾರೀ ಮೆಚ್ಚುಗೆ
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ (Bengaluru-Mysuru Expressway)ಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಕ್ಸ್ಪ್ರೆಸ್ವೇಯಲ್ಲಿ ಕಾರುಗಳು ಯಮದೂತ ವೇಗದಲ್ಲಿ ಹೋಗಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಪ್ರತಿದಿನವು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಸುದ್ದಿಯಾಗುತ್ತಿದೆ. ಇದೀಗ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ನೆರವಾಗಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ದಿಟ್ಟ ಹೆಚ್ಚೆ ಇಟ್ಟಿದೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಸೇವ್ ಅವರ್ ಸೋಲ್ (SOS) ಎಂಬ ಬಾಕ್ಸ್ಗಳನ್ನು ಅಳವಡಿಸಿದೆ. ಇವು ಸಣ್ಣ ಕಿಯೋಸ್ಕ್ಗಳಾಗಿದ್ದು ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡುತ್ತವೆ. ಎಕ್ಸ್ಪ್ರೆಸ್ವೇಯಲ್ಲಿ ಸೇವ್ ಅವರ್ ಸೋಲ್ ಬಾಕ್ಸ್ಗಳ ಮೂಲಕ ಸ್ಥಳೀಯ ಅಧಿಕಾರಿಗಳೊಂದಿಗೆ ನೇರ ಸಂವಹನ ಸಾಧಿಸಲು ಸಹಾಯವಾಗುತ್ತದೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಸಣ್ಣ ಹಳದಿ ಬಣ್ಣದ ಕಂಬಗಳಲ್ಲಿ ಸೇವ್ ಅವರ್ ಸೋಲ್ (SOS) ಬಾಕ್ಸ್ಗಳನ್ನು ಇರಿಸಲಾಗಿದೆ.

ಇನ್ನು ಈ ಪಟ್ಟಿಯಲ್ಲಿ SOS ಎಂದು ಬರೆದಿದ್ದಾರೆ. ಹಳದಿ ಬಣ್ಣದ ಈ ಕಂಬಗಳನ್ನು ಸುಲಭವಾಗಿ ಗುರುತಿಸಬಹುದು. ಇನ್ನು ಈ ಸೇವ್ ಅವರ್ ಸೋಲ್ ಬಾಕ್ಸ್ ಹೇಗೆ ಕೆಲಸ ಮಾಡುತ್ತದೆ ಎಂದರೆ, ಎಕ್ಸ್ಪ್ರೆಸ್ವೇಯಲ್ಲಿ ಪ್ರಯಾಣಿಸುವವರಿಗೆ ತುರ್ತು ಪರಿಸ್ಥಿತಿ ಎದುರಾದರೆ ಎಸ್ಒಎಸ್ ಬಾಕ್ಸ್ ಬಳಿ ವಾಹನ ನಿಲ್ಲಿಸಿ ಅದರಲ್ಲಿರುವ ಎಮರ್ಜನ್ಸಿ ಬಟನ್ ಅನ್ನು ಪ್ರೆಸ್ ಮಾಡಬೇಕು. ಆಗ ತಕ್ಷಣ ಇದು ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸುತ್ತದೆ.
ತಕ್ಷಣ ಕಂಟ್ರೋಲ್ ರೂಂ, ಆ್ಯಂಬುಲೆನ್ಸ್ಗಳು ಮತ್ತು ಸಮೀಪದಲ್ಲಿ ಗಸ್ತು ತಿರುಗುವ ಪೊಲೀಸ್ ವಾಹನಗಳಿಗೆ ಮಾಹಿತಿಯನ್ನು ನೀಡುತ್ತದೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್ಒಎಸ್ ಬಾಕ್ಸ್ಗಳನ್ನು ಅಳವಡಿಸಲಾಗಿದೆ. ಇನ್ನು ಅಪಘಾತಕ್ಕೆ ಕಾರಣ ಅತಿ ವೇಗದ ವಾಹನ ಚಾಲನೆ. ಇದರಿಂದ ಎಕ್ಸ್ಪ್ರೆಸ್ವೇಯಲ್ಲಿ ವೇಗದ ವಾಹನ ಚಾಲನೆಯನ್ನು ತಡೆಗಟ್ಟಲು ಪೊಲೀಸರು ಹೊಸ ವಿಧಾನವನ್ನು ತರಲು ಚಿಂತನೆ ನಡೆಸುತ್ತಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವುದರಿಂದ ಇದನ್ನು ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆ ವೇಗವಾಗಿ ವಾಹನ ಚಲಾಯಿಸಿದರೆ ದಂಡ ಬೀಳುವುದು ಪಕ್ಕ. 3 ಲೈನಿಗೆ ಪ್ರತ್ಯೇಕ ವೇಗ ಮಿತಿ ಏರಿಕೆ. 60, 80, 100 ಕಿಮೀ ವೇಗದ ಮಿತಿ ಅಳವಡಿಸಲಾಗಿದೆ. ಮಂಡ್ಯದ ಅಮರಾವತಿ ಬಳಿ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. ಲೈನ್ ಕ್ರಾಸ್ ಮಾಡಿದ್ರೆ ದಂಡ ಕಟ್ಟಬೇಕಾಗುತ್ತೆ.
ಮೊದಲ ಹಂತವಾಗಿ ಮಂಡ್ಯ ಪೊಲೀಸರೇ ದಂಡ ವಸೂಲಿ ಮಾಡುತ್ತಾರೆ. ಕೆಲ ದಿನಗಳಲ್ಲಿ ಫಾಸ್ಟ್ ಟ್ಯಾಗ್ (FASTag) ಮೂಲಕ ದಂಡ ವಸೂಲಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸದ್ಯಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿ ನಡೆಸಿದೆ. ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಬೈಕ್, ಆಟೋ ಹಾಗೂ ಟ್ರಾಕ್ಟರ್ ಗಳ ಸಂಚಾರವನ್ನು ನಿಷೇಧಿಸಿ, ಅಧಿಸೂಚನೆ ಹೊರಡಿಸಿದೆ.
ಆಗಸ್ಟ್ 1ರಿಂದ ಸಂಚಾರ ನಿರ್ಬಂಧ ಆದೇಶ ಜಾರಿಯಾಗಲಿದೆ. ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆ, ಈ ಬಗ್ಗೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಅಂತಿಮವಾಗಿ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ನಿಷೇಧಿಸಲು ತೀರ್ಮಾನಿಸಲಾಗಿದೆ. ಈ ಮೊದಲು, ಬೈಕ್ ಹಾಗೂ ಆಟೋ ಸಂಚಾರಕ್ಕೆ ನಿರ್ಬಂಧ ಹೇರುವ ಕುರಿತಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇನ್ನು ಇತ್ತೀಚೆಗೆ, ಎಕ್ಸ್ಪ್ರೆಸ್ವೇ ಕಾಮಗಾರಿಯನ್ನು ಅವೈಜಾನಿಕವಾಗಿ ಮಾಡಲಾಗಿದೆ ಎಂದು ಟೀಕೆಗೆ ಗುರಿಯಾಗಿದ್ದ ಹೆದ್ದಾರಿ ಪ್ರಾಧಿಕಾರ, ಈ ರಸ್ತೆ ಪರಿಶೀಲನೆಗೆ ವಿಶೇಷ ಸಮಿತಿ ರಚಿಸಿತ್ತು. ಆ ತಂಡ ಸದಸ್ಯರು, ಜುಲೈ 17ರಿಂದ ಜುಲೈ 20ರವರೆಗೆ ಈ ಹೆದ್ದಾರಿಯಲ್ಲಿ ಅಪಘಾತಗಳ ತಡೆಗೆ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಂಡ ಈ ಎಕ್ಸ್ಪ್ರೆಸ್ವೇಯಲ್ಲಿ ನಡೆದ ವಿವಿಧ ಅಪಘಾತಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ.
ಬೆಂಗಳೂರಿನ ಸಮೀಪದ ಪಂಚಮುಖಿ ದೇವಸ್ಥಾನದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್ವರೆಗೆ 118 ಕಿಮೀ ಉದ್ದದ ಈ ಎಕ್ಸ್ಪ್ರೆಸ್ವೇಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೈ ಸ್ಪೀಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಿದೆ. ವಾಹನ ಸವಾರರ ಹಿತದೃಷ್ಟಿಯಿಂದ ಗರಿಷ್ಠ ವೇಗದ ಮಿತಿಗಳು 80 kmph ನಿಂದ 100 kmphಗೆ ಸೀಮಿತಗೊಳಿಸಿದೆ.


Click it and Unblock the Notifications